2014ರ ಮೆಡಿಸಿನ್ ಗೋಲ್ಮಾಲ್: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾದ ಸರ್ಕಾರ

Public TV
1 Min Read

ರಾಯಚೂರು: ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ 2014ರಲ್ಲಿ ನಡೆದಿದ್ದ ಮೆಡಿಸಿನ್ ಗೋಲ್‍ಮಾಲ್ ಪ್ರಕರಣಕ್ಕೆ ಕೊನೆಗೂ ಜೀವ ಬಂದಿದ್ದು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸರ್ಕಾರ ಮುಂದಾಗಿದೆ.

ಅಂದಾಜು 80 ಲಕ್ಷ ರೂಪಾಯಿ ಔಷಧಿ ಹಾಗೂ ಇತರೆ ಸಲಕರಣೆಗಳ ಅಕ್ರಮ ಸಂಗ್ರಹದಲ್ಲಿ ಭಾಗಿಯಾದ ಜಿಲ್ಲಾ ಆರೋಗ್ಯಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. 2000 ರಿಂದ 2013ರ ವರೆಗೆ ಕಾರ್ಯ ನಿರ್ವಹಿಸಿದ ಐದು ಜನ ಡಿಎಚ್‍ಓಗಳಿಂದ ಹಣ ವಸೂಲಿ ಮಾಡಲು ರಾಜ್ಯ ಆರೋಗ್ಯ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಆದ್ರೆ 80 ಲಕ್ಷ ರೂ. ಅಂತ ಮೊದಲಿಗೆ ಅಂದಾಜಿಸಲಾಗಿದ್ದ ಮೊತ್ತ ಕೇವಲ 6 ಲಕ್ಷಕ್ಕೆ ಇಳಿದಿದೆ. ಐದು ಜನ ಡಿಎಚ್‍ಓ ಗಳಲ್ಲಿ ಡಾ.ಹೀರೇಗೌಡರ್ ಹಾಗೂ ಡಾ.ಬಸವರಾಜ್ ಯಾತಗಲ್ ಈಗಾಗಲೇ ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಡಾ.ಸೂರ್ಯವಂಶಿ ಹಾಗೂ ಡಾ.ಅಪ್ಪಣ್ಣ ನಿವೃತ್ತರಾಗಿದ್ದಾರೆ. ಡಾ.ವೆಂಕಟೇಶ್ ನಾಯಕ್ ಮಾತ್ರ ಸೇವೆಯಲ್ಲಿದ್ದಾರೆ. ಈ ಐದು ಜನರಿಂದ 6 ಲಕ್ಷ ರೂಪಾಯಿ ವಸೂಲಿ ಮಾಡುವಂತೆ ಆಯುಕ್ತರು ಹಾಲಿ ಡಿಎಚ್‍ಓ ಡಾ.ನಾರಾಯಣಪ್ಪ ಅವರಿಗೆ ಸೂಚಿದ್ದಾರೆ.

24*7 ಹೆರಿಗೆ ಆಸ್ಪತ್ರೆಯ ಅಥಿತಿ ಗೃಹದ ಕೊಠಡಿಗಳಲ್ಲಿ ಸುಮಾರು 10 ವರ್ಷಗಳ ಔಷಧಿ ಹಾಗೂ ಚಿಕಿತ್ಸಾ ಸಲಕರಣೆಗಳನ್ನ ಅಕ್ರಮವಾಗಿ ಸಂಗ್ರಹಿಸಿಡಲಾಗಿತ್ತು. 2009ರ ಪ್ರವಾಹ ಪೀಡಿತ ಪ್ರದೇಶದ ಜನರಿಗೆ ಸರ್ಕಾರ ಕಳುಹಿಸಿದ್ದ ಔಷಧಿಯನ್ನೂ ರೋಗಿಗಳಿಗೆ ವಿತರಿಸದೇ ಇರುವ ವಿಚಾರ ಬೆಳಕಿಗೆ ಬಂದಿತ್ತು. ಪ್ರಕರಣ ಬೆಳಕಿಗೆ ಬಂದು ಮೂರು ವರ್ಷಗಳ ಬಳಿಕ ಈಗ ಸರ್ಕಾರ ಎಚ್ಚೆತ್ತು ಕ್ರಮಕ್ಕೆ ಮುಂದಾಗಿದೆ.

 

Share This Article
Leave a Comment

Leave a Reply

Your email address will not be published. Required fields are marked *