ಸಿಟಿಇಟಿ ಪರೀಕ್ಷೆ ವಂಚನೆ – ಐವರು ಮಹಿಳೆಯರು ಸೇರಿದಂತೆ 18 ಮಂದಿ ಅರೆಸ್ಟ್

Public TV
2 Min Read

ಲಕ್ನೋ: ಸಿಟಿಇಟಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಮಹಿಳೆಯರು ಸೇರಿದಂತೆ 18 ಮಂದಿಯನ್ನು ಗೌತಮ್ ಬುದ್ಧನಗರ ಪೊಲೀಸರು ಬಂಧಿಸಿದ್ದಾರೆ.

ಇದೇ ಡಿಸೆಂಬರ್ 30ರಂದು ಸಿಬಿಎಸ್‍ಇ ಆಯೋಜಿಸಿದ್ದ (ಸಿಟಿಇಟಿ) ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ತೊಡಗಿಕೊಂಡಿದ್ದ ಗ್ಯಾಂಗ್‍ವೊಂದನ್ನು ಬೇಧಿಸುವಲ್ಲಿ ಗೌತಮ್ ಬುದ್ಧನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಐವರು ಮಹಿಳೆಯರು ಸೇರಿದಂತೆ 18 ಮಂದಿಯನ್ನು ಗುರುವಾರ ಜಿಲ್ಲೆಯ ಸೆಕ್ಟರ್ 71 ರ ಹೋಟೆಲ್‍ನಲ್ಲಿ ಬಂಧಿಸಿದ್ದಾರೆ. ಇದನ್ನೂ ಓದಿ: ಚಿಟ್ ಫಂಡ್ ಹೆಸರಿನಲ್ಲಿ 6 ಕೋಟಿಗೂ ಹೆಚ್ಚು ಹಣ ದೋಖಾ – ಆರೋಪಿ ಅರೆಸ್ಟ್

ಗುರುವಾರ ಮುಂಜಾನೆ ಪೊಲೀಸರು ಸೆಕ್ಟರ್ 58 ರಲ್ಲಿ ಗಸ್ತು ತಿರುಗುತ್ತಿದ್ದಾಗ, ನೋಯ್ಡಾ ವಿಭಾಗದ ಸೆಕ್ಟರ್ 60 ರಲ್ಲಿ ಮಾರುತಿ ಸುಜುಕಿ ಇಕೊವೊಂದನ್ನು ಗುರುತಿಸಿದ್ದಾರೆ. ಅನುಮಾನಸ್ಪದವಾಗಿ ಆ ಕಾರನ್ನು ಪೊಲೀಸರ ತಂಡವು ಪರಿಶೀಲಿಸಿದಾಗ ಕಾರಿನಲ್ಲಿ ಐವರು ಯುವಕರು ಕುಳಿತುಕೊಂಡಿದ್ದು, ಕೆಲ ಮಹಿಳೆಯರ ಪರ್ಸ್‍ಗಳು ಪೊಲೀಸರಿಗೆ ಸಿಕ್ಕಿವೆ. ಆಗ ಕಾರಿನಲ್ಲಿದ್ದ ಯುವಕರು ಈ ಪರ್ಸ್‍ಗಳು ನೋಯ್ಡಾದ ಸೆಕ್ಟರ್ 71 ರ ಅತಿಥಿ ಗೃಹದಲ್ಲಿ ಇದ್ದ ಕೆಲವು ಮಹಿಳೆಯರಿಗೆ ಸೇರಿದ್ದು ಎಂದು ಹೇಳಿದ್ದಾರೆ.

ಆಗ ನೋಯ್ಡಾದ ಹೆಚ್ಚುವರಿ ಉಪ ಪೊಲೀಸ್ ಆಯುಕ್ತ (ಎಡಿಸಿಪಿ) ಕುಮಾರ್ ರಣವಿಜಯ್ ಸಿಂಗ್ ಆರೋಪಿಗಳ ವಿರುದ್ಧ ಅನುಮಾನ ಬಂದು ಪೊಲೀಸ್ ತಂಡದೊಂದಿಗೆ ಸೆಕ್ಟರ್ 71 ರಲ್ಲಿರುವ ಹೋಟೆಲ್ ಅನ್ನು ಶೋಧಿಸಿದ್ದಾರೆ. ಈ ವೇಳೆ ಅಲ್ಲಿದ್ದ ಆರೋಪಿಗಳನ್ನು ಬಂಧಿಸಲಾಗಿದೆ.

ಆರೋಪಿಗಳಿಂದ ನಾವು ಮೂರು ಲ್ಯಾಪ್‍ಟಾಪ್‍ಗಳು, ಒಂದು ಕೀಬೋರ್ಡ್ ಒಂದು ಪ್ರಿಂಟರ್, 20 ಮೊಬೈಲ್ ಫೋನ್‍ಗಳು, 36,000 ರೂ. ನಗದು, ಐದು ಕಾರುಗಳು ಒಂದು ಟೊಯೊಟಾ ಫಾರ್ಚುನರ್, ಮಾರುತಿ ಸ್ವಿಫ್ಟ್ ಡಿಜೈರ್, ಮಹೀಂದ್ರಾ ಎಕ್ಸ್‍ಯುವಿ 500, ಮಾರುತಿ ಸುಜುಕಿ ಬಲೆನೊ, ಮಾರುತಿ ಸುಜುಕಿ ಇಕೊ ಮತ್ತು ಸಿಟಿಇಟಿಗೆ ಸಂಬಂಧಪಟ್ಟ 50 ಪ್ರವೇಶ ಪತ್ರಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ರಣವಿಜಯ್ ಸಿಂಗ್ ಬಹಿರಂಗಪಡಿಸಿದ್ದಾರೆ.

ಪೊಲೀಸರೇ ಭಾಗಿ:
ರಾಜಸ್ಥಾನದ ನಿವೃತ್ತ ಸಿಆರ್‍ಪಿಎಫ್ ಕಾನ್‍ಸ್ಟೆಬಲ್ ಭವಾನಿ ಶರ್ಮಾ (45) ಪ್ರಸ್ತುತ ಸಿಆರ್‍ಪಿಎಫ್‍ನಲ್ಲಿ ಸೇವೆ ಸಲ್ಲಿಸುತ್ತಿರುವ ಹೆಡ್ ಕಾನ್‍ಸ್ಟೆಬಲ್ ಶಿವ ರಾಮ್ ಸಿಂಗ್ (32), ಮತ್ತು ಹರಿಯಾಣ ಮೂಲದ ದೆಹಲಿ ಪೊಲೀಸ್ ವಿಕಾಸ್ (30) ಬಂಧಿತ ಆರೋಪಿಗಳು.

ಇಡೀ ಕಾರ್ಯಾಚರಣೆಯನ್ನು ಸೋನಿಪತ್‍ನ ವಿನಯ್ ದಹಿಯಾ ಮತ್ತು ಅಂಕಿತ್ ಕುಮಾರ್ ನಡೆಸಿದ್ದು, ಅವರು ಪರಿಹರಿಸಿದ ಪ್ರಶ್ನೆ ಪತ್ರಿಕೆಗಳನ್ನು ಹಂಚಿಕೊಳ್ಳಲು ಪ್ರತಿ ಅಭ್ಯರ್ಥಿಗೆ 2.5-3 ಲಕ್ಷ ರೂ. ಶುಲ್ಕ ವಿಧಿಸುತ್ತಿದ್ದರು. ಈ ವಿಷಯವನ್ನು ತನಿಖೆ ಮಾಡಲು ನಾವು ಸಿಬಿಎಸ್‍ಇಗೆ ಪತ್ರ ಬರೆಯುತ್ತೇವೆ ಎಂದರು. ಇದನ್ನೂ ಓದಿ: ಹುಟ್ಟೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ BSF ಯೋಧನ ಅಂತ್ಯಕ್ರಿಯೆ

ನೋಯ್ಡಾದಲ್ಲಿ ಯಾವುದೇ ಪರೀಕ್ಷಾ ಕೇಂದ್ರ ಇರಲಿಲ್ಲ. ಆದಾಗ್ಯೂ ಈ ಶಂಕಿತರು ನೋಯ್ಡಾದಲ್ಲಿ ಪರಿಹರಿಸಿದ ಪತ್ರಿಕೆಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು. ಮತ್ತೊಬ್ಬ ಶಂಕಿತ ರವಿ ಎಂಬಾತ ಪ್ರಶ್ನೆಪತ್ರಿಕೆ ಹೊಂದಿರುವ ಪೆನ್‍ಡ್ರೈವ್‍ನೊಂದಿಗೆ ಸ್ಥಳದಿಂದ ಪರಾರಿಯಾಗಿದ್ದು, ಆತನಿಗಾಗಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಎಡಿಸಿಪಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *