ಬೆಂಗಳೂರು: ಐಟಿ, ಸರ್ಕಾರಿ, ಕೂಲಿ ಕಾರ್ಮಿಕರು, ಚಾಲಕರೆಲ್ಲ ವಾರದಲ್ಲೊಂದು ದಿನ ರಜಾ ತೆಗೆದುಕೊಂಡು ರೆಸ್ಟ್ ಮಾಡುತ್ತಾರೆ. ಆದರೆ ನಮಗೆ ಯಾಕೆ ರಜೆ ಇಲ್ಲಾ ಎಂದು ಇದೀಗ ದೇವರಿಗೆ ಪೂಜೆ ಮಾಡೋ ಪೂಜಾರಿಗಳು ಕೂಡ ವಾರದ ರಜೆ ಬೇಕು ಎಂದು ಸರ್ಕಾರದ ಮುಂದೆ ಹೊಸ ಮನವಿ ಸಲ್ಲಿಸೋಕೆ ರೆಡಿಯಾಗಿದ್ದಾರೆ.
ಪೂಜೆ ಜಪ ಹೋಮ ಹವನ ಎಂದು ದೇವಸ್ಥಾನದ ಅರ್ಚಕರು ಫುಲ್ ಟೈಂ ಬ್ಯುಸಿಯಾಗಿರುತ್ತಾರೆ. ಮುಜರಾಯಿ ದೇವಸ್ಥಾನದ ಅರ್ಚಕರು ಈಗ ವಾರದ ಅಷ್ಟು ಹೊತ್ತು ದೇವರ ಪೂಜೆ ಮಾಡಿ ಸುಸ್ತಾಗಿದ್ದಾರೆ ಅನ್ನಿಸುತ್ತಿದೆ. ಎಲ್ಲರೂ ವಾರಕ್ಕೊಂದು ರಜೆ ತಗೋತಾರೆ. ಆದರೆ ನಮಗ್ಯಾಕೆ ವೀಕ್ಆಫ್ ಇಲ್ಲ. ವಾರದ ಒಂದಿನ ನಮಗೆ ರಜಾ ಬೇಕೆ ಬೇಕು ಎಂದು ಅರ್ಚಕರ ಸಂಘಕ್ಕೆ ಬಹುತೇಕ ಮುಜರಾಯಿ ಅರ್ಚಕರು ಮನವಿ ಮಾಡಿದ್ದು ಸರ್ಕಾರದ ಗಮನ ಸೆಳೆಯಲು ಮುಂದಾಗಿದ್ದಾರೆ.
ಶ್ರೀಮಂತ ಮುಜರಾಯಿ ದೇಗುಲಕ್ಕೆ ಪರ್ಯಾಯ ಅರ್ಚಕರು ಇರೋದರಿಂದ ಸಮಸ್ಯೆಯಾಗಲ್ಲ. ಆದರೆ ಸಿ ಗ್ರೇಡ್, ಬಿ ಗ್ರೇಡ್ ದೇಗುಲದಲ್ಲಿ ಒಬ್ಬೊಬ್ಬರೇ ಅರ್ಚಕರು ಇರೋದ್ರಿಂದ ಕಷ್ಟವಾಗುತ್ತಿದೆ. ಇದಕ್ಕಾಗಿ ರಜೆಗಾಗಿ ಅರ್ಚಕರು ಸರ್ಕಾರದ ಮೊರೆ ಹೋಗಿದ್ದಾರೆ. ಜೊತೆಗೆ ಸರ್ಕಾರ ಬೇರೆ ಈ ಹಿಂದೆ ನೀವು ರಜೆ ಹಾಕಿರುವ ದಿನ ದೇವಸ್ಥಾನದ ಚಿನ್ನಭಾರಣ, ಹುಂಡಿ ಹಣದ ಜವಾಬ್ದಾರಿಯೂ ನಿಮ್ಮದೇ ಎಂದು ಭಯ ಹುಟ್ಟಿಸಿದ್ದಾರೆ. ಇದಕ್ಕಾಗಿ ಬಹಳಷ್ಟು ಅರ್ಚಕರು ಬೇಸರಗೊಂಡಿದ್ದಾರೆ ಎಂದು ಅರ್ಚಕರ ಸಂಘದ ಅಧ್ಯಕ್ಷ ಶ್ರೀವತ್ಸ ತಿಳಿಸಿದ್ದಾರೆ.
ಒಟ್ಟಿನಲ್ಲಿ ಎಲ್ಲರೂ ಮಾಡೋದು ಹೊಟ್ಟೆಗಾಗಿಯೇ. ಹೀಗಾಗಿ ದೇವರ ಪೂಜೆಯೂ ಒಂದು ಕೆಲಸವೇ ಆಗಿದೆ. ನಮಗೆ ರಜೆ ಬೇಕು ಎಂದು ಅರ್ಚಕರ ಹೊಸ ಬೇಡಿಕೆನಾ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ.