ಗೌರಿ ಲಂಕೇಶ್ ಹತ್ಯೆಯ ಆರೋಪಿಗಳು ವಾಸವಿದ್ದ ಪಕ್ಕದ್ಮನೆ ವ್ಯಕ್ತಿ ಹೇಳಿದ್ದು ಹೀಗೆ

Public TV
3 Min Read

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ದಿನ ಕಳೆದಂತೆ ಹಲವು ತಿರುವು ಪಡೆಯುತ್ತಿದೆ. ಗೌರಿ ಅವರನ್ನು ಕೊಂದಿದ್ದ ಹಂತಕರು ಇದ್ದಿದ್ದು ಪೊಲೀಸ್ ಇನ್ಸ್ ಪೆಕ್ಟರ್ ಮನೆಯಲ್ಲಿ ಎನ್ನುವ ಅಂಶ ಬಯಲಾಗಿದೆ. ಗೌರಿ ಹತ್ಯೆಯ ಆರೋಪಿಗಳು ಬೆಂಗಳೂರಿನಲ್ಲಿ ವಾಸವಾಗಿದ್ದ ಮನೆಯ ನೆರೆಯ ವ್ಯಕ್ತಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ.

ಮಾಗಡಿ ರಸ್ತೆಯ ಕಡಬನಗೆರೆ ಕ್ರಾಸ್‍ನಲ್ಲಿರುವ ಇನ್ಸ್ ಪೆಕ್ಟರ್ ಬಾಲಕೃಷ್ಣೇಗೌಡರ ಕಟ್ಟಡದಲ್ಲಿ ಹಂತಕರು ಬಾಡಿಗೆಗೆ ಇದ್ದು, ಅಲ್ಲಿಯೇ ಕುಳಿತು ಹತ್ಯೆಗೆ ಸ್ಕೆಚ್ ರೂಪಿಸಿದ್ದರು. ಕುಣಿಗಲ್ ಸುರೇಶ್ ಹೆಸರಲ್ಲಿ ಆರೋಪಿಗಳು ಬಾಡಿಗೆ ಪಡೆದುಕೊಂಡಿದ್ದರು. ಆದರೆ ಈ ಬಗ್ಗೆ ಇನ್ಸ್ ಪೆಕ್ಟರ್‍ಗೆ ಯಾವುದೇ ಮಾಹಿತಿ ಇರಲಿಲ್ಲ. ತನ್ನ ಮನೆಯ ಬಾಡಿಗೆ ವಿಚಾರವನ್ನು ಸಂಬಂಧಿಗಳಿಗೆ ನೀಡಿದ್ದರು. ಅವರು ಬಾಡಿಗೆದಾರರ ಪೂರ್ವಾಪರವನ್ನು ವಿಚಾರಿಸದೇ ಮನೆ ಬಾಡಿಗೆ ನೀಡಿದರು ಎನ್ನಲಾಗುತ್ತಿದೆ. ಈ ಸಂಬಂಧ ಸ್ಥಳೀಯರು ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ್ದಾರೆ.

ಪಬ್ಲಿಕ್ ಟಿವಿ ಪ್ರತಿನಿಧಿ : ಸರ್ ನಮಸ್ತೆ ಪಬ್ಲಿಕ್ ಟಿವಿಯಿಂದ ಮುರಳಿ ಅಂತ ಮಾತಾಡ್ತಾ ಇರೋದು
ಸ್ಥಳೀಯ : ಸರ್ ಹೇಳಿ ಸರ್
ಪಬ್ಲಿಕ್ ಟಿವಿ ಪ್ರತಿನಿಧಿ – ನಾವು ಇಲ್ಲಿಗೆ ಈಗ ಬಂದಿದ್ದೇವೆ.. ಅದರೆ ಇಲ್ಲಿ ಮನೆ ಯಾವುದು ಅಂತ ನಮಗೆ ಗೊತಗ್ತಾ ಇಲ್ಲ
ಸ್ಥಳೀಯ : ಸೆಕೆಂಡ್ ಫ್ಲೋರ್‍ನಲ್ಲಿ ಮೊದಲನೇ ಮನೆಯಲ್ಲೇ ಅವರು ಇದ್ದಿದ್ದು..
ಸ್ಥಳೀಯ: ಸರ್ ಅವರು ಆಗ್ಲೇನೆ ಮನೆಯನ್ನು ಸಹ ಖಾಲಿ ಮಾಡಿಬಿಟ್ರು.
ಪಬ್ಲಿಕ್ ಟಿವಿ ಪ್ರತಿನಿಧಿ : ಹಾ ಸರ್ ಅದೇ ಅವರನ್ನು ಪೊಲೀಸಿನವರು ಅರೆಸ್ಟ್ ಮಾಡಿದ್ರಲ್ಲ
ಸ್ಥಳೀಯ : ಹಾ ಸರ್ ಅವರೇನು ಅಷ್ಟೊಂದು ಟಚ್ ಅಲ್ಲಿ ಇರಲಿಲ್ಲ.. ಅವರು ಅವತ್ತೇನೆ ಮನೆಯನ್ನು ಖಾಲಿ ಮಾಡಿಬಿಟ್ರು
ಪಬ್ಲಿಕ್ ಟಿವಿ ಪ್ರತಿನಿಧಿ : ಅವರೇನು ಮನೆಗೆ ಎಷ್ಟು ಗಂಟೆಗೆ ಬರೋರು..?

ಸ್ಥಳೀಯ: ಅವರು ಬೆಳಗ್ಗೆ ಹೋದರೆ ಸಂಜೆ ಹೊತ್ತಿಗೆ ಬರೋರು.. ನಾವು ಅಷ್ಟೆ ಡ್ಯೂಟಿಯಲ್ಲಿದ್ದೀವಿ.. ನಾವು ಹೋಗೋದು ಸಂಜೆ ಆಗುತ್ತೆ.. ರಾತ್ರಿ 8 ಗಂಟೆ 9 ಗಂಟೆ ಮನೆ ಸೇರೋದು..
ಪಬ್ಲಿಕ್ ಟಿವಿ ಪ್ರತಿನಿಧಿ : ಇವರು ಎಷ್ಟು ವರ್ಷದಿಂದ ಆ ಮನೆಯಲ್ಲಿ ವಾಸ ಇದ್ರು..
ಬಾಡಿಗೆದಾರ : ಈ ಮನೆ ಕಟ್ಟಿದಾಗಿನಿಂದ ಇವರು ಮೂರನೇವರೋ ನಾಲ್ಕನೇಯವರೋ ಬಾಡಿಗೆಗೆ ಬಂದಿರೋದು. 6 ತಿಂಗಳಿಗೆ ಒಬ್ಬರು ಖಾಲಿ ಮಾಡೋರು, ಬೇರೆ ಬೇರೆಯವರು ಬರೋರು.. ಅದಕ್ಕೆ ನಾವು ಯಾರನ್ನೂ ಪರಿಚಯ ಮಾಡಿಕೊಂಡಿಲ್ಲ.
ಪಬ್ಲಿಕ್ ಟಿವಿ ಪ್ರತಿನಿಧಿ: ಬ್ಯಾಚುಲರ್ಸ್ ಇದ್ರಾ ಇವರೆಲ್ಲಾ..?

ಸ್ಥಳೀಯ: ಸುರೇಶ್ ಫ್ಯಾಮಿಲಿ ಇದ್ದರು.. 7-8 ವರ್ಷದ ಹುಡುಗಿ, 3-4 ವರ್ಷದ ಒಂದು ಹುಡುಗ ಇದ್ದ.. ಹೋಗೋವಾಗ ಬರೋವಾಗ ಮಕ್ಕಳು ಮೆಟ್ಟಿಲು ಮೇಲೆ ಕುಳಿತಿರುತ್ತಿದ್ದರು.. ತಮಾಷೆ ಮಾಡುತ್ತಿದ್ದೇವು. ಆದ್ರೆ ಸುರೇಶ್ ಎಂಬವರು ಸಿಕ್ಕಾಗ ಊಟ ಆಯ್ತ ಅಂದರೆ ಹು ಅನ್ನೋರು.. ನಮ್ಮನ್ನು ಕೇಳುತ್ತಿದ್ದರು.. ಆಯ್ತು ಎನ್ನುತ್ತಿದ್ವಿ. ಇಷ್ಟೆ ಸಾರ್ ಬೇರೆ ಏನು ಕಾಂಟ್ಯಾಕ್ಟ್ ಇರಲಿಲ್ಲ. ಮಾಧ್ಯಮಗಳಲ್ಲಿ ಸುದ್ದಿ ಬಂದ ಮೇಲೆ ಗೊತ್ತಾಗಿದ್ದು, ನಮ್ಮ ಬಿಲ್ಡಿಂಗ್‍ನಲ್ಲಿ ಇಂತಹ ಮನುಷ್ಯ ಇದ್ದಾನಾ ಅಂತಾ ಗೊತ್ತಾಯ್ತು..
ಪಬ್ಲಿಕ್ ಟಿವಿ ಪ್ರತಿನಿಧಿ: ಓನರ್ ಯಾರು ಸರ್..?

ಸ್ಥಳೀಯ : ಬಾಲಕೃಷ್ಣೇಗೌಡ ಅಂತಾ ಇನ್ಸ್ ಪೆಕ್ಟರ್ ಸರ್ ಅವರು
ಪಬ್ಲಿಕ್ ಟಿವಿ ಪ್ರತಿನಿಧಿ: ಬಾಲಕೃಷ್ಣೇಗೌಡ ಅಂತಾನಾ..? ನಾಗೇಶ್ ಅಂತಾನೋ..?
ಸ್ಥಳೀಯ : ಬಾಲಕೃಷ್ಣೇಗೌಡ ಸರ್.. ಮಾದನಾಯಕಹಳ್ಳಿ ಸ್ಟೇಷನ್ ಇನ್ಸ್ ಪೆಕ್ಟರ್ ಆಗಿದ್ದರು.. ಈಗ ಬೇರೆ ಕಡೆ ಟ್ರಾನ್ಸ್ ಫರ್ ಆಗಿದೆಯಂತೆ.. ಅವರು ಬಾಡಿಗೆ ಪಡೆಯಲು ಬರುತ್ತಿರಲಿಲ್ಲ ಸರ್. ಇಲ್ಲೇ ಒಬ್ಬರು ಪಕ್ಕದಲ್ಲಿ ಬಾಲಕೃಷ್ಣೇಗೌಡ ಅವರ ಪತ್ನಿ ಅಕ್ಕಂದಿರು ಇಬ್ಬರು ವಾಸವಾಗಿದ್ದಾರೆ.. ಅವರು ಬಾಡಿಗೆ ಪಡೆದುಕೊಳ್ಳುತ್ತಿದ್ದರು.. ಓನರ್‍ದು ಏನು ತೊಂದರೆ ಇಲ್ಲ.

ಈ ಸಂಬಂಧ ಎಸ್‍ಐಟಿ ಅಧಿಕಾರಿಗಳು ಮನೆಯ ಮಾಲೀಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ತನ್ನ ಸಂಬಂಧಿಗಳಿಗೆ ಮನೆಯನ್ನು ನೋಡಿಕೊಳ್ಳುವ ಹಾಗು ಬಾಡಿಗೆ ಪಡೆಯುವ ಜವಾಬ್ದಾರಿಯನ್ನು ಇನ್ಸ್‍ಪೆಕ್ಟರ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ತನ್ನ ಮನೆಯಲ್ಲಿ ಯಾರು ವಾಸವಿದ್ದರು ಎಂಬ ಬಗ್ಗೆ ಸರಿಯಾದ ಮಾಹಿತಿ ಇರಲಿಲ್ಲ ಎನ್ನಲಾಗುತ್ತಿದೆ. ಬೆಂಗಳೂರಲ್ಲಿ ಮನೆಯನ್ನು ಬಾಡಿಗೆ ನೀಡುವಾಗ ವ್ಯಕ್ತಿಯ ದಾಖಲಾತಿಗಳನ್ನು ಪಡೆದುಕೊಳ್ಳಬೇಕು ಎಂದು ಪೊಲೀಸರು ಸೂಚಿಸುತ್ತಾರೆ. ಆದ್ರೆ ಪೊಲೀಸ್ ಅಧಿಕಾರಿಯೇ ತನ್ನ ಮನೆಯನ್ನು ಬಾಡಿಗೆಗೆ ನೀಡುವಾಗ ದಾಖಲಾತಿಗಳನ್ನು ಪಡೆದುಕೊಳ್ಳದೇ ಇರೋದು ಎಷ್ಟು ಸರಿ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

https://www.youtube.com/watch?v=KvmLyga2M6c

Share This Article
Leave a Comment

Leave a Reply

Your email address will not be published. Required fields are marked *