ಮುಂಬೈ: ಬಾಲಕನೊಬ್ಬನ ಮೇಲೆ ಏಕಾಏಕಿ ಮೇಕೆಯೊಂದು ದಾಳಿ ನಡೆಸಿದಾಗ ಆತ ಮೃತಪಟ್ಟಿದ್ದಾನೆ. ಆದ್ದರಿಂದ ಸಾವಿಗೆ ಕಾರಣವಾದ ಮೇಕೆಯನ್ನು ಪೊಲೀಸರು ಬಂಧಿಸಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಮುಂಬೈನ ವಿಕ್ರೋಲಿಯ ಇಸ್ಲಾಂಪುರದಲ್ಲಿ ಆರನೇ ತರಗತಿ ಓದುತ್ತಿರುವ ಬಾಲಕ ಮೇಕೆ ದಾಳಿಗೆ ಸಾವನ್ನಪ್ಪಿದ್ದಾನೆ. ಈ ಘಟನೆ ಮೇ 1 ರಂದು ನಡೆದಿತ್ತು. 13 ವರ್ಷದ ಬಾಲಕ ಸರ್ತಾಜ್ ಲಿಯಾಕತ್ ಸ್ನೇಹಿತರ ಜೊತೆ ಆಟವಾಡುತ್ತಿದ್ದನು. ಈ ವೇಳೆ ಮೇಕೆಯೊಂದು ಆತನ ಮೇಲೆ ದಾಳಿ ಮಾಡಿದ ಪರಿಣಾಮ ಸರ್ತಾಜ್ ಗಂಭೀರವಾಗಿ ಗಾಯಗೊಂಡಿದ್ದನು. ಬಳಿಕ ಆಸ್ಪತ್ರೆಯಲ್ಲಿ ಆತನಿಗೆ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಭಾನುವಾರ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಸಾವನ್ನಪ್ಪಿದ್ದಾನೆ.
ಉತ್ತರ ಪ್ರದೇಶದ ಹಳ್ಳಿಯಲ್ಲಿ ಬಾಲಕ ಶಿಕ್ಷಣ ಪಡೆಯುತ್ತಿದ್ದವನು ಬೇಸಿಗೆ ರಜೆಗಾಗಿ ಮುಂಬೈಗೆ ಬಂದಿದ್ದನು. ಆದ್ರೆ ರಜೆಗೆ ಬಂದಿದ್ದ ಬಾಲಕ ಹೆಣವಾಗಿದ್ದಾನೆ. ಅಲ್ಲದೆ ಇಸ್ಲಾಂಪುರದಲ್ಲಿ ಮೇಕಗಳ ಹಾವಳಿ ಹೆಚ್ಚಾಗಿದ್ದು, ಆಗಾಗ ಮನೆ ಹೊರಗಡೆ ಆಟವಾಡುವ ಮಕ್ಕಳ ಮೇಲೆ ದಾಳಿ ನಡೆಸುತ್ತಲೇ ಇರುತ್ತವೆ. ಆದ್ದರಿಂದ ಮೇಕೆಗಳನ್ನು ಸಾಕುವವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸ್ಥಳೀಯರು ಪೊಲೀಸರಿಗೆ ಈ ಹಿಂದೆ ದೂರು ನೀಡಿದ್ದರು. ಆದ್ರೆ ಈ ಬಾರಿ ಮೇಕೆ ದಾಳಿಗೆ ಬಾಲಕ ಮೃತಪಟ್ಟಿದ್ದಾನೆ.
ಈ ಸಂಬಂಧ ಪೊಲೀಸರು ಬಾಲಕನ ಸಾವನ್ನು ಆಕಸ್ಮಿಕ ಸಾವೆಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಾಗೆಯೇ ಮೇಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಮೇಕೆ ಮಾಲೀಕನ ವಿರುದ್ಧ ಸ್ಥಳೀಯರು ಆರೋಪಿಸಿದ್ದು, ಈ ಹಿಂದೆ ಕೂಡ ಮೇಕೆ ದಾಳಿಗೆ ಮಕ್ಕಳು ಗಾಯಗೊಂಡಿದ್ದಾರೆ. ಆದ್ದರಿಂದ ಮೇಕೆ ಮಾಲೀಕನ ವಿರುದ್ಧ ತನಿಖೆಯಾಗಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.