ಹಾವೇರಿ: ಆತ ಯುವತಿಯನ್ನ ಪ್ರೀತಿ ಮಾಡಿ ದೇವಸ್ಥಾನದಲ್ಲಿ ತಾಳಿ ಕಟ್ಟಿದ್ದ. ಆದರೆ ನಂಬಿ ಬಂದವಳನ್ನು ನಡುನೀರಲ್ಲಿ ಕೈಬಿಟ್ಟು ಹೋದ. ಈಗ ಯುವಕನಿಂದ ಮೋಸ ಹೋದ ಯುವತಿ ನನಗೆ ನ್ಯಾಯ ಕೊಡಿಸಿ ಎಂದು ಅಂಗಲಾಚುತ್ತಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ನೊಂದ ಯುವತಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಇಟಗಿ ಗ್ರಾಮದವರು. ಕೆಲ ತಿಂಗಳ ಹಿಂದೆ ಈಕೆಗೆ ನಗರದಲ್ಲಿ ಆಟೋರಿಕ್ಷಾ ಓಡಿಸಿಕೊಂಡಿದ್ದ ಮುತ್ತುರಾಜ್ ಎನ್ನುವ ಯುವಕನ ಪರಿಚಯವಾಗಿತ್ತು. ಪರಿಚಯ ಸ್ನೇಹವಾಗಿ ಸ್ನೇಹ ಪ್ರೀತಿಗೆ ತಿರುಗಿತ್ತು. ನಂತರ ಮುತ್ತುರಾಜ್ ಮದುವೆ ಅಂತಾ ಆಗೋದಾದ್ರೆ ನಿನ್ನನ್ನೇ ಆಗುತ್ತೀನಿ ಎಂದು ಯುವತಿಗೆ ಬಣ್ಣಬಣ್ಣದ ಮಾತುಗಳನ್ನ ಹೇಳಿ ನಂಬಿಸಿದ್ದ. ಬಳಿಕ ದೇವಸ್ಥಾನದಲ್ಲಿ ತಾಳಿ ಕಟ್ಟಿ ಮದುವೆ ಆಗಿದ್ದ. ಅಷ್ಟೇ ಅಲ್ಲದೆ ಕೆಲವು ತಿಂಗಳು ಸಂಸಾರ ಕೂಡ ನಡೆಸಿ ಈಗ ಮುತ್ತುರಾಜ್ ಯುವತಿಗೆ ಕೈಕೊಟ್ಟು ಹೋಗಿದ್ದಾನೆ.
ಯುವತಿ ಮತ್ತು ಮುತ್ತುರಾಜ್ ಜಾತಿಯಿಂದ ಬೇರೆ ಬೇರೆ ಆಗಿರುವುದಿಂದ ಮುತ್ತುರಾಜ್ ಮನೆಯವರು ಇಬ್ಬರ ಮದುವೆಗೆ ವಿರೋಧಿಸಿದ್ದರು. ಅಲ್ಲದೆ ಮುತ್ತುರಾಜನಿಗೆ ಬೇರೊಬ್ಬ ಯವತಿ ಜೊತೆಗೆ ಮದುವೆ ನಿಶ್ಚಯ ಮಾಡಿದ್ದಾರೆ ಎನ್ನಲಾಗಿದೆ. ಯುವತಿ ಪಿಯುಸಿ ಓದಿಕೊಂಡು ಬ್ಯಾಂಕ್ವೊಂದರಲ್ಲಿ ಕೆಲಸಕ್ಕೆ ಅಂತಾ ಬಂದಿದ್ದಾಳೆ. ಇಲ್ಲಿವರೆಗೂ ತಾನು ಮದುವೆ ಆಗಿರುವ ವಿಷಯವನ್ನ ಮನೆಯವರಿಗೂ ತಿಳಿಸಿಲ್ಲ. ಆದ್ದರಿಂದ ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ ಎಂದು ನಿಶಾರ್ಡ ಸಂಸ್ಥೆಯ ಅಧ್ಯಕ್ಷೆ ರುಕ್ಷಿಣಿ ಸಾಹುಕಾರ ತಿಳಿಸಿದ್ದಾರೆ.
ನೊಂದ ಯುವತಿ ಪತಿಯ ಫೋಟೋ ಹಿಡಿದುಕೊಂಡು ನನಗೆ ನ್ಯಾಯ ಕೊಡಿಸಿ ಅಂತ ಕಣ್ಣೀರು ಇಡುತ್ತಿದ್ದು, ನಿಶಾರ್ಡ ಸಂಸ್ಥೆ ಯುವತಿಯ ಬೆಂಬಲಕ್ಕೆ ನಿಂತಿದೆ.