ದೇಶಾದ್ಯಂತ ಗಣೇಶ ಹಬ್ಬದ (Ganesh Chaturthi 2025) ಸಂಭ್ರಮ ಮನೆ ಮಾಡಿದೆ. ವಿಘ್ನೇಶ್ವರನ ಭಕ್ತರು ಬಗೆಬಗೆಯ ಗಣೇಶ ಮೂರ್ತಿಗಳನ್ನ ಮನೆ, ಮಂದಿರ, ಏರಿಯಾಗಳಲ್ಲಿ ಕೂರಿಸಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಸಕಲ ವಿಘ್ನ ನಿವಾರಣೆಯಾಗಲಿ ವಿನಾಯಕ ನಂಬಿದ ಭಕ್ತರಿಗೆ ಬುದ್ಧಿ, ಆಯುಷ್ಯ, ಆರೋಗ್ಯ, ಸಂತೋಷ ಮತ್ತು ಸಮೃದ್ಧಿ ದಯಪಾಲಿಸುತ್ತಾನೆ ಎಂಬ ನಂಬಿಕೆಯೊಂದಿಗೆ ಗಣೇಶೋತ್ಸವ ಆಚರಣೆ ಮಾಡುತ್ತಿದ್ದಾರೆ.
ಗಣೇಶ ಚತುರ್ಥಿ ಹಬ್ಬ ಆಚರಣೆಗೆಂದೇ ದೇಶಾದ್ಯಂತ ನಾನಾ ಕಡೆ ಚಿತ್ತಾಕರ್ಷಕ ಗಣೇಶ ಮೂರ್ತಿಗಳ (Ganesha Idol) ಮಾರಾಟ ನಡೆಯುತ್ತಿದೆ. ಗಲ್ಲಿ-ಗಲ್ಲಿಯಲ್ಲಿ ಗಣೇಶನ ಮೂರ್ತಿ ಕೂರಿಸಿ ಪೂಜೆ ನಡೆಯುತ್ತದೆ. ಬಳಿಕ ವಿಸರ್ಜನೆಯೂ ಅಷ್ಟೇ ವಿಜ್ರಂಭಣೆಯಿಂದ ಆಗುತ್ತದೆ. ಆದ್ರೆ ಪ್ರತಿ ವರ್ಷ ಗಣೇಶ ಚತುರ್ಥಿ ಆಚರಣೆ ಮುಂಬೈನಲ್ಲಿ ಭಾರೀ ವಿಶೇಷ. ಮುಂಬೈನಲ್ಲಿ ಹಲವು ದಶಕಗಳಿಂದ ಕೆಲ ಸಂಘಟನೆಗಳು ಗಣೇಶ ಹಬ್ಬ ಆಚರಿಸುತ್ತಾ ಬರುತ್ತಿದೆ. ಈ ಪೈಕಿ ಜಿಎಸ್ಬಿ ಸೇವಾ ಮಂಡಲ್ (GSB Seva Mandal) ಕೂಡ ಒಂದು. ಪ್ರತಿ ಬಾರಿಯೂ ಗಣೇಶ್ ಮೂರ್ತಿ, ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸುತ್ತಲೇ ಗಮನ ಸೆಳೆಯುವ ಮಂಡಲ್ ಈ ಬಾರಿಯೂ ವಿಶ್ವದ ಹಾಗೂ ದೇಶದ ಶ್ರೀಮಂತ ಗಣಪನನ್ನು ಕೂರಿಸುವ ಮೂಲಕ ಹೆಗ್ಗಳಿಕೆಗೆ ಪಾತ್ರವಾಗಿದೆ. ಜಿಎಸ್ಬಿ ಗಣಪನಿಗೆ ಈ ಬಾರಿ ದಾಖಲೆಯ 474.46 ಕೋಟಿ ರೂ. ವಿಮೆ ಮಾಡಿಸಲಾಗಿದೆ. ಕಳೆದ ವರ್ಷ 400.58 ಕೋಟಿ ರೂ. ವಿಮೆ ಮಾಡಲಾಗಿತ್ತು. ಆದ್ರೆ ಈ ಗಣೇಶ ಮೂರ್ತಿಯ ಅಧಿಕೃತ ಬೆಲೆ ಎಷ್ಟು ಎಂದು ಮಂಡಲ್ ಸುಳಿವು ಬಿಟ್ಟುಕೊಟ್ಟಿಲ್ಲ. ಇದನ್ನೂ ಓದಿ: ಮಕ್ಕಳಿಗೆ ಗಣೇಶ ಅಂದ್ರೆ ಯಾಕಿಷ್ಟ ಗೊತ್ತಾ…? ಗಣಪನಿಗೂ ಪುಟಾಣಿಗಳಿಗೂ ಇದೆ ತುಂಟ ಸಂಬಂಧ!
ಮುಂಬೈನ ಜಿಎಸ್ಬಿ ಸೇವಾ ಮಂಡಲ ಈ ಬಾರಿಯೂ 5 ದಿನಗಳ ಗಣೇಶೋತ್ಸವ ಆಚರಿಸಲಿದೆ. ಆಗಸ್ಟ್ 27ರಿಂದ 5 ದಿನಗಳ ಕಾಲ ಅದ್ಧೂರಿಯಾಗಿ ಗಣೇಶೋತ್ಸವ ನಡೆಯಲಿದೆ. ಜಿಎಸ್ಬಿ ಗಣೇಶನ ದರ್ಶನ ಪಡೆಯಲು ಈಗಾಗಲೇ ಭಕ್ತರು ಸಜ್ಜಾಗಿದ್ದಾರೆ. ಆದರೆ ಗಣೇಶನ ಅನಾವರಣ ಆ.27ರಂದು ಸಿಯಾನ್ನ ಕಿಂಗ್ಸ್ ಸರ್ಕಲ್ನಲ್ಲಿ ಜಿಎಸ್ಬಿ ಸೇವಾ ಮಂಡಲ ಮಾಡಲಿದೆ. ಜಿಎಸ್ಬಿ ಸೇವಾ ಮಂಡಲ್ ಪ್ರತಿ ವರ್ಷ ಗಣೇಶೋತ್ಸವಕ್ಕೆ ಕೋಟಿ ಕೋಟಿ ರೂಪಾಯಿ ಖರ್ಚು ಮಾಡುತ್ತದೆ. ಈ ಬಾರಿ 71ನೇ ವರ್ಷದ ಗಣೇಶೋತ್ಸವದ ಕಾರಣ ವಿಮೆ ಮೊತ್ತವನ್ನು ಏರಿಸಲಾಗಿದೆ ಎಂದು ಜಿಎಸ್ಬಿ ಸೇವಾ ಮಂಡಲ್ನ ಅಧ್ಯಕ್ಷ ಅಮಿತ್ ಪೈ ತಿಳಿಸಿದ್ದಾರೆ.
ಜಿಎಸ್ಬಿ ಮಂಡಲ್ ಈ ಬಾರಿ ಗಣೇಶಮೂರ್ತಿಗೆ ಬರೋಬ್ಬರಿ 69 ಕೆಜಿ ಚಿನ್ನ, 336 ಕೆಜಿ ಬೆಳ್ಳಿ ಹಾಗೂ ಇತರ ಅತ್ಯಮೂಲ್ಯ ಆಭರಣಗಳನ್ನು ತೊಡಿಸಲಾಗುತ್ತದೆ. ಹೀಗಾಗಿ ಇದಕ್ಕೆ ಅಷ್ಟೇ ದುಬಾರಿ ಮೊತ್ತದ ವಿಮೆ ಮಾಡಿಸಲಾಗಿದೆ. 474.46 ಕೋಟಿ ರೂ. ವಿಮೆ ಮೊತ್ತಕ್ಕೆ ಪ್ರಿಮಿಯಂ ಎಷ್ಟು ಪಾವತಿ ಮಾಡಲಾಗಿದೆ ಅನ್ನೋ ಕುರಿತು ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಇದನ್ನೂ ಓದಿ: ಈ ಬಾರಿ ಗಣೇಶೋತ್ಸವದಲ್ಲಿ ರಾರಾಜಿಸಲಿದೆ ಧರ್ಮಸ್ಥಳ
ಪ್ರತೀ ವರ್ಷದಂತೆ ಈ ವರ್ಷವೂ 5 ದಿನಗಳ ಗಣೇಶೋತ್ಸವ ಆಚರಿಸಲಾಗುತ್ತಿದೆ. ಎಂದಿನಂತೆ ಪರಿಸರಕ್ಕೆ ಪೂರಕವಾದ ಗಣೇಶ ಮೂರ್ತಿಯನ್ನು ತಯಾರಿಸಲಾಗಿದೆ. ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಸೇರಿದಂತೆ ಯಾವುದೇ ಹಾನಿಕಾರ ವಸ್ತುಗಳ ಬಳಕೆ ಮಾಡಿಲ್ಲ. ಪೂರ್ತಿಯಾಗಿ ಮಣ್ಣಿನ ಗಣಪನನ್ನ ಕೂರಿಸಿ ಪೂಜೆ ಮಾಡಲಾಗುತ್ತದೆ ಎಂದು ಪೈ ಹೇಳಿದ್ದಾರೆ. ಇದನ್ನೂ ಓದಿ: ಗಣೇಶ ಚತುರ್ಥಿಗೆ ಎರಡೇ ದಿನ ಬಾಕಿ – ಬಿಬಿಎಂಪಿಯಿಂದ 75 ಏಕಗವಾಕ್ಷಿ ಕೇಂದ್ರಗಳ ಸ್ಥಾಪನೆ
ಕಳೆದ ವರ್ಷ ಇದೇ ರೀ ವೈಭವೋಪೇತ ಗಣೇಶಮೂರ್ತಿಯೊಂದನ್ನ ಸೇವಾ ಮಂಡಲ ಪ್ರತಿಷ್ಠಾಪಿಸಿತ್ತು. ಈ ಗಣೇಶನ ಮೂರ್ತಿಯ ಅಲಂಕಾರಕ್ಕೆ 66 ಕೆಜಿ ಚಿನ್ನ ಹಾಗೂ 326 ಕೆಜಿ ಬೆಳ್ಳಿ ಬಳಕೆ ಮಾಡಲಾಗಿತ್ತು. ಕಳೆದ ವರ್ಷ 400.58 ಕೋಟಿ ರೂ. ವಿಮೆ ಮಾಡಲಾಗಿತ್ತು. ಈ ಬಾರಿ ಈ ಮೊತ್ತವನ್ನು ಏರಿಕೆ ಮಾಡಲಾಗಿದೆ. ಇದಕ್ಕಾಗಿ ಎಲ್ಲಾ ತಯಾರಿ ಮಾಡಲಾಗಿದೆ. ಸ್ವಯಂ ಸೇವಕರು, ಕಾರ್ಯಕರ್ತರು ಎಲ್ಲರು ಸಜ್ಜಾಗಿದ್ದಾರೆ. ಭಕ್ತರಿಗೆ ಯಾವುದೇ ಸಮಸ್ಯೆಯಾಗದಂತೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಭಕ್ತರು ತಾಳ್ಮೆಯಿಂದ ದರ್ಶನ ಮಾಡಬೇಕು. ಯಾವುದೇ ನೂಕು ನುಗ್ಗಲಿಗೆ ಅವಕಾಶವಿಲ್ಲ.
ದಿನದ 24 ಗಂಟೆಯೂ ಪೂಜೆ
ದಕ್ಷಿಣ ಭಾರತೀಯ ಶೈಲಿಯ ಈ ವಿಗ್ರಹವನ್ನು ಜೇಡಿಮಣ್ಣು ಮತ್ತು ಹುಲ್ಲಿನಿಂದ ತಯಾರಿಸಲಾಗಿದೆ. ವಿಘ್ನೇಶ್ವರನನ್ನು ಕೂರಿಸಿದ ದಿನದಿಂದ ದಿನದ 5 ದಿನಗಳ ವರೆಗೆ ದಿನದ 24 ಗಂಟೆಯೂ ಪೂಜಾ ಕೈಂಕರ್ಯಗಳು ನೆರವೇರಲಿದೆ. ಭಕ್ತರಿಗೆ ಅನ್ನ / ಪ್ರಸಾದ ವಿನಿಯೋಗವೂ ಇರಲಿದೆ. ಇದನ್ನೂ ಓದಿ: ಮೋದಕ ಅಷ್ಟೇ ಅಲ್ಲ ಈ ಸಿಹಿ ತಿಂಡಿಗಳೂ ವಿನಾಯಕನಿಗೆ ತುಂಬಾ ಇಷ್ಟ!
ಚಿನ್ನ ಬೆಳ್ಳಿ ಇತರ ಆಭರಣಗಳಿಗಾಗಿ 67.03 ಕೋಟಿ ರೂ.ಗಳನ್ನ ಖರ್ಚು ಮಾಡಲಾಗಿದೆ. ಮಂಡಲ್ನ ಸ್ವಯಂಸೇವಕರು, ಅಡುಗೆಯವರು, ಪುರೋಹಿತರು, ಪಾದರಕ್ಷೆ ಮಳಿಗೆ ಕೆಲಸಗಾರರು, ಸೇವಕರು ಮತ್ತು ಭದ್ರತಾ ಸಿಬ್ಬಂದಿಗೆ 375 ಕೋಟಿ ವಿಮಾ ಸುರಕ್ಷತೆ ಇರಲಿದೆ. ಇದರೊಂದಿಗೆ ಸಾರ್ವಜನಿಕ ಹೊಣೆಗಾರಿಕೆ, ಪೆಂಡಾಲ್, ಕ್ರೀಡಾಂಗಣ ಮತ್ತು ಭಕ್ತರ ಸುರಕ್ಷತೆಗಾಗಿ 30 ಕೋಟಿ ರೂ. ಮೀಸಲಿಡಲಾಗಿದೆ. ಸ್ಥಳದಲ್ಲಿ ಪೀಠೋಪಕರಣಗಳು, ನೆಲೆವಸ್ತುಗಳು, ಡಿಜಿಟಲ್ ಸ್ವತ್ತುಗಳು ಮತ್ತು ಇತರ ಸಾಮಗ್ರಿಗಳಿಗೆ ಪ್ರಮಾಣಿತ ಅಗ್ನಿಶಾಮಕ ಮತ್ತು ವಿಶೇಷ ಅಪಾಯ ವಿಮೆಯನ್ನು ಸಹ ಒಳಗೊಂಡಿದೆ.