ಪ್ರಚಾರದ ವೇಳೆ ಗೀತಾ ಮಹದೇವಪ್ರಸಾದ್ ಕಣ್ಣೀರು ಹಾಕಿದ್ದು ಯಾಕೆ?

Public TV
2 Min Read

– ನಾನು ವಚನಭ್ರಷ್ಟನಲ್ಲ, ಯಾವತ್ತೂ ಆಗಲ್ಲ ಬಿಎಸ್‍ವೈ ತಿರುಗೇಟು

ಚಾಮರಾಜನಗರ: ನಾನು ಸೂಕ್ಷ್ಮ ಸ್ವಭಾವದವಳು. ಹೀಗಾಗಿ ಬಿಜೆಪಿ ಮುಖಂಡರ ಹೇಳಿಕೆಯಿಂದ ನನಗೆ ನೋವಾಗಿದೆ ಅಂತಾ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹದೇವಪ್ರಸಾದ್ ಹೇಳಿದ್ದಾರೆ.

ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಎಸ್‍ವೈ ನನ್ನ ತಲೆ ಮೇಲೆ ಕೈ ಇಟ್ಟು ನಿನ್ನನ್ನು ಅವಿರೋಧ ಆಯ್ಕೆ ಮಾಡುತ್ತೇನೆ ಅಂತಾ ಹೇಳಿದ್ರು. ಆದ್ರೆ ಇದೀಗ ಸುತ್ತೂರು ಸ್ವಾಮಿಜಿಗಳ ಆಶೀರ್ವಾದ ಪಡೆದುಕೊಂಡು ಚುನಾವಣೆಗೆ ಬಂದಿದ್ದೇನೆ. ಬಿಜೆಪಿಯವರು ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದು ಮಹಿಳೆಯರಿಗೆ ನೀಡುವ ಗೌರವನಾ ಎಂದು ಪ್ರಶ್ನಿಸಿದ ಅವರು, ನಾನು ಸುಸಂಸ್ಕೃತ ಮನೆಯಿಂದ ಬಂದಿದ್ದೇನೆ. ನಾನೂ ಅವರ ರೀತಿ ಕೀಳು ಮಟ್ಟಕ್ಕೆ ಇಳಿದಿಲ್ಲ, ಇಳಿಯುವುದೂ ಇಲ್ಲ. ನಾನು ನನ್ನ ಗ್ರಾಮ ಬಿಟ್ಟು ಬೇರೆ ಕಡೆ ಬಂದಿಲ್ಲ, ಗುಂಡ್ಲುಪೇಟೆ ಪಟ್ಟಣ ಸಹ ನೋಡಿಲ್ಲ. ಇಂತಹ ಕೆಟ್ಟ ರಾಜಕಾರಣ ಇದೆ ಎಂಬ ಕಾರಣಕ್ಕೆ ನನ್ನ ಪತಿ ನನ್ನನ್ನು ಇಲ್ಲಿಗೆ ಕರೆ ತರುತ್ತಿರಲಿಲ್ಲ ಅಂತಾ ಅವರು ಹೇಳಿದ್ರು.

ನಾನು ಯಾವತ್ತು ನಾನಾಗಿಯೇ ಚುನಾವಣೆಗೆ ನಿಲ್ಲುತ್ತೇನೆ ಎಂದು ಬಂದಿರಲಿಲ್ಲ. ಮನುಷ್ಯನಿಗೆ ಮಾನಸಿಕ ನೆಮ್ಮದಿ ಇರಬೇಕು. ಆದ್ರೆ ಇಲ್ಲಿ ನನ್ನ ನೆಮ್ಮದಿಯನ್ನು ಕಸಿದಿಕೊಳ್ಳುತ್ತಿದ್ದಾರೆ. ನಾನು ಅಷ್ಟು ಕೀಳು ಮಟ್ಟಕ್ಕೆ ಇಳಿದಿಲ್ಲ, ಮುಂದೆ ಸಹ ಇಳಿಯುವುದಿಲ್ಲ. ದಯಾಮಾಡಿ ಇದನ್ನು ನಿಲ್ಲಿಸಿ. ಜನರ ಒಕ್ಕೊರಲಿನಿಂದ, ಮುಖ್ಯಮಂತ್ರಿಗಳು, ಮುಖಂಡರು, ಸುತ್ತೂರು ಸ್ವಾಮೀಜಿಗಳು ಹೇಳಿದ್ದಕ್ಕೆ ಚುನಾವಣೆಗೆ ನಾನು ನಿಂತಿರೊದು. ನಾನು ನನ್ನ ಗ್ರಾಮ ಬಿಟ್ಟು ಬೇರೊಂದು ಕಡೆಗೆ ಹೋಗುವುದಿಲ್ಲ. ಯಡಿಯೂರಪ್ಪ ಹಾಗೂ ಶೋಭಾ ಅವರು ಬಂದು ನೀನೇ ನಿಲ್ಲಬೇಕು ಎಂದು ಹೇಳಿದ್ದರು. ಅವರನ್ನು ನಾನು ತಂದೆ ಸ್ಥಾನದಲ್ಲಿ ನಿಲ್ಲಿಸಿದ್ದೇನೆ. ಇದಕ್ಕೆ ನನ್ನ ಜನರು 13 ರಂದು ಉತ್ತರ ಹೇಳುತ್ತಾರೆ ಗೀತಾ ಬೇಸರ ವ್ಯಕ್ತಪಡಿಸಿದ್ರು.

ಬಿಎಸ್‍ವೈ ತಿರುಗೇಟು: ಗೀತಾ ಮಹದೇವಪ್ರಸಾದ್ ಹೇಳಿಕೆಗೆ ಗುಂಡ್ಲುಪೇಟೆ ತಾಲೂಕಿನ ಬೆರಟಹಳ್ಳಿಯಲ್ಲಿ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದು, ಮಹದೇವ ಪ್ರಸಾದ್ ತೀರಿಕೊಂಡ ದಿನ ನಾನು ಅವರ ಮನೆಗೆ ಸಾಂತ್ವಾನ ಹೇಳಲು ಹೋಗಿದ್ದೆ. ಅದೊಂದೆ ದಿನ ನಾನೂ ಗೀತಾ ಮಹದೇವಪ್ರಸಾದ್ ಭೇಟಿ ಮಾಡಿದ್ದು. ಸಾವಿನ ಮನೆಯಲ್ಲಿ ಸಾಂತ್ವನ ಹೇಳಬೇಕಾದ್ರೆ ಚುನಾವಣಾ ವಿಚಾರ ಪ್ರಸ್ತಾಪ ಮಾಡೋದಕ್ಕೆ ಆಗುತ್ತ ಎಂದು ಮರುಪ್ರಶ್ನೆ ಹಾಕಿದ್ದಾರೆ.

ಸುಳ್ಳು ಹೇಳಿಕೆಗಳನ್ನು ನೀಡಿ, ಕಣ್ಣೀರುಹಾಕಿ, ನನ್ನಂತಹ ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷನಿಗೆ ಅಪಮಾನ ಮಾಡಬಾರದು. ನಾನು ವಚನ ಭ್ರಷ್ಟನಲ್ಲ, ಆ ರೀತಿ ಕೆಲಸ ಸಹ ಮಾಡುವುದಿಲ್ಲ. ಸದ್ಯ ಚುನಾವಣೆ ಏರ್ಪಟ್ಟಿದೆ ಹಾಗಾಗಿ ನನ್ನ ಪಕ್ಷದ ಅಭ್ಯರ್ಥಿಯನ್ನ ಕಣಕ್ಕಿಳಿಸಿದ್ದೇವಷ್ಟೇ. ಸುತ್ತೂರು ಶ್ರೀಗಳು ಎಲ್ಲರಿಗೂ ಆಶೀರ್ವಾದ ಮಾಡ್ತಾರೆ. ಇತ್ತೀಚೆಗಷ್ಟೇ ನಮ್ಮ ಅಭ್ಯರ್ಥಿ ನಿರಂಜನ ಕುಮಾರ್ ಗೂ ಆಶಿರ್ವಾದ ಮಾಡಿಸಿಕೊಂಡು ಬಂದಿದ್ದೇನೆ. ಅದರ ಅರ್ಥ ಮತ ಹಾಕ್ಸಿ ಅಂತನಾ.? ಗೀತಾ ಮಹದೇವ ಪ್ರಸಾದ್ ಅವರು ಸುತ್ತೂರು ಶ್ರೀಗಳನ್ನ ರಾಜಕೀಯ ಎಳೆತಂದು ಮಾತನಾಡಬಾರದು ಅಂತಾ ಅವರು ವಾಗ್ದಾಳಿ ನಡೆಸಿದರು.

Share This Article
Leave a Comment

Leave a Reply

Your email address will not be published. Required fields are marked *