ಗೌರಿ ಹತ್ಯೆ ಪ್ರಕರಣ – ಬಂಧಿತ ನಾಲ್ವರು 10 ದಿನ ಎಸ್‍ಐಟಿ ವಶಕ್ಕೆ: ನ್ಯಾಯಾಲಯದಲ್ಲಿ ಇಂದು ಏನಾಯ್ತು?

Public TV
1 Min Read

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‍ಐಟಿ ಬಂಧಿಸಿದ್ದ ನಾಲ್ವರು ಆರೋಪಿಗಳನ್ನು ನ್ಯಾಯಾಲಯ 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.

ಎಸ್‍ಐಟಿ ಬಂಧಿಸಿರುವ ಪ್ರಮುಖ ಆರೋಪಿಗಳಾದ ಶಿಕಾರಿಪುರ ಮೂಲದ ಸುಜಿತ್ ಕುಮಾರ್, ಪ್ರವೀಣ್, ಪುಣೆ ಮೂಲದ ಅಮೂಲ್ ಕಾಳೆ, ಮೂಲದ ಮಹಾರಾಷ್ಟ್ರ ಅಮೀತ್ ದೇಗ್ವೇಕರ್, ಪ್ರದೀಪ್ ಮಹಾಜನ್, ವಿಜಯಪುರ ಮೂಲದ ಮನೋಹರ್ ದುಂಡಪ್ಪಯವಡೆ ಸೇರಿ ನಾಲ್ವರನ್ನ ಎಸ್ ಐಟಿ ನಗರದ ಒಂದನೇ ಎಸಿಎಂಎಂ ನ್ಯಾಯಾಲಯ ಮುಂದೇ ಹಾಜರುಪಡಿಸಿತ್ತು.

ತನಿಖೆಯ ವೇಳೆ ಗೌರಿ ಲಂಕೇಶ್ ಹತ್ಯೆಗೆ ಸಂಬಂಧಪಟ್ಟ ಎಂಟು ಮಹತ್ವವಾದ ದಾಖಲೆಗಳು ಸಿಕ್ಕಿವೆ. ಹಾಗಾಗಿ ಆರೋಪಿಗಳ ಹೆಚ್ಚಿನ ತನಿಖೆಗೆ ಒಳಪಡಿಸುವ ಅವಶ್ಯಕತೆ ಇದ್ದು, ವಶಕ್ಕೆ ಪಡೆಯಲು ಅನುಮತಿ ನೀಡಲು ಎಸ್‍ಐಟಿ ಹೆಚ್ಚುವರಿ ತನಿಖಾಧಿಕಾರಿ ರಂಗಪ್ಪ ನ್ಯಾಯಧೀಶರಿಗೆ ಮನವಿ ಮಾಡಿದರು. ಎಸ್ ಐಟಿ ಅಧಿಕಾರಿಗಳ ಮನವಿ ಪುರಸ್ಕರಿಸಿದ ಒಂದನೇ ಎಸಿಎಂಎಂ ನ್ಯಾಯಾಲಯ ಹತ್ತು ದಿನಗಳ ಕಾಲ ಆರೋಪಿಗಳನ್ನು ತನಿಖಾಧಿಕಾರಿಗಳ ವಶಕ್ಕೆ ನೀಡಿ ಆದೇಶಿಸಿದರು.

ಈ ವೇಳೆ ಬಂಧಿತ ಆರೋಪಿಗಳು ಅಧಿಕಾರಿಗಳ ವಿರುದ್ಧ ಹಲವು ಆರೋಪಗಳನ್ನು ಮಾಡಿದರು. ತಮಗೂ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಆಧಿಕಾರಿಗಳು ಕಿರುಕುಳ ನೀಡುತ್ತಿದ್ದು, ವಕೀಲರು ಹಾಗೂ ಮನೆಯ ಸದಸ್ಯರನ್ನು ಸಂಪರ್ಕ ಮಾಡಲು ಅವಕಾಶ ನೀಡುತ್ತಿಲ್ಲ ಎಂದು ನ್ಯಾಯಮೂರ್ತಿಗಳ ಮುಂದೆ ಮನವಿ ಮಾಡಿದರು. ಆರೋಪಿಗಳ ಮಾತು ಆಲಿಸಿದ ನ್ಯಾಯಾಧೀಶರು ಅನಗತ್ಯ ಕಿರುಕುಳ ನೀಡಬಾರದೆಂದು ಸೂಚನೆ ನೀಡಿ, ವಕೀಲರು ಹಾಗೂ ಕುಟುಂಬ ಸದಸ್ಯರ ಸಂಪರ್ಕಕ್ಕೆ ಅವಕಾಶ ನೀಡಲು ಆದೇಶ ನೀಡಿದರು. ಅಲ್ಲದೇ ಅಧಿಕಾರಿಗಳ ತನಿಖೆಗೆ ಸಹಕಾರ ನೀಡುವಂತೆ ಆರೋಪಿಗಳಿಗೂ ಸೂಚಿಸಿದರು.

ಗೌರಿ ಲಂಕೇಶ್ ಹತ್ಯೆ ಪ್ರಕರಣ ಬಂಧಿಯಾಗಿರುವ ನಾಲ್ವರು ಆರೋಪಿಗಳು ಭಗವಾನ್ ಹತ್ಯೆಗೆ ಸಂಚು ಮಾಡಿದ್ದರು ಎಂಬ ಆರೋಪ ಮಾಡಲಾಗಿದೆ. ಆರೋಪಿಗಳ ಬಳಿ 43 ಮೊಬೈಲ್ ಪತ್ತೆ ಆಗಿದೆ ಎಂಬ ಮಾಹಿತಿ ಲಭಿಸಿದ್ದು, ಮಹಾರಾಷ್ಟ್ರ, ಗೋವಾ, ಕರ್ನಾಟಕದಲ್ಲೇ ಕುಳಿತು ಹತ್ಯೆಗೆ ಸಂಚು ರೂಪಿಸಿದ್ದರು. ಈ ಬಗ್ಗೆ ಡೈರಿ ಸಿಕ್ಕಿದೆ ಎಂಬ ಮಾಹಿತಿಯನ್ನು ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *