ಮೈಮೇಲೆ ಪೆಟ್ರೋಲ್ ಸುರಿದುಕೊಂಡು ರೈಲಿಗೆ ಸಿಲುಕಿ ಯುವತಿ ಆತ್ಮಹತ್ಯೆ!

Public TV
2 Min Read

ಬೆಳಗಾವಿ: ಮೈಮೇಲೆ ಪೆಟ್ರೋಲ್ ಸುರಿದು, ಬೆಂಕಿಹಚ್ಚಿಕೊಂಡು ರೈಲಿಗೆ ಸಿಲುಕಿ ಯುವತಿಯೋರ್ವಳು ಆತ್ಯಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿಯ ಟಿಳಕವಾಡಿಯಲ್ಲಿ ನಡೆದಿದೆ.

18 ವರ್ಷದ ಸಂಜನಾ ಚಂದ್ರಕಾಂತ ಅಂಗ್ರೋಳಕರ್ ಆತ್ಮಹತ್ಯೆ ಮಾಡಿಕೊಂಡ ಯುವತಿ. ಮಿರಜದಿಂದ ಹುಬ್ಬಳ್ಳಿ ಕಡೆ ಹೊರಟಿದ್ದ ರೈಲು ನಂಬರ್ 51419 ಟಿಳಕವಾಡಿ ಮೊದಲ ರೈಲ್ವೆ ಗೇಟ್ ಬಳಿ ಬಂದಾಗ ಈ ಘಟನೆ ನಡೆದಿದೆ.

ರೈಲು ಗೇಟ್‍ನಿಂದ ಮುಂದೆ ಸಾಗುತ್ತಿದ್ದಂತೆ ಒಂದು ರೈಲ್ವೇ ಟ್ರ್ಯಾಕಿನಲ್ಲಿ ಬೆಂಕಿ ಕಾಣಿಸಿತು. ತಕ್ಷಣ ನಾನು ಮುಂದೆ ಹೋಗಿ ನೋಡಿದಾಗ ಅಲ್ಲಿ ಒಂದು ಶವದ ತಲೆಯ ಮುಂಭಾಗ ಹಾಗೂ ಒಂದು ಕಾಲು ರೈಲಿನ ಚಕ್ರಕ್ಕೆ ಸಿಲುಕಿತ್ತು. ಆ ಶವ ಹೊತ್ತಿ ಉರಿಯುತ್ತಿತ್ತು. ತಕ್ಷಣ ನಾನು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದೆ ಎಂದು ಪ್ರತ್ಯಕ್ಷದರ್ಶಿಯಾದ ಗೇಟ್ ಕೀಪರ್ ಹೇಳಿದ್ದಾರೆ.

ಮನೆಯಿಂದ ಬರುವಾಗಲೆ ದೃಢ ನಿರ್ಧಾರ ಮಾಡಿದ್ದ ಸಂಜನಾ ಎರಡು ಬಾಟಲಿ ಪೆಟ್ರೋಲ್ ತುಂಬಿಕೊಂಡು ಯಾರಿಗೂ ಕಾಣದ ಹಾಗೆ ರೈಲು ಹಳಿಯ ಪಕ್ಕ ನಿಂತಿಕೊಂಡಿದ್ದಾಳೆ. ಯಾವಾಗ ಪ್ಯಾಸೆಂಜರ್ ರೈಲು ಬರುತ್ತಿರೋದು ಅವಳ ಕಣ್ಣಿಗೆ ಬಿತ್ತೋ ಅದೇ ಸಮಯಕ್ಕೆ ಆಕೆ ತನ್ನ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಹಳಿಯ ಮೇಲೆ ಹಾರಿದ್ದಾಳೆ. ಒಂದು ವೇಳೆ ರೈಲಿಗೆ ಸಿಲುಕಿ ಪ್ರಾಣ ಹೊಗದಿದ್ದರೂ ಕಡೆ ಪಕ್ಷ ಬೆಂಕಿಯಿಂದಾದರೂ ಪ್ರಾಣ ಹೋಗಬೇಕು ಎಂದು ಈ ರೀತಿ ಮಾಡಿರಬಹುದು ಎಂದು ಡಿಸಿಪಿ ಅಮರನಾಥ ರೆಡ್ಡಿ ತಿಳಿಸಿದ್ದಾರೆ. ಮಾಹಿತಿ ತಿಳಿದ ತಕ್ಷಣ ಟಿಳಕವಾಡಿ ಪೊಲೀಸ್ರು ಹಾಗೂ ಎಸಿಪಿ ಜಯಕುಮಾರ ಸ್ಥಳಕ್ಕೆ ಧಾವಿಸಿದ್ದು, ಪ್ರಥಮ ಮಾಹಿತಿ ಪಡೆದ ಬಳಿಕ ಪ್ರಕರಣವನ್ನು ರೈಲ್ವೆ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಆತ್ಮಹತ್ಯೆಗೆ ಕಾರಣ?: ಸಂಜನಾ ಮೊದಲಿನಿಂದಲೂ ಮಾಂಸಾಹಾರ ಪ್ರಿಯಳು. ಟ್ಯೂಬರ್‍ಕ್ಯುಲೋಸಿಸ್ ಕಾಯಿಲೆಯಿಂದ ಬಳಲುತ್ತಿರುವ ಸಂಜನಾಗೆ ಈ ಮೊದಲು ಒಂದು ಸರ್ಜರಿ ಆಗಿತ್ತು. ಇತ್ತೀಚಿನ ದಿನಗಳಲ್ಲಿ ಸಂಜನಾ ಮಾಂಸಾಹಾರ ಊಟ ಮಾಡಿದರೆ ತಕ್ಷಣ ವಾಂತಿಯಾಗುತ್ತಿತ್ತು. ಮಾಂಸಾಹಾರ ಸಂಪೂರ್ಣವಾಗಿ ತ್ಯಜಿಸಬೇಕೆಂದು ವೈದ್ಯರು ಸಲಹೆ ಮಾಡಿದ್ದರು. ಇದರಿಂದ ಆಕೆ ಮನನೊಂದು ಈ ನಿರ್ಧಾರ ಕೈಗೊಂಡಿರಬಹುದು ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ. ಮರಾಠಾ ಮಂಡಳ ಕಾಲೇಜಿನಲ್ಲಿ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೆಶನ್ ಡಿಪ್ಲೋಮಾ ಪದವಿ ಪಡೆದು ಉನ್ನತ ಭವಿಷ್ಯ ರೂಪಿಸಿಕೊಳ್ಳಬೇಕಾಗಿದ್ದ ಸಂಜನಾ ಏಕಾಏಕಿ ಈ ನಿರ್ಧಾರ ಕೈಗೊಂಡಿರುವುದರಿಂದ ಇದೀಗ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

ಸ್ಥಳಿಯ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಆರಂಭವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *