ನೀರುಪಾಲಾದ ಬಾಲೆ ಶವವಾಗಿ ಪತ್ತೆ – ಮುಗಿಲುಮುಟ್ಟಿದ ಹೆತ್ತವರ ಆಕ್ರಂದನ

Public TV
1 Min Read

ಉಡುಪಿ: ಮಂಗಳವಾರ ಸಂಜೆ ಮಳೆಯ ಹೊಡೆತಕ್ಕೆ ನೀರುಪಾಲಾದ ಬಾಲಕಿಯ ಮೃತದೇಹ ಇಂದು ಉಡುಪಿ ಜಿಲ್ಲೆ ಕಾಪು ತಾಲೂಕಿನ ಪಡುಬಿದ್ರೆಯಲ್ಲಿ ಪತ್ತೆಯಾಗಿದೆ.

ನಿಧಿ ಆಚಾರ್ಯ(9) ನೀರುಪಾಲಾಗಿದ್ದ ಬಾಲಕಿಯಾಗಿದ್ದು, ಘಟನಾ ಸ್ಥಳದಿಂದ 100 ಮೀ ದೂರದಲ್ಲಿ ನಿಧಿ ಮೃತದೇಹ ಪತ್ತೆಯಾಗಿದೆ. 4ನೇ ವಿದ್ಯಾರ್ಥಿನಿ ನಿಧಿ ಆಚಾರ್ಯ ನೀರುಪಾಲಾಗಿದ್ದಳು. ಕಳೆದ ರಾತ್ರಿ ಅಗ್ನಿಶಾಮಕ, ಪೊಲೀಸರು, ಸ್ಥಳೀಯರು ಕಾರ್ಯಾಚರಣೆ ಮಾಡಿದ್ದರು. ಆದರೆ ಬಾಲಕಿ ನಿಧಿ ಪತ್ತೆಯಾಗಿರಲಿಲ್ಲ.

ಇದೀಗ ಇಂದು ಘಟನಾ ಸ್ಥಳದಿಂದ 100 ಮೀ ದೂರದಲ್ಲಿ ನಿಧಿ ಮೃತದೇಹ ಪತ್ತೆಯಾಗಿದೆ. ಎನ್‍ಡಿಆರ್ ಎಫ್ ಅಧಿಕಾರಿಗಳು ಬಂದು ಶೋಧ ಕಾರ್ಯ ಆರಂಭದಲ್ಲೇ ಮೃತದೇಹ ಸಿಕ್ಕಿದೆ. ಎನ್‍ಡಿಆರ್ ಎಫ್ ಜೊತೆ ಸ್ಥಳೀಯ ಮನೋಹರ್ ಎಂಬವರೂ ಬೋಟ್ ನಲ್ಲಿ ತೆರಳಿದ್ದರು.

ನಿಧಿ ಮೃತದೇಹವನ್ನು ಮನೋಹರ್ ಮೊದಲು ಪತ್ತೆ ಮಾಡಿದರು. ಘಟನೆ ನಡೆದು ಸುಮಾರು 16 ಗಂಟೆಗಳ ಬಳಿಕ ಮೃತದೇಹ ಪತ್ತೆಯಾಗಿದೆ. ಸ್ಕೂಲ್ ಬ್ಯಾಗ್, ಜಾಕೆಟ್ ಕೂಡಾ ಸ್ಥಳದಲ್ಲೇ ಸಿಕ್ಕಿದೆ. ಕಳೆದ ರಾತ್ರಿ ಸೈಕಲ್ ಪತ್ತೆಯಾಗಿತ್ತು. ಈ ಸಂಬಂಧ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಾಲಕಿ ಮೃತದೇಹವನ್ನು ಪಡುಬಿದ್ರೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಮಂಗಳವಾರ ಸಂಜೆ ನಿಧಿ ಕೃತಕ ನೆರೆಗೆ ನೀರು ಪಾಲಾಗಿದ್ದು, ಶಾಲೆ ಬಿಟ್ಟು ಮನೆಗೆ ತೆರಳುವ ವೇಳೆ ಈ ಘಟನೆ ಸಂಭವಿಸಿತ್ತು.

Share This Article
Leave a Comment

Leave a Reply

Your email address will not be published. Required fields are marked *