‘ಗೌರಿ ದಿನ’ ಕಾರ್ಯಕ್ರಮ ಮೋದಿ, ಸಂಘ ಪರಿವಾರವನ್ನು ತೆಗಳುವ ಕಾರ್ಯಕ್ರಮವಾಯಿತೇ..?

Public TV
3 Min Read

ಬೆಂಗಳೂರು: ಗೌರಿ ಲಂಕೇಶ್ ಹುಟ್ಟಿದ ದಿನವಾದ ಸೋಮವಾರ ಗೌರಿ ಸ್ಮಾರಕ ಟ್ರಸ್ಟ್ ವತಿಯಿಂದ ಆಯೋಜನೆಗೊಂಡಿದ್ದ ‘ಗೌರಿ ದಿನ’ ಕಾರ್ಯಕ್ರಮ ಮೋದಿಗೆ ಮತ್ತು ಸಂಘ ಪರಿವಾರವನ್ನು ತೆಗಳಲು ಸೀಮಿತವಾಯಿತೇ ಎನ್ನುವ ಪ್ರಶ್ನೆ ಎದ್ದಿದೆ.

ಕಾರ್ಯಕ್ರಮ ನಡೆಯುವ ಮೊದಲು ಸಹೋದರ ಇಂದ್ರಜಿತ್ ಲಂಕೇಶ್ ಟೌನ್ ಹಾಲ್ ನಲ್ಲಿ ನಡೆಯಲಿರುವ ಕಾರ್ಯಕ್ರಮ ಸರ್ಕಾರಿ ಪ್ರಯೋಜಿತವಾಗಿದ್ದು ಸಿಎಂ ಸಿದ್ದರಾಮಯ್ಯನವರ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್ ಮಟ್ಟು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಹೀಗಾಗಿ ಈ ಕಾರ್ಯಕ್ರಮಕ್ಕೆ ತೆರಳುವುದಿಲ್ಲ ಎಂದು ತಿಳಿಸಿದ್ದರು.

ಈ ಹೇಳಿಕೆಗೆ ಪುಷ್ಟಿ ಎನ್ನುವಂತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅತಿಥಿಗಳು ಪ್ರಧಾನಿ ಮೋದಿ ಮತ್ತು ಸಂಘ ಪರಿವಾರದ ವಿರುದ್ಧ ವಾಗ್ದಾಳಿ ನಡೆಸಲು ವೇದಿಕೆಯನ್ನು ಬಳಸಿಕೊಂಡಿದ್ದು ಮಾತ್ರವಲ್ಲದೇ ಸಿಎಂ ಸಿದ್ದರಾಮಯ್ಯಮನವರನ್ನು ಹೊಗಳಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತವಾಗಿದೆ.

ಗೌರಿ ಹತ್ಯೆಯ ಬಗ್ಗೆ ರಾಜ್ಯ ಸರ್ಕಾರ ನೇಮಿಸಿದ ವಿಶೇಷ ತನಿಖಾ ತಂಡ ತನಿಖೆ ನಡೆಸುತ್ತಿದ್ದು ಆರೋಪಿಗಳ ರೇಖಾಚಿತ್ರ ಇಂದು ಬಿಡುಗಡೆಯಾಗಿದ್ದು ಬಿಟ್ಟರೆ ಇದೂವರೆಗೂ ಆರೋಪಿಗಳ ಬಂಧನ ಆಗಿಲ್ಲ. ಹೀಗಾಗಿ ಆರೋಪಿಗಳ ಬಂಧಿಸದ ರಾಜ್ಯ ಸರ್ಕಾರದ ವಿರುದ್ಧ ಟೀಕೆ ಮಾಡುವುದನ್ನು ಬಿಟ್ಟು ಕೇಂದ್ರದ ವಿರುದ್ಧ ಟೀಕೆ ಮಾಡಿದ್ದು ಎಷ್ಟು ಸರಿ ಎಂದು ಜನ ಕೇಳುತ್ತಿದ್ದಾರೆ.

ಸಹೋದರಿ ಕವಿತಾ ಲಂಕೇಶ್ ರಾಜ್ಯ ಸರ್ಕಾರ ತನಿಖೆಯಲ್ಲಿ ನಮಗೆ ನಂಬಿಕೆ ಇದೆ. ಈ ಪ್ರಕರಣವನ್ನು ಯಾವುದೇ ಕಾರಣಕ್ಕೆ ಸಿಬಿಐ ತನಿಖೆಗೆ ನೀಡಬಾರದು. ಈಗಾಗಲೇ ನೀಡಿರುವ ಪ್ರಕರಣದಲ್ಲಿ ಯಾವುದೇ ಫಲಿತಾಂಶ ಲಭಿಸಿಲ್ಲ. ಎಸ್‍ಐಟಿ ತನಿಖೆ ಅಂತಿಮ ಹಂತದಲ್ಲಿದ್ದು, ಶೀಘ್ರವೇ ಹಂತಕರನ್ನು ಬಂಧಿಸುವ ವಿಶ್ವಾಸವಿದೆ. ಪ್ರಕರಣವನ್ನು ಮತ್ತೆ ಸಿಬಿಐ ಗೆ ವಹಿಸುವುದರಿಂದ ವಿಚಾರಣೆ ಮತ್ತೆ ಒಂದು ವರ್ಷ ಹಿಂದುಳಿಯುವ ಸಂಭವವಿದೆ ಎಂದು ಪಬ್ಲಿಕ್ ಟಿವಿಗೆ ತಿಳಿಸಿದ್ದರು.

ಆರೋಪಿಗಳ ಬಂಧನ ಇನ್ನೂ ಆಗಿಲ್ಲ. ಹೀಗಿರುವಾಗ ವೇದಿಕೆಯಲ್ಲಿದ್ದ ಜೆಎನ್‍ಯು ಮುಖಂಡ ಕನ್ಹಯ್ಯ ಕುಮಾರ್, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆ ಸ್ವಾಮಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರೆ, ಗುಜರಾತ್ ಪಕ್ಷೇತರ ಶಾಸಕ ದಲಿತ ಮುಖಂಡ ಜಿಗ್ನೇಶ್ ಮೇವಾನಿ ಮೋದಿಯನ್ನು ಟೀಕಿಸುವುದರ ಜೊತೆಗೆ ಸಿದ್ದರಾಮಯ್ಯ ಸರ್ಕಾರವನ್ನು ಹೊಗಳಿದರು.

ದೊರೆಸ್ವಾಮಿ ನರೇಂದ್ರ ಮೋದಿ ಅವರನ್ನು ದೇಶದಿಂದ ಓಡಿಸಿ ಎಂದು ಕರೆ ನೀಡಿದರೆ, ಕನ್ಹಯ್ಯ ಕುಮಾರ್ ಇಲ್ಲಿ ಸೇರಿದವರೆಲ್ಲ ಗೌರಿ ಪರಿವಾರದವರು, ಇಲ್ಲಿ ಯಾರೂ ಸಂಘ ಪರಿವಾರದವರಿಲ್ಲ. ಗೌರಿ ಪರಿವಾರವು ಸಂಘ ಪರಿವಾರಕ್ಕೆ ಹೊಡೆತ ಕೊಟ್ಟೇ ಕೊಡುತ್ತದೆ ಎಂದು ಹೇಳಿದರು.  ಇದನ್ನೂ ಓದಿ: ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಓಡಿಸಿ: ಮೋದಿ ವಿರುದ್ಧ ದೊರೆಸ್ವಾಮಿ ಗುಡುಗು

ಗುಜರಾತ್ ಚುನಾವಣೆಯಲ್ಲಿ ನಿಂತು ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿರುವ ಜಿಗ್ನೇಶ್ ಮೇವಾನಿ, ಕರ್ನಾಟಕದಲ್ಲೂ ಚುನಾವಣೆ ಬರುತ್ತಿದ್ದು ಚಡ್ಡಿಗಳನ್ನು ಸೋಲಿಸಲು ಕರ್ನಾಟಕದ ಎಲ್ಲ ರಾಜಕೀಯ ಪಕ್ಷಗಳು ಒಂದಾಗಬೇಕು. ಚುನಾವಣೆ ವೇಳೆ ಮೂರು ವಾರ ಕರ್ನಾಟಕದಲ್ಲಿಯೇ ಇದ್ದು ಬಿಜೆಪಿ ವಿರುದ್ಧ ಪ್ರಚಾರ ಮಾಡುತ್ತೇನೆ ಎಂದು ಹೇಳಿ ಕರ್ನಾಟಕ ಸರ್ಕಾರಕ್ಕೆ ದಲಿತರ ಬಗ್ಗೆ ಆದಿವಾಸಿಗಳ ಬಗ್ಗೆ ಕಾಳಜಿ ಇದೆ. ಇವರಿಗೆ ಜಮೀನು ನೀಡಿ ಸಹಕರಿಸುತ್ತಿದೆ ಎಂದು ಹೇಳಿ ಸಿಎಂ ಸಿದ್ದರಾಮಯ್ಯನವರನ್ನು ಹೊಗಳಿದರು. ಅಷ್ಟೇ ಅಲ್ಲದೇ ಚಡ್ಡಿಗಳು ಅಧಿಕಾರಕ್ಕೆ ಬರಬಾರದು, ಮೋದಿ ಯಾವುದೇ ಕಾರಣಕ್ಕೆ ಮುಂದೆ ಪ್ರಧಾನಿಯಾಗಬಾರದು. ಮೋದಿ ನಿವೃತ್ತಿ ಪಡೆದುಕೊಳ್ಳುವುದು ಉತ್ತಮ ಎಂದರು. ಇದನ್ನೂ ಓದಿ: ಗೌರಿ ದಿನಕ್ಕೆ ಸರ್ಕಾರ ಪ್ರಯೋಜಕತ್ವ ನೀಡಿಲ್ಲ, ಪೊಲೀಸ್ ತನಿಖೆ ತೃಪ್ತಿ ನೀಡಿದೆ : ಕವಿತಾ ಲಂಕೇಶ್

2017ರ ಸೆಪ್ಟೆಂಬರ್ ನಲ್ಲಿ ಗೌರಿ ಹತ್ಯೆ ಖಂಡಿಸಿ ‘ನಾನು ಗೌರಿ’ ಹೆಸರಿನಲ್ಲಿ ದೊಡ್ಡ ಮಟ್ಟದ ಪ್ರತಿರೋಧ ಸಮಾವೇಶ ನಡೆದಿತ್ತು. ಈ ಸಮಾವೇಶದಲ್ಲೂ ಅತಿಥಿಗಳು ಮೋದಿ, ಸಂಘ ಪರಿವಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈಗ ಎರಡನೇ ಬಾರಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ನಡೆದಿದ್ದು ಮತ್ತೊಮ್ಮೆ ಟೀಕೆಗಳು ರಿಪೀಟ್ ಆಗಿದೆ. ಗೌರಿ ಅಭಿಮಾನಿಗಳು ಮೋದಿ, ಸಂಘ ಪರಿವಾರದ ವಿರುದ್ಧ ಟೀಕೆ ಮಾಡಿದರೂ ಸರ್ಕಾರಕ್ಕೆ ಚುನಾವಣೆಯ ಒಳಗಡೆ ಹಂತಕರನ್ನು ಬಂಧಿಸಲೇಬೇಕಾದ ಅನಿವಾರ್ಯತೆಯಲ್ಲಿದೆ. ಒಂದು ವೇಳೆ ಬಂಧನವಾಗದೇ ಇದ್ದರೆ ಚುನಾವಣೆಯಲ್ಲೂ ಈ ವಿಚಾರ ಪ್ರಚಾರದ ವಸ್ತುವಾಗಿ ರಾಜಕೀಯ ಪಕ್ಷಗಳ ವಾಕ್ಸಮರಕ್ಕೆ ಕಾರಣವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದನ್ನೂ ಓದಿ: ಗೌರಿಯನ್ನು ಮೌನ ಮಾಡಿದಾಗ ನಾನು, ನನ್ನಂತಹ ಹಲವರು ಹುಟ್ಟುತ್ತಾರೆ: ಪ್ರಕಾಶ್ ರೈ

ಗೌರಿ ಹತ್ಯೆ ಹಾಗೂ ಮೋದಿ ಸರ್ಕಾರಕ್ಕೆ ಏನು ಸಂಬಂಧ ಎನ್ನುವುದನ್ನು ಯಾವುದೇ ಭಾಷಣಕಾರರೂ ತಿಳಿಸುವ ಯತ್ನ ಮಾಡಲಿಲ್ಲ. ಜೊತೆಗೆ ರಾಜ್ಯ ಸರ್ಕಾರವನ್ನು, ವಿಚಾರಣೆ ನಡೆಸುತ್ತಿರುವ ಎಸ್‍ಐಟಿಯನ್ನೂ ಪ್ರಶ್ನಿಸಲಿಲ್ಲ ಎನ್ನುವುದು ಮಾತ್ರ ವಿಪರ್ಯಾಸದ ವಿಚಾರ. ಇದನ್ನೂ ಓದಿ: `ಗೌರಿ ದಿನ’ ಕಾರ್ಯಕ್ರಮದಲ್ಲಿ ಭಾಗವಹಿಸಲ್ಲ ಎಂದ ಸಹೋದರ ಇಂದ್ರಜಿತ್ ಲಂಕೇಶ್

Share This Article
Leave a Comment

Leave a Reply

Your email address will not be published. Required fields are marked *