ಉಕ್ರೇನ್ ವಿದ್ಯಾರ್ಥಿಗಳಿಗೆ ಗುಡ್‍ನ್ಯೂಸ್- ಡಾಕ್ಟರ್ ಆಗುವ ಕನಸಿಗೆ ನೀರೆರದ ಸಿದ್ದಗಂಗಾ

Public TV
1 Min Read

ತುಮಕೂರು: ರಷ್ಯಾ ಉಕ್ರೇನ್ ಯುದ್ಧದಿಂದಾಗಿ ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲಿಸಿ ತಾಯ್ನಾಡಿಗೆ ವಾಪಸ್ ಆದ ವಿದ್ಯಾರ್ಥಿಗಳ ನೆರವಿಗೆ ಸಿದ್ದಗಂಗಾ ಮಠ ಮುಂದಾಗಿದೆ. ಮೆಡಿಕಲ್ ವ್ಯಾಸಂಗ ಅರ್ಧಕ್ಕೆ ಮೊಟುಕುಗೊಳಿಸಿ ಬಂದ ವಿದ್ಯಾರ್ಥಿಗಳಿಗೆ ಮಠದ ಸಿದ್ದಗಂಗಾ ಮೆಡಿಕಲ್ ಕಾಲೇಜಿನಲ್ಲಿ ಉಚಿತವಾಗಿ ಪ್ರಾಕ್ಟಿಕಲ್ ವ್ಯಾಸಂಗ ಮಾಡಲು ತಾತ್ಕಾಲಿಕ ಅವಕಾಶ ಕಲ್ಪಿಸಲಾಗಿದೆ.

ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಸಾವಿರಾರು ವೈದ್ಯ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಳ್ಳಿ ಇಟ್ಟಂತಾಗಿದೆ. ವೈದ್ಯರಾಗುವ ಕನಸು ಕಂಡಿದ್ದ ಸಾವಿರಾರು ವಿದ್ಯಾರ್ಥಿಗಳು ಮುಂದೇನು ಎಂಬ ಚಿಂತೆಯಲ್ಲಿದ್ದಾರೆ. ಈ ನಡುವೆ ತುಮಕೂರಿನ ಸಿದ್ದಗಂಗಾ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳ ನೆರವಿಗೆ ಧಾವಿಸಿದೆ.

ತುಮಕೂರು ಜಿಲ್ಲೆಯ 27 ವೈದ್ಯ ವಿದ್ಯಾರ್ಥಿಗಳ ಕನಸು ನನಸು ಮಾಡಲು ಮುಂದಾಗಿದೆ. 5 ಮತ್ತು 6ನೇ ಸೆಮಿಸ್ಟರ್‍ನ ವಿದ್ಯಾರ್ಥಿಗಳಿಗೆ ಪ್ರಾಕ್ಟಿಕಲ್ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಅಲ್ಲಿನ ಶೈಕ್ಷಣಿಕ ಪಠ್ಯಕ್ಕೆ ತಕ್ಕಂತೆ ಇಲ್ಲಿ ವಿದ್ಯಾರ್ಥಿಗಳಿಗೆ ಪ್ರಾಕ್ಟಿಕಲ್ ಕ್ಲಾಸ್‍ಗಳಲ್ಲಿ ಪಾಲ್ಗೊಳ್ಳಲು ಹಾಗೂ ರೋಗಿಗಳನ್ನು ಪ್ರಾಯೋಗಿಕವಾಗಿ ಪರೀಕ್ಷಿಸಲು ಅವಕಾಶ ನೀಡಲಾಗಿದೆ. ಇದನ್ನೂ ಓದಿ: ಹನುಮಾನ್ ಚಾಲೀಸಾ ನುಡಿಸುವುದು ಒಂದು ದಿನದ ವಿಷಯವಲ್ಲ, ಅದು ಮುಂದುವರಿಯಬೇಕು: ರಾಜ್ ಠಾಕ್ರೆ

ಉಕ್ರೇನ್‍ನಿಂದಲೂ ವಿದ್ಯಾರ್ಥಿಗಳಿಗೆ ಆನ್‍ಲೈನ್ ಕ್ಲಾಸ್ ಮಾಡಲಾಗ್ತಿದೆ. ಆದರೆ ವಿದ್ಯಾರ್ಥಿಗಳು ಪ್ರಾಕ್ಟಿಲ್ ಕ್ಲಾಸ್ ಮಿಸ್ ಮಾಡಿಕೊಳ್ತಿದ್ದಾರೆ. ಇದೀಗ ಸಿದ್ದಗಂಗಾ ಮೆಡಿಕಲ್ ಕಾಲೇಜು ಈ ಕೊರಗನ್ನ ನೀಗಿಸಿದೆ. ವಿದ್ಯಾರ್ಥಿಗಳು ಮಧ್ಯಾಹ್ನದವರೆಗೂ ಆನ್‍ಲೈನ್ ತರಗತಿಯಲ್ಲಿ ಪಾಲ್ಗೊಂಡು ಮಧ್ಯಾಹ್ನದ ನಂತರ ಸಿದ್ದಗಂಗಾ ಮೆಡಿಕಲ್ ಕಾಲೇಜಿನಲ್ಲಿ ಪ್ರಾಕ್ಟಿಕಲ್ ತರಗತಿಗೆ ಹಾಜರಾಗಬಹುದಾಗಿದೆ. ಆರಂಭದ ಮೂರು ತಿಂಗಳು ಉಚಿತವಾಗಿ ಪ್ರಾಕ್ಟಿಕಲ್ ವ್ಯಾಸಾಂಗಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಸಿದ್ದಗಂಗಾ ಆಸ್ಪತ್ರೆ ಎಂ.ಡಿ.ಡಾ. ಪರಮೇಶ್ ತಿಳಿಸಿದ್ದಾರೆ.

ಇಲ್ಲಿ ಪ್ರಾಕ್ಟಿಕಲ್ ಕ್ಲಾಸ್‍ನಲ್ಲಿ ಕಲಿಯುವ ವಿದ್ಯಾರ್ಥಿಗಳು, ಉಕ್ರೇನ್‍ನಲ್ಲೇ ಪರೀಕ್ಷೆ ಬರೆಯಬೇಕಾಗಿದೆ. ಆದ್ರೆ ಅದು ಅಸಾಧ್ಯ. ಹೀಗಾಗಿ ಸ್ಥಳೀಯವಾಗಿಯೇ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ಅವಕಾಶ ಸಿಗಬೇಕಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *