ಇಂಜಿನಿಯರ್ ಕನಸು ಹೊತ್ತ ಯುವತಿ ಫೇಸ್‍ಬುಕ್ ಪ್ರೀತಿಗೆ ಬಲಿ!

Public TV
2 Min Read

ಗದಗ: ಇಂಜಿನಿಯರ್ ಕನಸು ಹೊತ್ತಿದ್ದ ಯುವತಿ ಫೇಸ್‍ಬುಕ್ ಪ್ರೀತಿಗೆ ಬಲಿಯಾದ ಘಟನೆ ಗದಗ ನಗರದ ಹುಡ್ಕೋ ಬಡಾವಣೆಯಲ್ಲಿ ನಡೆದಿದೆ.

ಸ್ಫೂರ್ತಿ (19) ಆತ್ಮಹತ್ಯೆ ಮಾಡಿಕೊಂಡ ಯುವತಿ. ಸ್ಫೂರ್ತಿ ಎರಡನೇ ಸೆಮಿಸ್ಟರ್ ಇಂಜಿನಿಯರಿಂಗ್ ಓದುತ್ತಿದ್ದಳು. ಅಲ್ಲದೆ ಪ್ರೀತಿ, ಪ್ರೇಮ ಎನ್ನುವ ಯುವಕ, ಯುವತಿಯರಿಗೆ ಬುದ್ಧಿ ಹೇಳುತ್ತಿದ್ದಳು. ಆದರೆ ಆಕೆಯೇ ಫೇಸ್‍ಬುಕ್ ಪ್ರೀತಿಗೆ ಬಲಿಯಾಗಿದ್ದಾಳೆ.

ಪ್ರೀತಿ ಆಗಿದ್ದು ಹೇಗೆ?
ಆಂಧ್ರ ಪ್ರದೇಶ ನೆಲ್ಲೂರ ಜಿಲ್ಲೆಯ ಗುಡೂರ ಪಟ್ಟಣದ ಯುವಕ ಚೈತನ್ಯ ಫೇಸ್‍ಬುಕ್‍ನಲ್ಲಿ ಹಾಕಿದ ಫೋಟೋಗೆ, ಸ್ಫೂರ್ತಿ ಲೈಕ್ ಮಾಡಿದ್ದಾಳೆ. ಹೀಗಾಗಿ ಇಬ್ಬರ ನಡುವೆ ಫೇಸ್‍ಬುಕ್‍ನಲ್ಲಿ ಪರಸ್ಪರ ಮೆಸೇಜ್ ಮೂಲಕ ಆರಂಭವಾದ ಗೆಳೆತನ ಪ್ರೀತಿಗೆ ತಿರುಗಿದೆ. ಫೇಸ್‍ಬುಕ್‍ನಲ್ಲಿ ಚೈತನ್ಯ ತಾನು ರೈಲ್ವೇ ಉದ್ಯೋಗಿ ಎಂದು ಹಾಕಿಕೊಂಡಿದ್ದನು. ಚೈತನ್ಯ ಹಾಗೂ ಸ್ಫೂರ್ತಿ ಇಬ್ಬರು ಒಂದು ವರ್ಷದಿಂದ ಪ್ರೀತಿಸುತ್ತಿದ್ದರು.

ಮೋಸ ಬೆಳಕಿಗೆ ಬಂತು:
ಚೈತನ್ಯ, ಸ್ಫೂರ್ತಿಯನ್ನು ಆಂಧ್ರಪ್ರದೇಶದ ಗುಡೂರಿಗೆ ಕರೆದುಕೊಂಡು ಹೋಗಿದ್ದನು. ಈ ವೇಳೆ ಚೈತನ್ಯ ಗೂಡೂರಿನಲ್ಲಿ ಬೇರೆಯವರ ಕಾಂಪ್ಲೆಕ್ಸ್, ಮನೆ ತೋರಿಸಿ ಇದು ನಮ್ಮದೇ ಎಂದು ಸುಳ್ಳು ಹೇಳಿದ್ದಾನೆ. ಸ್ಫೂರ್ತಿ ಕೂಡ ಚೈತನ್ಯ ಹೇಳುತ್ತಿರುವುದು ನಿಜ ಎಂದು ನಂಬಿದ್ದಳು. ಆಂಧ್ರಪ್ರದೇಶದ ಗುಡೂರಗೆ ಹೋಗಿ ಬಂದ ಬಳಿಕ ಚೈತನ್ಯನ ವರ್ತನೆಯೇ ಬದಲಾಗಿತ್ತು. ಅಲ್ಲದೆ ಆತನಿಗೆ ಪದೇ ಪದೇ ಪತ್ನಿಯ ಕರೆ ಬರುತ್ತಿತ್ತು. ಆಗ ಸ್ಫೂರ್ತಿಗೆ ಅನುಮಾನ ಬಂದು ಪ್ರಶ್ನಿಸಿದ್ದಾಳೆ. ಆದರೆ ಚೈತನ್ಯ, ಸ್ಫೂರ್ತಿಗೆ ಸರಿಯಾಗಿ ಸ್ಪಂದಿಸುತ್ತಿರಲಿಲ್ಲ.

ಆಂಧ್ರದ ಗುಡೂರಿಗೆ ಹೋಗಿ ಬಂದ ವಾರದ ಬಳಿಕ ಚೈತನ್ಯಗೆ ಮದುವೆ ಆಗಿ ಎರಡು ಮಕ್ಕಳಾಗಿದೆ ಎಂಬ ವಿಷಯ ಸ್ಫೂರ್ತಿಗೆ ತಿಳಿದಿದೆ. ಅಲ್ಲದೆ ಚೈತನ್ಯ ವರ್ತನೆ ಕೂಡ ಬದಲಾಗಿತ್ತು. ಅಲ್ಲದೆ ಸ್ಫೂರ್ತಿ ಫೋನ್ ಮಾಡಿದ್ರು ಸರಿಯಾಗಿ ಸ್ಪಂದಿಸುತ್ತಿರಲಿಲ್ಲ. ಇದರಿಂದ ಬೇಸರಗೊಂಡ ಸ್ಫೂರ್ತಿ ಏಪ್ರಿಲ್ 4ರಂದು ತನ್ನ ಮನೆಯಲ್ಲಿ ಯಾರು ಇಲ್ಲದ್ದ ವೇಳೆ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಗೊತ್ತಾಗಿದ್ದು ಹೇಗೆ?
ಸ್ಫೂರ್ತಿ ಆತ್ಮಹತ್ಯೆಗೆ ಶರಣಾಗುವ ಮೊದಲು ತಾನು ಚೈತನ್ಯನನ್ನು ಪ್ರೀತಿ ಮಾಡಿ ಮೋಸ ಹೋದ ವಿಚಾರವನ್ನು ಪೋಷಕರಿಗೆ ತಿಳಿಸಿದ್ದಾಳೆ. ಮೋಸ ಹೋದ ಬಳಿಕ ಸ್ಪೂರ್ತಿ ಮಾನಸಿಕವಾಗಿ ಕುಗ್ಗಿದ್ದಳು. ಇದೇ ನೋವಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಈ ಬಗ್ಗೆ ಗದಗ ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಚೈತನ್ಯನನ್ನು ಪೊಲೀಸರು ಬಂಧಿಸಿದ್ದಾರೆ. ಮಗಳಿಗೆ ಮೋಸ ಮಾಡಿದವನಿಗೆ ಶಿಕ್ಷೆ ಆಗಬೇಕು ಎಂದು ಯುವತಿಯ ಪೋಷಕರು ಒತ್ತಾಯಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *