ಮ್ಯಾಟ್ರಿಮೋನಿಯ ಬೆಳದಿಂಗಳ ಬಾಲೆ ಹಿಂದೆ ಬಿದ್ದು ಮೋಸ ಹೋದ ಖಾಸಗಿ ಕಂಪೆನಿ ಉದ್ಯೋಗಿ

Public TV
1 Min Read

ಬೆಂಗಳೂರು: ಮ್ಯಾಟ್ರಿಮೋನಿಯನ್ನು ನಂಬಿ ಖಾಸಗಿ ಕಂಪೆನಿ ಉದ್ಯೋಗಿಯೊಬ್ಬರು ಮೋಸ ಹೋಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಧನಂಜಯ್ ವಂಚನೆಗೊಳಗಾದ ವ್ಯಕ್ತಿ. ಧನಂಜಯ್ ಬ್ರಾಹ್ಮಿಣಿ ಮ್ಯಾಟ್ರಿಮೋನಿಯಲ್ಲಿ ರಿಜಿಸ್ಟರ್ ಆಗಿದ್ದರು. ಅದರಲ್ಲಿ ಶಿಲ್ಪಾ ಎಂಬ ಯುವತಿ ಜೊತೆ ಸ್ನೇಹ ಬೆಳೆಸಿಕೊಂಡಿದ್ದರು. ಬಳಿಕ ಪ್ರೇಮಾಂಕುರವಾಗಿ ಶಿಲ್ಪಾಳನ್ನೇ ಮದುವೆಯಾಗಲು ಧನಂಜಯ್ ನಿರ್ಧರಿಸಿದ್ದರು.

ಶಿಲ್ಪಾ ಮತ್ತು ಧನಂಜಯ್ ಪರಸ್ಪರ ಮದುವೆಗೆ ಒಪ್ಪಿಕೊಂಡಿದ್ದರು. ಆದ್ರೆ ನಂತರ ಶಿಲ್ಪಾ ಧನಂಜಯ್ ರನ್ನು ಪುಸಲಾಯಿಸಿದ್ದಳು. “ನನ್ನ ಸಹೋದರನಿಗೆ ಆಪರೇಷನ್ ಮಾಡಿಸಬೇಕಿದೆ. ನನ್ನ ಬಳಿ ಹಣವಿಲ್ಲ, ಹಣ ನೀಡಿ” ಎಂದು ಧನಂಜಯ್ ಬಳಿ ಅಳಲು ತೋಡಿಕೊಂಡಿದ್ದಳು.

ಶಿಲ್ಪಾಳ ಬಣ್ಣದ ಮಾತನ್ನ ನಂಬಿದ ಧನಂಜಯ್, 3 ಲಕ್ಷ 45 ಸಾವಿರ ರೂ. ಹಣ ನೀಡಿದ್ದರು. ವಿವಿಧ ದಿನಾಂಕದಂದು ಶಿಲ್ಪಾರ ಅಕೌಂಟ್‍ಗೆ ಹಣ ಜಮಾ ಮಾಡಿದ್ದರು. ಇದಾದ ಕೆಲ ದಿನಗಳ ಬಳಿಕ ಹಣವೂ ಇಲ್ಲ, ಬೆಳದಿಂಗಳ ಬಾಲೆಯೂ ಇಲ್ಲ ಎಂಬುದು ಧನಂಜಯ್‍ಗೆ ತಿಳಿಯಿತು. ಶಿಲ್ಪಾ ಹಣ ಪಡೆದು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾಳೆ.

ಘಟನೆ ನಡೆದ ಬಳಿಕ ನ್ಯಾಯ ಕೊಡಿಸುವಂತೆ ಧನಂಜಯ್ ಪೊಲೀಸರ ಮೊರೆ ಹೋಗಿದ್ದಾರೆ. ಶಿಲ್ಪಾಳನ್ನು ಹುಡುಕಿ ಸೂಕ್ತ ಕ್ರಮಕೈಗೊಳ್ಳುವಂತೆ ಗಿರಿನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕುರಿತು ಗಿರಿನಗರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *