ಕಲಬುರಗಿ: ಪ್ರೀತಿಸಿ ಮದುವೆ ಆಗಿದ್ದಕ್ಕೆ ಯುವತಿ ಮನೆಯವರು ಯುವಕನ ಮೇಲೆ ಹಲ್ಲೆ ನಡೆಸಿದ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದಲ್ಲಿ ಮಂಗಳವಾರ ಸಂಜೆ ನಡೆದಿದೆ.
ಮಂಜುನಾಥ ಗಾಯಕವಾಡ್ ಹಲ್ಲೆಗೊಳಗಾಗಿ ಆಸ್ಪತ್ರೆ ಸೇರಿದ ಯುವಕ. ಮಂಜುನಾಥ್ ಜೇವರ್ಗಿ ಪಟ್ಟಣದ ನಿವಾಸಿಯಾಗಿದ್ದು, ಒಂದು ವರ್ಷದ ಹಿಂದೆ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದರು. ಅಲ್ಲದೇ ಪ್ರೀತಿಸಿ ಮದುವೆಯಾಗಿ ಇಬ್ಬರು ಬೇರೆ ಕಡೆ ವಾಸವಾಗಿದ್ದರು.
ಮದುವೆಯಾಗಿ ಒಂದು ವರ್ಷದ ನಂತರ ಈಗ ಯುವತಿ ಸಹೋದರರು ಸೇಡು ತೀರಿಸಿಕೊಂಡಿದ್ದಾರೆ. ಮಂಜುನಾಥ್ ಅವರು ಕೆಲಸಕ್ಕೆಂದು ಜೇವರ್ಗಿಗೆ ಹೋಗಿದ್ದರು. ಈ ವೇಳೆ ಯುವತಿಯ ಸಹೋದರರು ಮಂಜುನಾಥ್ ಮೇಲೆ ಹಲ್ಲೆ ನಡೆಸಿದ್ದಾರೆ.
ಅಂತರ್ ಧರ್ಮಿಯ ಮದುವೆ ಆಗಿದ್ದಾರೆ ಎಂಬ ಕಾರಣಕ್ಕೆ ಯುವತಿಯ ಸಹೋದರರು ಮಂಜುನಾಥ್ ಮೇಲೆ ಹಲ್ಲೆ ನಡೆಸಿದ್ದಾರೆ. ಸದ್ಯ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.