ಶೀಘ್ರದಲ್ಲೇ ರಾಜ್ಯಸರ್ಕಾರದಿಂದ ಬಡವರಿಗೆ ಸಿಗಲಿದೆ ಗುಡ್‍ನ್ಯೂಸ್

Public TV
1 Min Read

ತುಮಕೂರು: ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಡಿಯಲ್ಲಿ ಉಚಿತ ಗ್ಯಾಸ್ ಸಂಪರ್ಕ ಕಲ್ಪಿಸಲು ಸರ್ಕಾರ ಚಿಂತನೆ ಮಾಡಿದ್ದು ಅಧಿಕೃತ ಆದೇಶವಷ್ಟೆ ಬಾಕಿ ಉಳಿದಿದೆ ಎಂದು ಸಚಿವ ಟಿಬಿ ಜಯಚಂದ್ರ ತುಮಕೂರಿನಲ್ಲಿ ಹೇಳಿದ್ದಾರೆ.

ರಾಜ್ಯದ 10 ಲಕ್ಷ ಬಿಪಿಎಲ್ ಕುಟುಂಬಕ್ಕೆ ಉಚಿತವಾಗಿ ಗ್ಯಾಸ್ ಸಂಪರ್ಕ ನೀಡಲು ನಿರ್ಧರಿಸಲಾಗಿದೆ. ಅಡುಗೆ ಸ್ಟೌವ್ ಮತ್ತು ಸಿಲಿಂಡರ್‍ನ್ನು ಉಚಿತವಾಗಿ ಬಡವರಿಗೆ ನೀಡಲಾಗುತ್ತಿದೆ.

ಶೀಘ್ರದಲ್ಲಿ ಈ ಯೋಜನೆ ಜಾರಿಯಾಗಲಿದ್ದು, ಪ್ರತಿ ಕುಟುಂಬಕ್ಕೆ 3 ಸಾವಿರ ರೂ. ಖರ್ಚಾಗುತ್ತದೆ. ಇದಕ್ಕಾಗಿ ರಾಜ್ಯ ಸರ್ಕಾರ 300 ಕೋಟಿ ರೂ. ವ್ಯಯಿಸಲಿದೆ ಎಂದು ಸಚಿವ ಜಯಚಂದ್ರ ಅವರು ಹೇಳಿದರು.

ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳಿಗೆ ಅಡುಗೆ ಅನಿಲ ಸಂಪರ್ಕ (ಎಲ್‍ಪಿಜಿ) ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಆರಂಭಿಸಲಿರುವ ಯೋಜನೆಗೆ `ಮುಖ್ಯಮಂತ್ರಿ ಅನಿಲ ಭಾಗ್ಯ’ ಎಂದು ಹೆಸರಿಡಲಾಗಿದೆ. ಕೇಂದ್ರ ಸರ್ಕಾರದ `ಉಜ್ವಲ’ ಯೋಜನೆಯಡಿ ಅನಿಲ ಸಂಪರ್ಕ ದೊರೆಯದ ಫಲಾನುಭವಿಗಳಿಗೆ ಅನಿಲ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಈ ಯೋಜನೆ ಆರಂಭಿಸಲಾಗಿದೆ.

ಉಜ್ವಲದಲ್ಲಿ ಕೇವಲ ಅನಿಲ ಸಂಪರ್ಕ ಮಾತ್ರ ನೀಡಲಾಗುತ್ತದೆ. ಆದರೆ, ರಾಜ್ಯ ಸರ್ಕಾರದ ಯೋಜನೆಯಲ್ಲಿ ಸ್ಟೌ ಕೂಡಾ ವಿತರಣೆಯಾಗಲಿದೆ. ಆದರೆ ಯಾವುದಾದರೂ ಒಂದು ಯೋಜನೆಯಡಿ ಮಾತ್ರ ಸೌಲಭ್ಯ ಪಡೆದುಕೊಳ್ಳಲು ಅವಕಾಶವಿದೆ. ಉಜ್ವಲದಲ್ಲಿ ಸಂಪರ್ಕ ಪಡೆಯಲು ಇಚ್ಚಿಸದವರು ರಾಜ್ಯ ಸರ್ಕಾರದ ಯೋಜನೆ ಆಯ್ಕೆ ಮಾಡಿಕೊಳ್ಳಬಹುದು ಎಂದು ಈ ಹಿಂದೆ ಆಹಾರ ಸಚಿವ ಯುಟಿ ಖಾದರ್ ತಿಳಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *