ಯುವತಿಯನ್ನು ಚುಡಾಯಿಸಿದ್ದಕ್ಕೆ ಲೈಟ್ ಕಂಬಕ್ಕೆ ಕಟ್ಟಿ ಮಹಿಳೆಯರಿಂದ ಗೂಸಾ!

Public TV
1 Min Read

ಉಡುಪಿ: ಯುವತಿಯನ್ನು ಚುಡಾಯಿಸಿದವನಿಗೆ ಗ್ರಾಮದ ಯುವತಿಯರು ಹಾಗೂ ಮಹಿಳೆಯರು ಧರ್ಮದೇಟು ನೀಡಿದ ಘಟನೆ ಉಡುಪಿಯ ಕುಂದಾಪುರದಲ್ಲಿ ನಡೆದಿದೆ.

ಕುಂದಾಪುರದ ಎಲ್‍ಐಸಿ ಕಾಲೋನಿಯ ಜಾವೇದ್ ಮಹಿಳೆಯರಿಂದ ಗೂಸಾ ತಿಂದ ವ್ಯಕ್ತಿ. ಜಾವೇದ್ ಪ್ರತಿ ದಿನ ಬೆಳಗ್ಗೆ ದಾರಿಯಲ್ಲಿ ಹೋಗುವ ಮಹಿಳೆಯರಿಗೆ ಚುಡಾಯಿಸುತ್ತಿದ್ದನು ಹಾಗೂ ಸೀಟಿ ಹೊಡೆದು ಕಣ್ಸನ್ನೆ ಮಾಡುತ್ತಿದ್ದನು. ಕೆಲವರ ಬಳಿ ಫೋನ್ ನಂಬರ್ ಕೂಡ ಕೇಳುತ್ತಿದ್ದ.

ಜಾವೇದ್‍ನನ್ನು ಕೆಲವು ತಿಂಗಳಿನಿಂದ ಸಹಿಸಿಕೊಂಡಿದ್ದ ಸ್ಥಳೀಯರು ಇಂದು ಸಿಡಿದೆದ್ದಿದ್ದರು. ಜಾವೇದ್‍ನ ಕಾಟ ಜಾಸ್ತಿಯಾದಾಗ ಬೆಳಗ್ಗೆ ದಾರಿಯಲ್ಲಿ ಹೋಗುವ ಯುವತಿಯರು, ಅವರ ತಾಯಂದಿರು ಸೇರಿ ಜಾವೇದ್‍ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ಜಾವೇದ್‍ನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಎರಡೇಟು ಕೊಟ್ಟಿದ್ದಾರೆ.

ಸದ್ಯ ಮಹಿಳೆಯರಿಂದ ಪೆಟ್ಟು ತಿಂದ ಜಾವೇದ್ ಕ್ಷಮೆ ಕೇಳಿದ್ದಾನೆ. ಇನ್ನು ಚುಡಾಯಿಸಲ್ಲ, ಯಾರ ಸುದ್ದಿಗೂ ಬರಲ್ಲ ಅಂತ ಕೈಮುಗಿದು ಅಂಗಲಾಚಿದ್ದಾನೆ. ಅಷ್ಟಕ್ಕೆ ಸುಮ್ಮನಾಗದ ಮಹಿಳೆಯರು ಹಾಗೂ ಯುವತಿಯರು ಹೊಯ್ಸಳ ಪೊಲೀಸರನ್ನು ಸ್ಥಳಕ್ಕೆ ಕರೆಸಿ ಜಾವೆದ್ ನನ್ನು ಒಪ್ಪಿಸಿದ್ದಾರೆ.

ಹೊಯ್ಸಳ ವಾಹನದಲ್ಲಿ ಕುಂದಾಪುರ ನಗರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಜಾವೇದ್‍ನನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಾವೇದ್ ಮನೆ ಕೂಡಾ ಎಲ್‍ಐಸಿ ರಸ್ತೆಯಲ್ಲೇ ಇದೆ. ಪರಿಚಿತರಿಗೇ ಈತ ಕಾಟ ಕೊಡುತ್ತಾನೆ ಎಂಬುದು ಸ್ಥಳೀಯರ ಆರೋಪಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *