ಲಿಫ್ಟ್ ಗೆ ಸಿಲುಕಿ ಎಡಗೈ ಕಟ್ ಆದ್ರೂ 1 ಕಿ.ಮೀ ಓಡಿಕೊಂಡು ಮನೆಗೆ ಬಂದ ಬಾಲಕಿ

Public TV
2 Min Read

ಥಾಣೆ: ಬಾಲಕಿಯೊಬ್ಬಳ ಎಡಗೈ ಲಿಫ್ಟ್ ಗೆ ಸಿಲುಕಿ ತುಂಡಾಗಿದ್ದರೂ ಆಕೆ 1 ಕಿ.ಮೀ ದೂರ ಓಡಿಕೊಂಡು ಮನೆಗೆ ವಾಪಸ್ ಬಂದ ಘಟನೆ ಥಾಣೆಯಲ್ಲಿ ನಡೆದಿದೆ.

ಮಂಗಳವಾರ ಸಂಜೆ 8 ವರ್ಷದ ಬಾಲಕಿ ಅರ್ಚನಾಳ ತಾಯಿ ಮನೆ ಬಾಗಿಲು ತೆಗೆದು ನೋಡಿದಾಗ ಮಗಳ ಮೈಮೇಲೆಲ್ಲಾ ರಕ್ತ ಇದ್ದಿದ್ದು ಕಂಡು ಶಾಕ್ ಆಗಿದ್ರು. ಅಲ್ಲದೆ ಆಕೆಯ ಎಡಗೈ ಕೂಡ ಕಾಣಿಸುತ್ತಿರಲಿಲ್ಲ. ಅರ್ಚನಾ ಅಳುತ್ತಿರಲಿಲ್ಲ. ಬದಲಿಗೆ ಶಾಂತವಾಗಿಯೇ ನಡೆದಿದ್ದನ್ನು ಅಮ್ಮನಿಗೆ ವಿವರಿಸಿದ್ದಳು. ಅರ್ಚನಾ ಟ್ಯೂಷನ್ ಕ್ಲಾಸ್‍ಗೆ ಹೋಗುವ ಥಾಣೆಯ ಕಾಸರವಡಾವ್ಲಿಯ ಕಟ್ಟಡದಲ್ಲಿ ಲಿಫ್ಟ್ ನ ಬಾಗಿಲಿಗೆ ಸಿಲುಕಿ ಕೈ ಕಟ್ ಆಗಿತ್ತು.

ಈ ವಿಷಯವನ್ನ ತಾಯಿಗೆ ತಿಳಿಸಲು ಆಕೆ 1 ಕಿ.ಮೀ ದೂರ ಓಡಿಕೊಂಡು ಮನೆಗೆ ವಾಪಸ್ ಬಂದಿದ್ದಾಳೆ. ಆಸ್ಪತ್ರೆಯಲ್ಲಿ ವೈದ್ಯರು ಕಟ್ ಆದ ಕೈ ಎಲ್ಲಿ ಎಂದು ಕೇಳಿದ ನಂತರವಷ್ಟೇ ಪೋಷಕರು ಕಟ್ಟಡದ ಲಿಫ್ಟ್ ಬಳಿ ಹುಡುಕಲು ಹೋಗಿದ್ದಾರೆ. ದುರಾದೃಷ್ಟವೆಂಬಂತೆ ಅರ್ಚನಾಳ ನರಗಳು ಹಾಗೂ ರಕ್ತನಾಳಗಳಿಗೆ ಗಂಭೀರ ಹಾನಿಯಾಗಿದ್ದು, ಶಸ್ತ್ರಚಿಕಿತ್ಸೆಯಿಂದ ಕೈ ಮರುಜೋಡಣೆ ಮಾಡಲು ಅಸಾಧ್ಯವಾಗಿದೆ. ಅರ್ಚನಾ ನಾಲ್ಕನೇ ತರಗತಿ ವಿದ್ಯಾರ್ಥಿಯಾಗಿದ್ದು, ಥಾಣೆಯ ಆದರ್ಶ ವಿದ್ಯಾ ಮಂದಿರದಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.

ಲಿಫ್ಟ್ ನಲ್ಲಿ ಶೂ ಸಿಕ್ಕಿಹಾಕೊಂಡಿತ್ತು: ಅರ್ಚನಾ ಇತ್ತೀಚೆಗಷ್ಟೇ ಟ್ಯೂಷನ್‍ಗೆ ಸೇರಿಕೊಂಡಿದ್ದಳು. ಲಿಫ್ಟ್ ನ ಸಂದಿಯಲ್ಲಿ ಆಕೆಯ ಪಾದರಕ್ಷೆ ಸಿಲುಕಿಕೊಂಡಿದ್ದು, ಅದನ್ನ ಬಿಡಿಸಿಕೊಳ್ಳಲು ಯತ್ನಿಸಿದಾಗ ಲಿಫ್ಟ್ ಇದ್ದಕ್ಕಿದ್ದಂತೆ ಸ್ಟಾರ್ಟ್ ಆಗಿ ಎಡಗೈ ಸಿಲುಕಿಕೊಳ್ತು ಎಂದು ನಮಗೆ ಹೇಳಿದಳು ಅಂತ ಅರ್ಚನಾಳ ಸಂಬಂಧಿ ನವಿತ್ ಹೇಳಿದ್ದಾರೆ.

ಇಷ್ಟಾದರೂ ಅರ್ಚನಾ ಗಾಬರಿಯಾಗದೇ, ಶಾಂತ ರೀತಿಯಲ್ಲೇ ಘಟನೆಯನ್ನ ವಿವರಿಸಿದ್ದು ನೋಡಿ ಕುಟುಂಬಕ್ಕೆ ಶಾಕ್ ಆಗಿದೆ. ಗೋಧ್‍ಬುಂದರ್ ರಸ್ತೆಯಿಂದ ಕೆಇಎಮ್ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಆಕೆ ಎಚ್ಚರವಾಗೇ ಇದ್ದಳು. ನಮ್ಮೊಂದಿಗೆ ಮಾತಾಡುತ್ತಿದ್ದಳು. ವೈದ್ಯರು ಕೇಳಿದ ನಂತರವಷ್ಟೇ ನಮಗೆ ಆಕೆಯ ಕಟ್ ಆಗಿದ್ದ ಎಡಗೈ ನಮ್ಮ ಬಳಿ ಇಲ್ಲದಿರುವುದು ಗೊತ್ತಾಯಿತು. ಥಾಣೆಯ ನರ್ಸಿಂಗ್ ಹೋಮ್‍ವೊಂದರಲ್ಲಿ ಡ್ರೆಸ್ಸಿಂಗ್ ಮಾಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಕರೆದೊಯ್ಯಲು ವೈದ್ಯರು ಹೇಳಿದ್ರು ಎಂದು ನವಿತ್ ಹೇಳಿದ್ದಾರೆ.

ಅರ್ಚನಾಳ ಎಡಗೈಯಲ್ಲಿ ಮೊಣಕೈಯಿಂದ ಮೇಲ್ಭಾಗಕ್ಕೆ ಆಂಪ್ಯುಟೇಷನ್ ಚಿಕಿತ್ಸೆ ನೀಡಲಾಗಿದೆ. ಈಗ ಆಕೆಯ ಸ್ಥಿತಿ ಸಹಜವಾಗಿದೆ. ಆರ್ಥೋಪೆಡಿಕ್ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ವೈದ್ಯರಾದ ಡಾ. ಅವಿನಾಶ್ ಸುಪೆ ಹೇಳಿದ್ದಾರೆ.

ಕಾಸರವಡಾವ್ಲಿ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ ಡಿಎಸ್ ಧೋಲೆ ಈ ಬಗ್ಗೆ ಮಾತನಾಡಿ, ದೂರು ದಾಖಲಿಸಲು ಬಯಸುತ್ತೀರಾ ಎಂದು ನಾವು ಅವರ ಕುಟುಂಬಕ್ಕೆ ಕೇಳಿದೆವು. ಆದ್ರೆ ಅವರು ನಿರಾಕರಿಸಿದ್ರು. ಇದು ಬಾಲಕಿಯ ತಪ್ಪೇ ಇರಬಹುದು ಎಂದು ಹೇಳಿದ್ರು. ಆದ್ರೆ ನಾವು ಬಾಲಕಿಯ ಹೇಳಿಕೆ ಪಡೆಯಲು ನಮ್ಮ ಅಧಿಕಾರಿಗಳನ್ನ ಆಸ್ಪತ್ರೆಗೆ ಕಳಿಸಿದ್ದೇವೆ ಅಂದ್ರು.

ಕೈ ದಾನ: ಈ ಕಥೆ ಇಷ್ಟಕ್ಕೇ ಮುಗಿಯಲಿಲ್ಲ. ಬಾಲಕಿಯ ಮುರಿದ ಕೈಯನ್ನ ದಾನ ಮಾಡಲು ಕುಟುಂಬಸ್ಥರು ಮುಂದಾಗಿದ್ದಾರೆ. ಬಾಲಕಿಯ ಕೈನ ರಕ್ತನಾಳಗಳಿಗೆ ತೀವ್ರವಾದ ಗಾಯವಾಗಿದ್ರಿಂದ ಅದನ್ನು ಮರುಜೋಡಣೆ ಮಾಡಲು ಸಾಧ್ಯವಿಲ್ಲ. ಆದ್ರೆ ಕಟ್ ಆಗಿರೋ ಕೈಯನ್ನ ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗೆ ಬಳಸಬಹುದು. ಮೂಳೆ ಮತ್ತು ಸ್ನಾಯುಗಳು ಉಪಯೋಗಕ್ಕೆ ಬರುತ್ತದೆ ಎಂದು ವೈದ್ಯರು ತಿಳಿಸಿದ್ದಾಗಿ ಅರ್ಚನಾ ಸಂಬಂಧಿ ಹೇಳಿದ್ದಾರೆ. ಶೀಘ್ರದಲ್ಲೇ ನಾವು ಕೈ ದಾನದ ಎಲ್ಲಾ ಪ್ರಕ್ರಿಯೆ ಮುಗಿಸಲಿದ್ದೇವೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *