ಚಿಕ್ಕಬಳ್ಳಾಪುರ: 17 ವರ್ಷದ ವಧುವಿಗೆ 35 ವರ್ಷದ ವರನೊಂದಿಗೆ ನಡೆಯುತ್ತಿದ್ದ ಮದುವೆಯನ್ನು ಪೊಲೀಸರು ಹಾಗು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಡೆದಿದ್ದಾರೆ.
ಇಂದು ನಗರದ ಕೃಷ್ಣಾ ಟಾಕೀಸ್ ಬಳಿಯ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಈ ಬಾಲ್ಯ ವಿವಾಹ ನಡೆಯುತ್ತಿತ್ತು. ಶನಿವಾರ ರಾತ್ರಿ ಆರತಕ್ಷತೆ ಕಾರ್ಯಕ್ರಮವು ಸಹ ನಡೆದಿತ್ತು. ಬೆಂಗಳೂರು ನಗರದ ಸರ್ಜಾಪುರ ಮೂಲದ ವಧುವಿನೊಂದಿಗೆ ಚಿಕ್ಕಬಳ್ಳಾಪುರದ ವರನ ಮದುವೆ ನಡೆಸಲಾಗುತ್ತಿತ್ತು.
ವಿಷಯ ತಿಳಿದು ಕಲ್ಯಾಣ ಮಂಟಪಕ್ಕೆ ಆಗಮಿಸಿದ ಪೊಲೀಸರು ಮತ್ತು ಅಧಿಕಾರಿಗಳು ಬಾಲ್ಯ ವಿವಾಹ ತಡೆದಿದ್ದಾರೆ. ಕೊನೆಗೆ ವಧು-ವರರ ಪೋಷಕರು ವಧುವಿಗೆ 18 ವರ್ಷ ತುಂಬಿದ ನಂತರ ಅದೇ ವರನ ಜೊತೆ ವಿವಾಹ ಮಾಡುವುದಾಗಿ ಮುಚ್ಚಳಿಕೆ ಪತ್ರವನ್ನು ಬರೆದುಕೊಟ್ಟಿದ್ದಾರೆ.