ಗಿಲ್ಲಿ ನಾಯಕನಾಗಿ ನಟಿಸಿರೋ `ಸೂಪರ್ ಹಿಟ್’ ಚಿತ್ರ ಫೆ.27 ರಂದು ತೆರೆಗೆ

3 Min Read

ಬಿಗ್ ಬಾಸ್ (Bigg Boss) ವಿನ್ನರ್ ಗಿಲ್ಲಿ ನಟ (Gilli Nata) ನಾಯಕನಾಗಿ ನಟಿಸಿರುವ, ವಿಜಯಾನಂದ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ `ಸೂಪರ್ ಹಿಟ್’ (Superhit Movie). ತನ್ನ ಆಂತರ್ಯದ ಕಸುವಿನ ಸುಳಿವಿನಿಂದಲೇ ಪ್ರೇಕ್ಷಕರ ನಡುವೆ ಚರ್ಚೆ ಹುಟ್ಟು ಹಾಕಿದ್ದ ಈ ಸಿನಿಮಾಕ್ಕೀಗ ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟನ ಜನಪ್ರಿಯತೆಯೂ ಕೂಡಾ ಮತ್ತಷ್ಟು ಶಕ್ತಿ ತುಂಬಿದೆ.

ಪತ್ರಿಕಾಗೋಷ್ಠಿಯಲ್ಲಿ ಟೀಸರ್ ಒಂದರ ಮೂಲಕ ಚಿತ್ರತಂಡ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಈ ವೇದಿಕೆಯಲ್ಲಿ ನಿರ್ದೇಶಕ ವಿಜಯಾನಂದ್, ನಿರ್ಮಾಪಕ ಜಿ ಉಮೇಶ್, ಸಾಧು ಕೋಕಿಲಾ, ಗೀತರಚನೆಕಾರ ಡಾ.ವಿ ನಾಗೇಂದ್ರ ಪ್ರಸಾದ್, ಗೌರವ್ ಶೆಟ್ಟಿ, ಶ್ವೇತಾ ಮುಂತಾದವರು ಸಿನಿಮಾ ಬಗ್ಗೆ ಭರವಸೆಯ ಮಾತಾಡುತ್ತಲೇ, ಒಂದಷ್ಟು ಮಹತ್ವದ ಅಂಶಗಳನ್ನು ಹಂಚಿಕೊಂಡಿದ್ದಾರೆ. ಈ ಚಿತ್ರ ಇದೇ ಫೆ.27ರಂದು ರಾಜ್ಯಾದ್ಯಂತ ತೆರೆಗಾಣಲಿದೆ. ಇದನ್ನೂ ಓದಿ: ಸೋಶಿಯಲ್‌ ಮೀಡಿಯಾದಲ್ಲಿ ಅಶ್ವಿನಿ, ಚೈತ್ರಾ ಪೋಸ್ಟ್‌ ವಾರ್‌!

ವಿ. ನಾಗೇಂದ್ರ ಪ್ರಸಾದ್ ಅವರ ಸಹೋದರರಾದ ವಿಜಯಾನಂದ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಸೂಪರ್ ಹಿಟ್ ಬಿಡುಗಡೆ ದಿನಾಂಕ ಜಾಹೀರು ಮಾಡಿ ಮಾತಾಡಿದ ಅವರು, ಕಥೆ ಸಿದ್ಧವಾದ ಬಗೆಯಿಂದ ಮೊದಲ್ಗೊಂಡು ಈವರೆಗಿನ ಮಧುರ ಸ್ಮೃತಿಯನ್ನು ಮೆಲುಕು ಹಾಕಿದ್ದಾರೆ. ಕಥೆ ಬರೆಯಲು ಶುರು ಮಾಡಿದಾಗಿನಿಂದ ಈ ವರೆಗೂ ಎಲ್ಲವೂ ಹೂವೆತ್ತಿಟ್ಟಷ್ಟೇ ಸಲೀಸಾಗಿ ನಡೆಯುತ್ತಾ ಬಂದಿದೆ ಎಂಬ ಧನ್ಯತಾ ಭಾವ ವ್ಯಕ್ತಪಡಿಸಿರುವ ವಿಜಯಾನಂದ್, ಯಾವುದಕ್ಕೂ ಕೊರತೆಯಾಗದಂತೆ ಒಂದಿಡೀ ಚಿತ್ರವನ್ನು ನಿರ್ಮಾಣ ಮಾಡಿರುವ ನಿರ್ಮಾಪಕ ಜಿ ಉಮೇಶ್ ಅವರ ಸಿನಿಮಾ ಪ್ರೇಮವನ್ನು ಕೊಂಡಾಡಿದ್ದಾರೆ.

ತನ್ನ ಸಿನಿಮಾ ಮೂಡಿ ಬಂದಿರುವ ರೀತಿ ಮತ್ತು ಅದರ ಕಂಟೆಂಟಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿರುವ ಅವರು, ಸದರಿ ಚಿತ್ರ ಸೂಪರ್ ಹಿಟ್ಟಾಗೋದು ಗ್ಯಾರೆಂಟಿ ಎಂಬ ಭರವಸೆ ವ್ಯಕ್ತಪಡಿಸಿದರು. ನೂರು ದಿನಗಳ ಕಾಲ ಯಶಸ್ವೀ ಪ್ರದರ್ಶನ ನೀಡಲು ಅನುವು ಮಾಡಿಕೊಡುವಂತೆ ಪ್ರೇಕ್ಷಕ ಪ್ರಭುಗಳಲ್ಲಿ ವಿನಂತಿಸಿಕೊಂಡರು.

ಇದೇ ವೇದಿಕೆಯಲ್ಲಿ ಮತ್ತೊಂದು ಖುಷಿಯ ಸಂಗತಿಯನ್ನೂ ವಿಜಯಾನಂದ್ ಹಂಚಿಕೊಂಡರು. ಸೂಪರ್ ಹಿಟ್ ಚಿತ್ರದ ಓಟಿಟಿ ಹಕ್ಕು ಗಳನ್ನು ಹೊಸಾ ಸಂಸ್ಥೆಯೊಂದು ದೊಡ್ದ ಮೊತ್ತಕ್ಕೆ ಖರೀದಿಸಿರುವುದಾಗಿ ಮಾಹಿತಿ ನೀಡಿದರು. ಈ ಸಿನಿಮಾವನ್ನು ಪ್ರೀತಿಯಿಂದ ನಿರ್ಮಾಣ ಮಾಡಿರುವ ಜಿ ಉಮೇಶ್ ಚುಟುಕಾದ ಮಾತುಗಳಲ್ಲಿಯೇ ತಮ್ಮ ಸಿನಿಮಾ ಪ್ರೇಮ, ಸೂಪರ್ ಹಿಟ್ ಬಗೆಗಿನ ಭರವಸೆ ವ್ಯಕ್ತಪಡಿಸುತ್ತಲೇ, ತಮ್ಮ ಮೊದಲ ಹೆಜ್ಜೆಯಂಥಾ ಈ ಚಿತ್ರವನ್ನು ಗೆಲ್ಲಿಸುವಂತೆ ಮನವಿ ಮಾಡಿಕೊಂಡರು. ಈ ವೇದಿಕೆಯಲ್ಲಿ ಉಪಸ್ಥಿತರಿದ್ದ ಸಾಧು ಕೋಕಿಲಾ, ಸೂಪರ್ ಹಿಟ್ ಸಿನಿಮಾ ತಂಡದ ಮೇಲೆ ದೇವರ ಆಶೀರ್ವಾದ ಇದೆ ಎಂಬ ವಿಚಾರವನ್ನು ಹೇಳುತ್ತಲೇ, ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡರು. ಪ್ರಚಾರದ ಪಟ್ಟುಗಳು ಈ ದಿನಮಾನದಲ್ಲಿ ಎಷ್ಟು ಮುಖ್ಯ ಎಂಬುದರ ಬಗ್ಗೆ ಚಿತ್ರತಂಡಕ್ಕೆ ಮನವರಿಕೆ ಮಾಡಿ ಕೊಡುತ್ತಲೇ, ಜನಪ್ರಿಯತೆಯ ಭರಾಟೆಯಲ್ಲಿ ವಹಿಸಬೇಕಾದ ಎಚ್ಚರದ ಬಗ್ಗೆಯೂ ಗಿಲ್ಲಿಗೆ ಕಿವಿ ಮಾತು ಹೇಳಿದರು.

ಈ ಚಿತ್ರಕ್ಕೆ ಸಾಹಿತ್ಯ, ಸಂಗೀತದ ಜವಾಬ್ದಾರಿಯೊಂದಿಗೆ ಒಂದು ವಿಶೇಷವಾದ ಪಾತ್ರದಲ್ಲಿಯೂ ನಟಿಸಿರುವ ಕವಿರತ್ನ ಡಾ.ವಿ ನಾಗೇಂದ್ರ ಪ್ರಸಾದ್ ಸೂಪರ್ ಹಿಟ್ ಮೂಡಿ ಬಂದಿರೋ ರೀತಿಯ ಬಗ್ಗೆ ಮೆಚ್ಚುಗೆ ಸೂಚಿಸುತ್ತಲೇ, ಗಿಲ್ಲಿಯ ಯಶದ ಪ್ರಭೆ ಸದರಿ ಚಿತ್ರಕ್ಕೆ ವರವಾಗಿರುವ ಬಗ್ಗೆ ಪ್ರಸ್ತಾಪಿಸಿದ್ದಲ್ಲದೇ, ಈ ಹಿಂದೆ ಯಾವುದೇ ಸಿನಿಮಾದಲ್ಲಿ ನಟಿಸಿದ್ದರೂ ಕೂಡಾ, ಅಂಥಾ ಚಿತ್ರಗಳಿಗೆ ಪ್ರಚಾರ ನೀಡಬೇಕಿರುವ ಕರ್ತವ್ಯದ ಬಗ್ಗೆಯೂ ಗಿಲ್ಲಿ ನಟನಿಗೆ ಪ್ರೀತಿಯಿಂದ ಕಿವಿ ಮಾತು ಹೇಳಿದರು. ಆ ನಂತರ ಮಾತಾಡಿದ ಈ ಸಿನಿಮಾದ ಕೇಂದ್ರ ಬಿಂದುವಾದ ಗಿಲ್ಲಿ, ಈ ಸಿನಿಮಾದ ಮುಖ್ಯ ಪಾತ್ರದಲ್ಲಿ ನಟಿಸಲು ಅವಕಾಶ ಕೊಟ್ಟ ನಿರ್ದೇಶಕರಿಗೆ ಕೃತಜ್ನತೆ ಸಲ್ಲಿಸುತ್ತಲೇ ಒಟ್ಟಾರೆ ಚಿತ್ರೀಕರಣ ರಸಾನುಭವಗಳನ್ನು ಹಂಚಿಕೊಂಡರು. ಈ ಮಧ್ಯೆ ಇತ್ತೀಚೆಗೆ ಹೊತ್ತಿಕೊಂಡಿದ್ದ ವಿವಾದವೂ ಸೇರಿದಂತೆ ಒಂದಷ್ಟು ವಿಚಾರಗಳಿಗೆ ಸ್ಪಷ್ಟೀಕರಣ ಕೊಡುತ್ತಲೇ ಸೂಪರ್ ಹಿಟ್ ಚಿತ್ರವನ್ನು ನೋಡಿ ಹರಸುವಂತೆ ಕೇಳಿಕೊಂಡರು.

ವಿಜಯಲಕ್ಷ್ಮಿ ಎಂಟರ್ ಪ್ರೈಸಸ್ ಬ್ಯಾನರಿನಡಿಯಲ್ಲಿ ಜಿ ಉಮೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಗೌರವ್ ಶೆಟ್ಟಿ ಮತ್ತು, ಗಿಲ್ಲಿ ನಟ ನಾಯಕರಾಗಿ ನಟಿಸಿದ್ದಾರೆ. ಶ್ವೇತಾ ನಾಯಕಿಯಾಗಿ ಜೊತೆಯಾಗಿದ್ದಾರೆ. ನಾಗೇಂದ್ರ ಪ್ರಸಾದ್ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ. ಇನ್ನುಳಿದಂತೆ, ಆರ್.ಡಿ ನಾಗಾರ್ಜುನ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ, ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಮತ್ತು ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಡ್ರ್ಯಾಗನ್ ಮಂಜು, ಸಾಧು ಕೋಕಿಲ.ಆ, ಸೀನು ಭಾಯ್, ನಾಗವರ್ಧನ್, ಪ್ರಮೋದ್ ಶೆಟ್ಟಿ, ಜೀಜಿ, ಗಿರಿ, ಟಿನಿಸ್ ಕೃಷ್ಣ, ಕರಿಸುಬ್ಬು, ವಂಶಿ, ಮಂಜಣ್ಣ, ಬಿ.ಎನ್ ಮಂಗಳ, ಮಂಗಳೂರು ಮೀನನಾಥ ಮುಂತಾದವರ ತಾರಾಗಣವಿದೆ. ಕಾಮಿಡಿ ಸಸ್ಪೆನ್ಸ್ ಥ್ರಿಲ್ಲರ್ ಜಾನರಿನ ಈ ಸಿನಿಮಾ ಫೆಬ್ರವರಿ 27ರಂದು ರಾಜ್ಯಾದ್ಯಂತ ಇನ್ನೂರಕ್ಕು ಹೆಚ್ಚು ಚಿತ್ರಮಂದಿಗಳಲ್ಲಿ ಅದ್ದೂರಿಯಾಗಿ ತೆರೆಗಾಣಲಿದೆ. ಇದನ್ನೂ ಓದಿ: ಮೈಸೂರು ಸ್ಯಾಂಡಲ್‌ ಸೋಪ್‌ಗೆ ಹೊಸ ರೂಪ – ಇಂದಿನಿಂದ 2 ವರ್ಷ ತಮನ್ನಾ ಪ್ರಚಾರ ರಾಯಭಾರಿ: ಎಂಬಿಪಿ

Share This Article