ಉತ್ತರ ಪ್ರದೇಶ| ಹಳಿಗಳ ಮೇಲೆ ಇರಿಸಿದ್ದ ಸಿಮೆಂಟ್ ಸ್ಲ್ಯಾಬ್‌ಗಳಿಗೆ ಗೂಡ್ಸ್ ರೈಲು ಡಿಕ್ಕಿ

Public TV
1 Min Read

ದೆಹಲಿ: ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ ಬುಧವಾರ ಹಳಿಗಳ ಮೇಲೆ ಇರಿಸಲಾಗಿದ್ದ ಸಿಮೆಂಟ್ ಸ್ಲ್ಯಾಬ್‌ಗಳಿಗೆ ಗೂಡ್ಸ್ ರೈಲೊಂದು ಡಿಕ್ಕಿ ಹೊಡೆದಿದ್ದು, ಭಾರೀ ಅನಾಹುತ ತಪ್ಪಿದೆ.

ರಾಯ್‌ಬರೇಲಿ ಲಕ್ಷ್ಮಣಪುರದಲ್ಲಿ ಈ ಘಟನೆ ಸಂಭವಿಸಿದ್ದು, ಸಮೀಪದ ಹೊಲದಲ್ಲಿ ಇರಿಸಲಾಗಿದ್ದ ಮೂರು ಸಿಮೆಂಟ್ ಸ್ಲ್ಯಾಬ್‌ಗಳನ್ನು ಟ್ರ‍್ಯಾಕ್ ಮೇಲೆ ತಂದಿಟ್ಟಿರುವ ಶಂಕೆ ವ್ಯಕ್ತವಾಗಿದೆ. ಆದರೆ, ಡಿಕ್ಕಿಯ ನಂತರ ಯಾವುದೇ ದೊಡ್ಡ ಅಪಘಾತ ಸಂಭವಿಸಿಲ್ಲ. ಆರ್‌ಪಿಎಫ್ ಉಂಚಹರ್ ತಂಡ ಈ ಬಗ್ಗೆ ತನಿಖೆ ನಡೆಸುತ್ತಿದೆ.

ಕಳೆದ ಒಂದು ತಿಂಗಳಿನಿಂದ, ರೈಲು ಕಾರ್ಯಾಚರಣೆಗೆ ಅಡ್ಡಿಪಡಿಸಲು ರೈಲು ಹಳಿಗಳ ಮೇಲೆ ವಸ್ತುಗಳನ್ನು ಇರಿಸಲಾಗಿರುವ ಘಟನೆಗಳು ಉತ್ತರ ಪ್ರದೇಶ, ಉತ್ತರಾಖಂಡ, ರಾಜಸ್ಥಾನ ಮತ್ತು ಮಧ್ಯಪ್ರದೇಶದಿಂದ ವರದಿಯಾಗಿವೆ. ಉತ್ತರ ಪ್ರದೇಶದ ಲಲಿತ್‌ಪುರ ಜಿಲ್ಲೆಯಲ್ಲಿ ರೈಲು ಹಳಿ ಮೇಲೆ ಕಬ್ಬಿಣದ ಸರಳುಗಳನ್ನು ಇಟ್ಟು ರೈಲನ್ನು ಹಳಿತಪ್ಪಿಸಲು ಯತ್ನಿಸಿದ ಆರೋಪದ ಮೇಲೆ ಪೊಲೀಸರು ಕಳೆದ ವಾರ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದರು.

ಮಧ್ಯಪ್ರದೇಶದ ಬುರ್ಹಾನ್‌ಪುರ ಜಿಲ್ಲೆಯಲ್ಲಿ ಸೇನಾ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ರೈಲನ್ನು ಸ್ಫೋಟಿಸುವ ಪ್ರಯತ್ನದಲ್ಲಿ ರೈಲ್ವೆ ಹಳಿಯಲ್ಲಿ ಕನಿಷ್ಠ 10 ಡಿಟೋನೇಟರ್‌ಗಳು ಪತ್ತೆಯಾಗಿವೆ. ಏತನ್ಮಧ್ಯೆ, ಭೋಪಾಲ್ ಬಳಿಯ ಮಿಸ್ರೋಡ್ ಮತ್ತು ಮಂಡಿದೀಪ್ ನಿಲ್ದಾಣಗಳ ನಡುವೆ ಗೂಡ್ಸ್ ರೈಲಿನ ಮೂರು ವ್ಯಾಗನ್‌ಗಳು ಹಳಿತಪ್ಪಿದವು. ರಾಜಸ್ಥಾನದ ಅಜ್ಮೀರ್ ಜಿಲ್ಲೆಯಲ್ಲಿ ಹಳಿಗಳ ಮೇಲೆ ಸಿಮೆಂಟ್ ಬ್ಲಾಕ್‌ಗಳು ಪತ್ತೆಯಾಗಿದ್ದು, ಗುಜರಾತ್‌ನ ಬೊಟಾಡ್ ಜಿಲ್ಲೆಯಲ್ಲಿ ರೈಲ್ವೆ ಹಳಿ ಮೇಲೆ ಕಬ್ಬಿಣದ ಹಳಿ ತುಂಡನ್ನು ಇರಿಸಿದ್ದಕ್ಕಾಗಿ ಇಬ್ಬರನ್ನು ಬಂಧಿಸಲಾಗಿದೆ.

ಹೆಚ್ಚಿನ ಸಂದರ್ಭಗಳಲ್ಲಿ, ಲೊಕೊಪೈಲಟ್‌ನ ಎಚ್ಚರಿಕೆಯು ದೊಡ್ಡ ಅಪಘಾತಗಳನ್ನು ತಪ್ಪಿಸಿದೆ. ಇದರಿಂದ ಆರ್‌ಪಿಎಫ್ ಮತ್ತು ಜಿಆರ್‌ಪಿ ಪೊಲೀಸರು ರೈಲ್ವೇ ಹಳಿಗಳ ಮೇಲೆ ಕಾಲ್ನಡಿಗೆಯ ಮೂಲಕ ಗಸ್ತು ಹೆಚ್ಚಿಸಿದ್ದಾರೆ.

Share This Article