ಪತ್ನಿಯನ್ನು ಹೊಗಳಿದ ಸ್ನೇಹಿತನನ್ನೇ ಕೊಂದು ರಸ್ತೆ ಬದಿ ಹೂತಿಟ್ಟ ಪತಿರಾಯ

Public TV
1 Min Read

ಗಾಂಧಿನಗರ: ಪತ್ನಿಯನ್ನು ಸ್ನೇಹಿತ ಹೊಗಳಿದಕ್ಕೆ ಸಿಟ್ಟಿಗೆದ್ದ ಪತಿ ಗೆಳೆಯನನ್ನೇ ಕೊಲೆಗೈದು, ರಸ್ತೆ ಬದಿ ಹೂತಿಟ್ಟ ಅಮಾನವೀಯ ಘಟನೆ ಗುಜರಾತ್‍ನ ರಾಜಕೋಟ್‍ನಲ್ಲಿ ಬೆಳಕಿಗೆ ಬಂದಿದೆ.

ಸೋಮವಾರ ಈ ಘಟನೆ ನಡೆದಿದ್ದು ಬುಧವಾರ ಬೆಳಕಿಗೆ ಬಂದಿದೆ. ಖಜೂರ್ಡಿ ಗ್ರಾಮದ ನಿವಾಸಿ ರಾಕೇಶ್ ದಾಮೋರ್ ಕೊಲೆ ಮಾಡಿದ ಆರೋಪಿ. ನೀಲೇಶ್ ಮಾವಿ ಕೊಲೆಯಾದ ದುರ್ದೈವಿ. ನೀಲೇಶ್ ಸೋಮವಾರ ಖರ್ಜೂಡಿ ಗ್ರಾಮದಲ್ಲಿದ್ದ ಸ್ನೇಹಿತ ಸಂಜಯ್ ತೋಟಕ್ಕೆ ಬಂದಿದ್ದನು. ಈ ವೇಳೆ ಮಾತನಾಡುತ್ತಾ ರಾಕೇಶ್‍ನ ಪತ್ನಿಯನ್ನು ಹೊಗಳುತ್ತಿದ್ದನು. ಪದೇ ಪದೇ ಪತ್ನಿಯನ್ನು ನೀಲೇಶ್ ಹೊಗಳುತ್ತಿದ್ದದನ್ನು ಕಂಡು ರಾಕೇಶ್ ನೀಲೇಶ್ ಮೇಲೆ ಕೋಪಗೊಂಡಿದ್ದನು. ಇದೇ ಕೋಪದಲ್ಲಿ ರಾಕೇಶ್ ಸ್ನೇಹಿತ ನೀಲೇಶ್‍ನನ್ನು ಕೊಲೆ ಮಾಡಲು ನಿರ್ಧರಿಸಿದನು.

ಸಂಜೆ ನೀಲೇಶ್‍ನನ್ನು ಮನೆಗೆ ಬಿಡುವ ನೆಪವೊಡ್ಡಿ ತನ್ನೊಡನೆ ಆತನನ್ನು ರಾಕೇಶ್ ಬೈಕ್‍ನಲ್ಲಿ ಕರೆದೊಯ್ದನು. ಮಾರ್ಗ ಮಧ್ಯೆ ಜಮುನಾನಗರ ಹೈವೇಯಲ್ಲಿ ಬೈಕ್‍ನಿಂದ ಕೆಳಗಿಳಿದು ಹಗ್ಗದಿಂದ ನೀಲೇಶ್ ಕತ್ತನ್ನು ಬಿಗಿದು ರಾಕೇಶ್ ಕೊಲೆಮಾಡಿದನು. ಬಳಿಕ ಸ್ವಲ್ಪ ದೂರ ಮೃತದೇಹವನ್ನು ಕೊಂಡೊಯ್ದು ರಸ್ತೆ ಬದಿ ಗುಂಡಿ ತೋಡಿ ಶವವನ್ನು ರಾಕೇಶ್ ಹೂತುಹಾಕಿ ಮನೆಗೆ ವಾಪಸ್ ತೆರೆಳಿದ್ದನು.

ಇತ್ತ ನೀಲೇಶ್ ತಡರಾತ್ರಿಯಾದರೂ ಮನೆಗೆ ವಾಪಸ್ ಮರಳದಿದ್ದಾಗ ಆತನ ಮನೆಮಂದಿ ಪೊಲೀಸರ ಮೊರೆ ಹೋಗಿದ್ದು, ನೀಲೇಶ್ ನಾಪತ್ತೆಯಾಗಿದ್ದಾನೆ ಎಂದು ದೂರು ನೀಡಿದ್ದರು. ಮನೆಯವರ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನೀಲೇಶ್‍ಗಾಗಿ ಹುಡುಕಾಟ ನಡೆಸಿದರು. ಈ ವೇಳೆ ಕೊನೆಯದಾಗಿ ನೀಲೇಶ್ ರಾಕೇಶ್ ಜೊತೆ ಕಾಣಿಸಿಕೊಂಡಿದ್ದ ಎಂದು ಗ್ರಾಮಸ್ಥರು ಪೊಲೀಸರಿಗೆ ತಿಳಿಸಿದ್ದರು.

ಪೊಲೀಸರು ರಾಕೇಶ್‍ನನ್ನು ವಿಚಾರಣೆ ನಡೆಸಿದಾಗ ಆರೋಪಿ ಕೃತ್ಯದ ಬಗ್ಗೆ ಬಾಯಿಬಿಟ್ಟಿದ್ದಾನೆ. ಅಲ್ಲದೇ ನೀಲೇಶ್ ನನ್ನ ಪತ್ನಿಯನ್ನು ಪದೇ ಪದೇ ಹೊಗಳುತ್ತಿದ್ದ. ಇದರಿಂದ ನನಗೆ ಸಿಟ್ಟುಬಂದು ಆತನನ್ನು ಕೊಲೆ ಮಾಡಿ ರಸ್ತೆ ಬದಿ ಹೂತುಹಾಕಿದೆ ಎಂದು ಆರೋಪಿ ತಪ್ಪೋಪ್ಪಿಕೊಂಡಿದ್ದಾನೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *