ಕಟ್ಟಡದ ಅವಶೇಷಗಳಡಿ ಸಿಲುಕಿದ್ದ ವ್ಯಕ್ತಿಯನ್ನು ಪಾರು ಮಾಡಿತು ಒಂದು ಕರೆ!

Public TV
2 Min Read

ಮುಂಬೈ: ಇಲ್ಲಿನ ಘಾಟ್ಕೋಪರ್ ನಲ್ಲಿ 4 ಅಂತಸ್ತಿನ ಕಟ್ಟಡವೊಂದು ಮಂಗಳವಾರ ಬೆಳಗ್ಗೆ ಕುಸಿದು ಬಿದ್ದಿತ್ತು. ಘಟನೆಯಿಂದಾಗಿ ಕಟ್ಟಡದ ಅವಶೇಷಗಳಡಿ ಸಿಲುಕಿದ ವ್ಯಕ್ತಿಯೊಬ್ಬರನ್ನು ಬರೋಬ್ಬರಿ 15 ಗಂಟೆಗಳ ಬಳಿಕ ರಕ್ಷಣೆ ಮಾಡಲಾಗಿದೆ.

57 ವರ್ಷದ ರಾಜೇಶ್ ಧೋಶಿ ಅಪಾಯದಿಂದ ಪಾರಾದ ವ್ಯಕ್ತಿ. ಘಟನೆ ನಡೆದ ವೇಳೆ ರಾಜೇಶ್ ಒಬ್ಬರೇ ಮನೆಯಲ್ಲಿದ್ದರು.

ರಾಜೇಶ್ ಕುಟುಂಬ ಕುಸಿದ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ವಾಸವಾಗಿದ್ದರು. ರಾಜೇಶ್ ಪತ್ನಿ ಹಾಗೂ ಮಗ ಮಂಗಳವಾರ ಬೆಳಗ್ಗೆ ದೇವಸ್ಥಾನಕ್ಕೆಂದು ಹೊರಗಡೆ ಹೋಗಿದ್ದರು. ಹೀಗಾಗಿ ರಾಜೇಶ್ ಒಬ್ಬರೇ ಮನೆಯಲ್ಲಿದ್ದರು. ಈ ವೇಳೆ ಕಟ್ಟಡ ಕುಸಿದಿದ್ದು, ಐವರು ದುರ್ಮರಣಕ್ಕೀಡಾಗಿ ಸುಮಾರು 30 ಕ್ಕೂ ಹೆಚ್ಚು ಮಂದಿ ಕಟ್ಟಡದೊಳಗೆ ಸಿಲುಕಿರುವ ಶಂಕೆ ವ್ಯಕ್ತವಾಗಿತ್ತು. ಇದರಲ್ಲಿ ರಾಜೇಶ್ ಕೂಡ ಒಬ್ಬರಾಗಿದ್ದರು. ಇನ್ನು ಘಟನೆಯಿಂದ 12 ಮಂದಿಯನ್ನು ಆ ಕೂಡಲೇ ರಕ್ಷಣೆ ಮಾಡಲಾಗಿತ್ತು.

ಕಟ್ಟಡದ ಅವಶೇಷಗಳಡಿ ಸಿಲುಕಿದ್ದ ರಾಜೇಶ್ ತನ್ನ ಕೈಯಲಿದ್ದ ಮೊಬೈಲ್ ನಿಂದ ಮಗನಿಗೆ ಕರೆ ಮಾಡಿ ತಾನು ಬದುಕಿದ್ದು, ಕಟ್ಟಡದೊಳಗೆ ಸಿಲುಕಿದ್ದೇನೆ. ನನ್ನ ಕಾಲಿನ ಮೇಲೆ ದೊಡ್ಡದಾದ ಸ್ಲಾಬ್ ತುಂಡೊಂದು ಬಿದ್ದಿದ್ದು, ಹೀಗಾಗಿ ಹೊರ ಬರಲು ಸಾಧ್ಯವಾಗುತ್ತಿಲ್ಲ ಅಂತ ಮಾಹಿತಿ ನಿಡಿದ್ದಾರೆ. ಕೂಡಲೇ ಕುಟುಂಬ ಎನ್ ಡಿಆರ್ ಎಫ್ ಸಿಬ್ಬಂದಿ ಅವರಿಗೆ ಮಾಹಿತಿ ರವಾನಿಸಿ ರಾಜೇಶ್ ಅವರನ್ನು ಅಪಾಯದಿಂದ ಪಾರು ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಅಂತೆಯೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಕಟ್ಟಡದ ಅವಶೇಷಗಳಡಿ ಸಿಲುಕಿರುವ ರಾಜೇಶ್ ಅವರನ್ನು ಪತ್ತೆ ಹಚ್ಚಿ, ಬರೋಬ್ಬರಿ 15 ಗಂಟೆಗಳ ಬಳಿಕ ರಕ್ಷಿಸಿದ್ದಾರೆ. ಬಳಿಕ ಅವರನ್ನು ಸ್ಥಳೀಯ ಶಾಂತಿನಿಕೇತನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಮುಂಬೈನ ಘಟ್ಕೋಪರ್ ನಲ್ಲಿ ಸ್ಥಳೀಯ ಶಿವಸೇನೆ ಮುಖಂಡರೊಬ್ಬರ ಮಾಲೀಕತ್ವದ ನಾಲ್ಕು ಅಂತಸ್ತಿನ ಕಟ್ಟಡವೊಂದು ಮಂಗಳವಾರ ಬೆಳಗ್ಗೆ ಕುಸಿದುಬಿದ್ದಿದೆ. ರಾತ್ರಿ 9 ಗಂಟೆಯವರೆಗೆ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ 12 ಮಂದಿ ಸಾವನಪ್ಪಿದ್ದು, 11 ಮಂದಿಗೆ ಗಾಯಗಳಾಗಿತ್ತು. 23 ಮಂದಿಯನ್ನು ರಕ್ಷಣೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಸೇನೆ ಮುಖಂಡ ಸುನಿಲ್ ಶಿತಾಪ್ ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಟ್ಟಡದ ನೆಲ ಮಾಳಿಗೆಯಲ್ಲಿದ್ದ ನರ್ಸಿಂಗ್ ಹೋಂ ಅನ್ನು ದುರಸ್ತಿ ಮಾಡಲಾಗುತ್ತಿದ್ದು, ಇದೇ ಕಟ್ಟಡ ಕುಸಿದು ಬೀಳಲು ಕಾರಣವೆಂದು ಶಂಕಿಸಲಾಗಿದೆ.

 

 

Share This Article
Leave a Comment

Leave a Reply

Your email address will not be published. Required fields are marked *