ರಾಯಚೂರು: ಸಾಮಾನ್ಯವಾಗಿ ಕಳ್ಳತನಗಳು ರಾತ್ರಿ ವೇಳೆ ನಡೆಯುತ್ತವೆ. ಆದ್ರೆ ರಾಯಚೂರಿನಲ್ಲೊಂದು ಡಿಫರೆಂಟ್ ಗ್ಯಾಂಗ್ ಓಡಾಡುತ್ತಿದೆ. ಕಳೆದ 15 ದಿನಗಳಿಂದ ಮಧ್ಯಾಹ್ನ ಆದ್ರೆ ಸಾಕು ಒಂದು ಕಳ್ಳತನ ನಡೆದಿರುತ್ತೆ.
ರಾಯಚೂರು ತಾಲೂಕಿನ ಆಂಧ್ರಪ್ರದೇಶದ ಗಡಿ ಭಾಗದ ಗ್ರಾಮಗಳಲ್ಲಿ ಮಧ್ಯಾಹ್ನ ಆದ್ರೆ ಸಾಕು ಜನ ಮನೆಗೆ ಓಡುತ್ತಾರೆ. ಒಂದು ವೇಳೆ ಮಧ್ಯಾಹ್ನ ಮನೆಗೆ ಹೋಗೋದು ಮರೆತ್ರೆ ಮನೆ ಕಳ್ಳತನ ಗ್ಯಾರೆಂಟಿ. ತಾಲೂಕಿನ ಸರ್ಜಾಪುರ, ಸಗಮಕುಂಟಾ, ನಾಗನದೊಡ್ಡಿ, ಅಪ್ಪನದೊಡ್ಡಿ, ಚಂದ್ರಬಂಡಾ, ಯಾಪಲದಿನ್ನಿ, ರಾಳದೊಡ್ಡಿ ಗ್ರಾಮಗಳಲ್ಲಿ ಸತತವಾಗಿ ಕಳ್ಳತನ ನಡೆದಿದೆ. ಮಧ್ಯಾಹ್ನ ಒಂದು ಗಂಟೆಯಿಂದ ಎರಡು ಗಂಟೆ ಸಮಯದೊಳಗೆ ಕಳ್ಳರ ಗ್ಯಾಂಗ್ ತಮ್ಮ ಕರಾಮತ್ತು ತೋರಿಸಿ ಮಾಯವಾಗುತ್ತಿದ್ದಾರೆ. ಮನೆ ಬೀಗ ಒಡೆದು ಸಿಕ್ಕ ವಸ್ತುಗಳನ್ನ ಕದ್ದು ಪರಾರಿಯಾಗುತ್ತಿದ್ದಾರೆ.
ಉತ್ತಮ ಮಳೆ ಹಿನ್ನೆಲೆಯಲ್ಲಿ ಗ್ರಾಮಸ್ಥರು ಕೃಷಿ ಚಟುವಟಿಕೆಗಳಲ್ಲಿ ತೊಡಗಿರುತ್ತಾರೆ. ಇನ್ನು ಮನೆಯ ಮಕ್ಕಳು ಶಾಲೆಗೆ ಹೋಗಿರುತ್ತಾರೆ. ಹೀಗಾಗಿ ಮನೆಗಳಿಗೆ ಬೀಗ ಹಾಕಿರುವುದನ್ನೇ ಬಂಡವಾಳ ಮಾಡಿಕೊಂಡ ಕಳ್ಳರು ಅಂತಹ ಮನೆಗಳನ್ನ ಗುರುತಿಸಿ ಕಳ್ಳತನ ಮಾಡುತ್ತಿದ್ದಾರೆ. ಇದುವರೆಗೆ ಎಂಟಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿವೆ. ರಾಳದೊಡ್ಡಿ ಒಂದರಲ್ಲೆ ಹನಮಂತು ಹಾಗೂ ಅವರ ಸಹೋದರನ ಮನೆ ಕಳ್ಳತನವಾಗಿದ್ದು 450 ಗ್ರಾಂ ಚಿನ್ನ, 600 ಗ್ರಾಂ ಬೆಳ್ಳಿ, 4 ಲಕ್ಷ 10 ಸಾವಿರ ನಗದು ದೋಚಿದ್ದಾರೆ. ಉಳಿದ ಎಲ್ಲಾ ಪ್ರಕರಣಗಳಿಂದ ಬಡ ಕೃಷಿಕರ ಲಕ್ಷಾಂತರ ರೂಪಾಯಿ ಹಣ ಕಳ್ಳತನವಾಗಿದೆ.
ಮಧ್ಯಾಹ್ನ ಕಳ್ಳರ ಗ್ಯಾಂಗ್ನ ಕರಾಮತ್ತಿನಿಂದ ಯಾಪಲದಿನ್ನಿ ಠಾಣೆ ಪೊಲೀಸರು ನಿದ್ದೆ ಕೆಡಿಸಿಕೊಂಡಿದ್ದಾರೆ. ಹದಿನೈದು ದಿನಗಳಿಂದ ಕಳ್ಳತನ ಪ್ರಕರಣಗಳು ಬೆಳಕಿಗೆ ಬರುತ್ತಿದ್ದರೂ ಕಳ್ಳರ ಸುಳಿವು ಮಾತ್ರ ಇದುವರೆಗೂ ಸಿಕ್ಕಿಲ್ಲ. ಈಗಲಾದ್ರೂ ಪೊಲೀಸ್ ಇಲಾಖೆ ಚುರುಕಿನ ಕಾರ್ಯಾಚರಣೆಗೆ ಮುಂದಾಗಿ ಕಳ್ಳರ ಗ್ಯಾಂಗ್ ಸೆರೆ ಹಿಡಿಯಬೇಕಿದೆ.