ಗಾಂಧಿ ಅನ್ನೋ ಹೆಸರೇ ನನಗೆ ಹೊರೆ- ಸಮಾಜವಾದಿಯಂತೆ ಆತ್ಮ ವಿಮರ್ಷೆ ಮಾಡಿಕೊಂಡ ಬಿಜೆಪಿ ಸಂಸದ ವರುಣ್ ಗಾಂಧಿ

Public TV
2 Min Read

ಉಡುಪಿ: ಗಾಂಧಿ ಎನ್ನುವ ಹೆಸರೇ ನನಗೆ ಹೊರೆ. ನನ್ನ ಹೆಸರಿನಲ್ಲಿ ಗಾಂಧಿ ಇಲ್ಲದಿದ್ದರೆ ನಾನು ಸಂಸದ ಆಗ್ತಾನೇ ಇರಲಿಲ್ಲ ಎಂದು ಉತ್ತರಪ್ರದೇಶ ಸಂಸದ ವರುಣ್ ಗಾಂಧಿ ಆತ್ಮ ವಿಮರ್ಷೆಯ ಮಾತುಗಳನ್ನಾಡಿದ್ದಾರೆ.

ಉಡುಪಿಯ ಮಣಿಪಾಲದಲ್ಲಿ ಉತ್ತರಪ್ರದೇಶದ ಸುಲ್ತಾನ್ ಪುರ್ ಸಂಸದ ವರುಣ್ ಗಾಂಧಿ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಭಾರತದಲ್ಲಿ ಧರ್ಮ- ಜಾತಿ ಆಧಾರಿತ ರಾಜಕಾರಣ ಮಿತಿ ಮೀರಿದೆ. ಫೇಮಸ್ ತಂದೆ ಇಲ್ಲದಿದ್ದರೆ ಮಗ ರಾಜಕಾರಣಿಯಾಗಲು ಅಸಾಧ್ಯ. ಈ ಅಸಮಾನತೆಯ ಲಾಭ ಪಡೆದವರಲ್ಲಿ ನಾನು ಕೂಡ ಒಬ್ಬ ಎಂದು ವರುಣ್ ಗಾಂಧಿ ಆತ್ಮವಿಮರ್ಷೆ ಮಾಡಿಕೊಂಡರು.

ಜಾತ್ಯಾತೀತ ನಿಲುವಿನ ಬಗ್ಗೆ ಒಲವು ತೋರಿದ ವರುಣ್ ಗಾಂಧಿ, ಬಿಜೆಪಿಯಲ್ಲಿದ್ದುಕೊಂಡು ಸಮಾಜವಾದಿ ಚಿಂತನೆಯತ್ತ ವಾಲಿದಂತೆ ಮಾತನಾಡಿದರು. ಸಂಸತ್ ಈಗ ಟೆಂಪಲ್ ಆಫ್ ಡಿಬೇಟ್ ಆಗಿ ಉಳಿದಿಲ್ಲ. 15 ವರ್ಷದ ಹಿಂದೆ 155 ದಿನ ಸಂಸತ್ತಿನಲ್ಲಿ ಚರ್ಚೆ ಆಗುತ್ತಿತ್ತು. ಪ್ರತಿಯೊಂದು ಬಿಲ್ ಬಗ್ಗೆಯೂ ಚರ್ಚೆಗಳಾಗುತ್ತಿತ್ತು. ಈಗ 50 ದಿನವೂ ಕಲಾಪ ನಡೆಯುವುದಿಲ್ಲ. ಹಿಂದಿನಷ್ಟು ಕೆಲಸ ಮಾಡದಿದ್ದರೂ 7 ವರ್ಷದಲ್ಲಿ 5 ಬಾರಿ ಸಂಸದರ ಸಂಬಳ ಏರಿಕೆಯಾಗಿದೆ ಎಂದರು.

ಕಲಾಪ, ಮಸೂದೆ, ಹಾಜರಾತಿ ಬಗ್ಗೆ ಸಂಸದರಿಗೆ ಈಗೀಗ ಆಸಕ್ತಿಯೇ ಇಲ್ಲ. ಭಾರತದ ಸಂಸದೀಯ ವ್ಯವಸ್ಥೆ ಬಗ್ಗೆ ಬೇಸರ ಆಗುತ್ತಿದೆ ಎಂದು ವರುಣ್ ಗಾಂಧಿ ತನ್ನ ಸಹೋದ್ಯೋಗಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಯುವಕರು ಕೈಕಟ್ಟಿ ಕೂರಬೇಡಿ. ಸಾಮಾಜಿಕ ಜಾಲತಾಣ ಇಲ್ಲದ ಸಂದರ್ಭದಲ್ಲಿ ಚಿಪ್ಕೋ ಚಳುವಳಿ ಯಶಸ್ವಿಯಾಗಿದೆ. ವಾಟ್ಸಪ್ ನಲ್ಲಿ ನಡೆದ ಚಳುವಳಿ ಬೆಂಗಳೂರು ಫ್ಲೈಓವರ್ ವಿರುದ್ಧ ಗೆದ್ದಿತು. ಯುವಕರ ಹೋರಾಟಕ್ಕೆ ಗೆಲುವಾಯ್ತು. ಯುವಕರು ಪ್ರಯತ್ನ ಪಟ್ಟರೆ ಸ್ಟೀಲ್ ಬ್ರಿಡ್ಜ್ ನಿಲ್ಲಿಸಿದಂತೆ ಬೇರೆಲ್ಲಾ ಕೆಲಸವೂ ಆಗುತ್ತೆ ಎಂದು ಹೇಳಿದರು.

ದೇಶದಲ್ಲಿ ಡೈರೆಕ್ಟ್ ಡೆಮಾಕ್ರಸಿ ಬೇಕು. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿರುವಾಗ ಸದನದಲ್ಲಿ ಸಂಸದರು, ಶಾಸಕರು ಏನು ಮಾತನಾಡಬೇಕೆಂದು ಜನ ನಿರ್ಧರಿಸಬೇಕು. ಚರ್ಚಾ ವಿಷಯ ಜನ ಆಯ್ಕೆ ಮಾಡುವಂತಿರಬೇಕು. ತಮಿಳುನಾಡು ರೈತರು ದೆಹಲಿಯಲ್ಲಿ ತಮ್ಮ ಹಿರಿಯರ ತಲೆ ಬುರುಡೆ ಹಿಡಿದು, ಮೂತ್ರ ಕುಡಿದು ಪ್ರತಿಭಟನೆ ಮಾಡುತ್ತಿದ್ದರೆ ತಮಿಳು ನಾಡು ವಿಧಾನಸಭೆಯಲ್ಲಿ ಶಾಸಕರ ಸಂಬಳ ಹೆಚ್ಚಿಸುವ ವಿಶೇಷ ಅಧಿವೇಶನ ನಡೆದಿರುವುದು ನಾಚಿಕೆಗೇಡಿನ ವಿಚಾರ ಎಂದು ವರುಣ್ ಗಾಂಧಿ ಬೇಸರ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *