ಚಿಕ್ಕಬಳ್ಳಾಪುರ | ತುಂಬಿದ ಬಸ್‌ಗಳಲ್ಲಿ ಕೈಚಳಕ ತೋರಿಸ್ತಿದ್ದ ಕಳ್ಳಿಯರ ಗ್ಯಾಂಗ್‌‌ ಲಾಕ್‌

Public TV
1 Min Read

ಚಿಕ್ಕಬಳ್ಳಾಪುರ: ಶಕ್ತಿ ಯೋಜನೆ (Shakti Scheme) ಮೂಲಕ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿದ್ದೇ ತಡ.. ಕೆಲ ಮಹಿಳೆಯರು ಪ್ರವಾಸ, ತವರು ಮನೆ, ನೆಂಟರ ಮನೆಗಳಿಗೆ ಅಂತ ಮೈತುಂಬಾ ಚಿನ್ನಾಭರಣ ಹಾಕಿಕೊಂಡು ಬಸ್ ಹತ್ತುತ್ತಾರೆ. ಆದ್ರೆ ಅಂಥವರನ್ನೆ ಟಾರ್ಗೆಟ್ ಮಾಡಿದ್ದ ಅದೊಂದು ಕಳ್ಳಿಯರ ಗ್ಯಾಂಗ್, ತುಂಬಿದ್ದ ಬಸ್ ಹತ್ತಿ ಮಹಿಳೆಯರ ಚಿನ್ನಾಭರಣಗಳಿಗೆ (Gold Jewelry) ಕನ್ನ ಹಾಕ್ತಿದ್ರು. ಈಗ ಆ ಗ್ಯಾಂಗ್ ಪೊಲೀಸರ ಅತಿಥಿಯಾಗಿದೆ.

ಈ ಗ್ಯಾಂಗ್‌ನ ಕಳ್ಳಿಯರು (Women Theft Gang) ಬಸ್ ಹತ್ತಿದ್ರೆ ಸಾಕು ಪ್ರಯಾಣಿಕರ ಜೇಬಲ್ಲಿ ಇರೋ ದುಡ್ಡು ಕ್ಷಣ ಮಾತ್ರದಲ್ಲಿ ಮಾಯವಾಗ್ತಿತ್ತು. ಇನ್ನೂ ಮೈಮೇಲೆ ಇರೋ ಒಡವೆಗಳು ಮಂಗಮಾಯ ಆಗ್ತಿತ್ತು. ಆಕೆಯ ಹೆಸರು ತುಳಸಿ (22), ಮತ್ತಿಬ್ಬರ ಹೆಸರು ಪ್ರೇಮಾ (21), ಸೋನಿಯಾ (25). ಮೂವರೂ ಕಲಬುರಗಿ ಮೂಲದವರು. ಶಕ್ತಿ ಯೋಜನೆಯಡಿ ಮಹಿಳೆಯರು ಮುಗಿಬಿದ್ದು ಬಸ್‌ಗಳಲ್ಲಿ ಪ್ರಯಾಣ ಮಾಡ್ತಿದ್ದಂತೆ ಇವರ ಆದಾಯ ಏರಿಕೆಯಾಗಿದೆಯಂತೆ. ತುಂಬಿದ ಬಸ್‌ಗಳಲ್ಲಿ ಮಹಿಳೆಯರು ಬಸ್ ಹತ್ತುವಾಗ ಇಳಿಯುವಾಗ ಈ ಮೂವರು ಸುಂದರಿಯರು. ಮಹಿಳೆಯರ ಬ್ಯಾಗ್‌ನಲ್ಲಿದ್ದ ಹಣ, ಕತ್ತಲ್ಲಿದ್ದ ಚಿನ್ನಾಭರಣಗಳನ್ನು ಕಳ್ಳತನ ಮಾಡ್ತಿದ್ರು. ಇದನ್ನೂ ಓದಿ: ಕಾಮಿಡಿ ಕಿಲಾಡಿಗಳು ಖ್ಯಾತಿಯ ಚಂದ್ರಶೇಖರ್ ಸಿದ್ದಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ಇನ್ನೂ ಚಿಕ್ಕಬಳ್ಳಾಪುರ ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣವೇ ಈ ಮೂವರು ಕಳ್ಳಿಯರ ಅಡ್ಡೆಯಾಗಿತ್ತು. ಇತ್ತೀಚಿಗೆ ಎರಡು ಕಳ್ಳತನ ಪ್ರಕರಣಗಳು ದಾಖಲಾಗಿದ್ದವು. ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು, ಸಿಸಿಟಿವಿಯಲ್ಲಿ ದಾಖಲಾದ ವಿಡಿಯೊ ಜಾಡು ಹಿಡಿದು ತನಿಖೆ ಕೈಗೊಂಡಿದ್ರು. ಕೊನೆಗೆ ಚಿಕ್ಕಬಳ್ಳಾಪುರದಿಂದ ಕಲಬುರಗಿವರೆಗೂ ಪ್ರಯಾಣ ಮಾಡಿ ಮೂವರು ಕಳ್ಳಿಯರನ್ನ ಬಂಧಿಸಿದ್ದಾರೆ. ಬಂಧಿತರಿಂದ 7 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

ಒಟ್ಟಿನಲ್ಲಿ ಮಹಿಳೆಯರು ತುಂಬಿದ ಬಸ್‌ಗಳನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ಕಳ್ಳಿಯರು ಕಳ್ಳತನ ಮಾಡುವುದನ್ನೇ ವೃತ್ತಿ ಮಾಡಿಕೊಂಡಿದ್ರು. ಆದ್ರೆ ಪೊಲೀಸರು ಈಗ ಆರೋಪಿಗಳನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಎಣ್ಣೆಯಲ್ಲಿ ಫ್ಯಾಟ್ ಚೆಕಿಂಗ್‌ಗೆ ಮುಂದಾದ ಹೋಟೆಲ್‌ ಮಾಲೀಕರು – ಡಿವೈಸ್ ಬೆಲೆ ಕೇಳಿ ಸುಸ್ತು!

Share This Article