ದೇವಿ ಜಾತ್ರೆ ಮುಗಿಸಿ ಗ್ರಾಮಕ್ಕೆ ಮರಳುತ್ತಿದ್ದ ಬಾಲಕರ ಮೇಲೆ ಹರಿದ ಬೊಲೆರೋ

Public TV
1 Min Read

– ಮುಂದಿದ್ದ ಟ್ರ್ಯಾಕ್ಟರ್‌ಗೂ ಬೊಲೆರೋ ಡಿಕ್ಕಿ, ಅಪ್ಪಚ್ಚಿಯಾದ ಬಾಲಕರು
– ಮುಗಿಲು ಮುಟ್ಟಿದ ಪೋಷಕರ ಆಕ್ರಂದನ

ಗದಗ: ದೇವಿ ಜಾತ್ರೆ ಮುಗಿಸಿ ಗ್ರಾಮಕ್ಕೆ ವಾಪಸ್ ಆಗುತ್ತಿದ್ದ ಇಬ್ಬರು ಬಾಲಕರ ಮೇಲೆ ಬೊಲೆರೋ ವಾಹನ ಹರಿದು ಮುಂದೆ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದ ಘಟನೆ ಶಿರಹಟ್ಟಿ ತಾಲೂಕಿನ ಶ್ರೀಮಂತಗಡ ಬಳಿ ನಡೆದಿದೆ.

ರಣತೂರ ಗ್ರಾಮದ ಸಂದೀಪ್ (12) ಹಾಗೂ ಮಾರುತಿ (10) ಮೃತ ದುರ್ದೈವಿಗಳು. ಶ್ರೀಮಂತಗಡ ಹೊಳಲಮ್ಮದೇವಿ ಜಾತ್ರೆ ಮುಗಿಸಿಕೊಂಡು ದೇವಸ್ಥಾನ ಕೆಳಭಾಗ ಇಳಿಜಾರಿನಲ್ಲಿ ಬರುವಾಗ ಮಾರ್ಗಮಧ್ಯೆ ದುರ್ಘಟನೆ ನಡೆದಿದೆ. ಘಟನಾ ಸ್ಥಳದಲ್ಲಿ ಓರ್ವ ಬಾಲಕ ಸಾವನ್ನಪ್ಪಿದ್ದರೆ ಮತ್ತೋರ್ವ ಬಾಲಕ ಶಿರಹಟ್ಟಿ ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ.

ಸಂದೀಪ್ ಹಾಗೂ ಮಾರುತಿ ಜಾತ್ರೆ ಮುಗಿಸಿ ತಮ್ಮ ಗ್ರಾಮಕ್ಕೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಹಿಂದಿನಿಂದ ವೇಗವಾಗಿ ಬಂದ ಬೊಲೆರೋ ಇಳಿಜಾರಿನಲ್ಲಿ ನಿಯಂತ್ರಣ ತಪ್ಪಿದೆ. ಪರಿಣಾಮ ಬಾಲಕರ ಮೇಲೆ ಹರಿದು ನಂತರ ಮುಂದೆ ಹಫಗುತ್ತಿದ್ದ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದಿದೆ.

ಹೊಳಲಮ್ಮದೇವಿ ದರ್ಶನ ಪಡೆದು, ಜಾತ್ರೆ ಮುಗಿಸಿಕೊಂಡು ಬರುವಾಗ ಬಾಲಕರು ಶಾಶ್ವತವಾಗಿ ದೇವಿಪಾದ ಸೇರಿರುವುದು ವಿಪರ್ಯಾಸ. ಬೊಲೆರೋ ವಾಹನ ಚಾಲಕನ ಅಜಾಗರೂಕತೆಯಿಂದ ಘಟನೆ ನಡೆದಿದ್ದು, ಎರಡು ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಬೊಲೆರೋ ವಾಹನದ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಮೃತ ಬಾಲಕ ಪೋಷಕರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ಶಿರಹಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *