ಗದಗ: ಜಾತಿ-ಧರ್ಮಗಳ ಮಧ್ಯೆ ಕಂದಕಗಳು ಸೃಷ್ಟಿಸುವ ಇಂದಿನ ದಿನಮಾನಗಳಲ್ಲಿ ಇಸ್ಲಾಂ ಧರ್ಮದ ವ್ಯಕ್ತಿಗೆ ಹಿಂದೂ ಧರ್ಮ, ಅದರಲ್ಲೂ ಬಸವ ತತ್ವಕ್ಕೆ ಅನುಗುಣವಾಗಿ ಲಿಂಗೆ ದೀಕ್ಷೆ ನೀಡುವ ಮೂಲಕ ಕೋಮು-ಸೌಹಾರ್ದತೆಗೆ ಹೊಸ ಸಂದೇಶ ಸಾರಲು ಖಜೂರಿ ಮಠದ ಸ್ವಾಮಿಜಿಗಳು ಹೊರಟಿದ್ದಾರೆ.
ರೋಣ ತಾಲೂಕಿನ ಅಸೂಟಿ ಗ್ರಾಮದ ಮುಸ್ಲಿಂ ವ್ಯಕ್ತಿ ದಿವಾನಿ ಶರೀಫ್ಗೆ ಖಜೂರಿ ಮಠದ ಶ್ರೀಮುರುಘರಾಜೇಂದ್ರ ಕೊರಣ್ಣೇಶ್ವರ ಶೀವಯೋಗಿಗಳು ಲಿಂಗ ದೀಕ್ಷೆ ನೀಡಿದ್ದಾರೆ. ಶರೀಫ್ ಅವರನ್ನು ಅಸೂಟಿ ಗ್ರಾಮದ ಮುರುಘರಾಜೇಂದ್ರ ಕೊರುಣ್ಣೇಶ್ವರ ಶಾಂತಿಧಾಮಕ್ಕೆ ಉತ್ತರಾಧಿಕಾರಿನ್ನಾಗಿ ನೇಮಿಸಿದ್ದಾರೆ. ಕೊರಣೇಶ್ವರಮಠ ಬಸವ ಪರಂಪರೆಯ ಮಠವಾದ್ದರಿಂದ ಇಲ್ಲಿ ಯಾವುದೆ ಜಾತಿ-ಧರ್ಮ, ಬೇಧ-ಭಾವವಿಲ್ಲ. ವಚನವನ್ನ ಪಚನ ಮಾಡಿಕೊಂಡವರಿಗೆ ಇಲ್ಲಿ ಮುಕ್ತ ಅವಕಾಶವಿದೆ. ಯಾವುದೇ ಸಮಾಜದವರು ಈ ಆಶ್ರಮಕ್ಕೆ ಬರಬಹುದು ಎಂದು ಮುರುಘರಾಜೇಂದ್ರ ಶಿವಯೋಗಿಗಳು ಮುಕ್ತ ಆಹ್ವಾನ ನೀಡಿದ್ದಾರೆ.
‘ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೆನಾದರೂ ಬಲ್ಲಿರಾ’ ಎನ್ನುವ ಕನಕದಾಸರ ಮಾತಿನಂತೆ, ಇಸ್ಲಾಂ ಧರ್ಮದ ವ್ಯಕ್ತಿಯೊಬ್ಬರು ನಡೆದುಕೊಂಡಿದ್ದಾರೆ. ಹುಟ್ಟಿದ್ದು ಮುಸ್ಲಿಂ ಸಮುದಾಯವಾದ್ರೂ, ಬಸವ ತತ್ವಕ್ಕೆ ಮಾರುಹೋಗಿ ಲಿಂಗ ದೀಕ್ಷೆ ಪಡೆದುಕೊಂಡಿದ್ದು, ಎಲ್ಲರೂ ಹುಬ್ಬೆರಿಸುವಂತೆ ಮಾಡಿದ್ದಾರೆ. ಖಜೂರಿ ಮಠದ ಶ್ರೀಮುರುಘರಾಜೇಂದ್ರ ಕೋರಣೇಶ್ವರ ಸ್ವಾಮೀಜಿಗಳ ಲಿಂಗ ದೀಕ್ಷೆಯನ್ನು ನೀಡಿ ಶಿಷ್ಯನನ್ನಾಗಿ ಸ್ವೀಕಾರ ಮಾಡಿದ್ದಾರೆ. ದಿವಾನಿ ಶರೀಫ್ ಅವರು ಮುಂದೆ ಬಸವತತ್ವದ ಆಧಾರ ಮೇಲೆ ಮುಂದಿನ ಜೀವನ ನಡೆಸಲಿದ್ದಾರೆ. ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರಲು, ನಾವೆಲ್ಲಾ ಒಂದೆ ಎಂಬ ಸಂದೇಶ ಸಾರಲು ಮುಸ್ಲಿಂ ವ್ಯಕ್ತಿಗೆ ಲಿಂಗ ದೀಕ್ಷೆ ನೀಡಿ ಈ ಮಠಕ್ಕೆ ಉತ್ತರಾಧಿಕಾರಿಯನ್ನಾಗಿ ಮಾಡಿದ್ದೇವೆ. ಜೊತೆಗೆ ದಿವಾನಿ ಶರೀಫ್ ಅವರ ತಂದೆ ಹಾಗೂ ಕುಟುಂಬ ಸಹ ಶಿವಯೋಗಿ ಶ್ರೀಗಳ ಭಕ್ತರಾಗಿದ್ದು, ಕುಟುಂಬದವರು ಹಾಗೂ ಸ್ಥಳೀಯರ ಒಪ್ಪಿಗೆಯ ಮೇರೆಗೆ ಈ ಆಶ್ರಮಕ್ಕೆ ಉತ್ತರಾಧಿಕಾರಿಯನ್ನಾಗಿ ಮಾಡಿದ್ದೇವೆ. ಹಿಂದೂ-ಮುಸ್ಲಿಂ-ಕ್ರೈಸ್ತ-ಬೌದ್ಧ ನಾವೆಲ್ಲಾ ಒಂದು ಎಂಬ ಸಂದೇಶ ಸಾರಲು ಈ ಲಿಂಗ ದೀಕ್ಷೆ ನೀಡಿದ್ದೇವೆ ಎಂದು ಮುರುಘರಾಜೇಂದ್ರ ಶಿವಯೋಗಿಗಳು ಹೇಳುತ್ತಾರೆ.
32 ವರ್ಷದ ದಿವಾನಿ ಶರೀಫ್ ಸಾಬ್ ಈಗ ಲಿಂಗ ದೀಕ್ಷೆ ಪಡೆದು ಶರೀಫ್ ಸ್ವಾಮಿಯಾಗಿದ್ದಾರೆ. ಮಂದಿರ ಮಸೀದಿಗಾಗಿ ನಿತ್ಯ ಕಲಹ ನಡೆಯುತ್ತಿದೆ. ಆದರೆ ಇಸ್ಲಾಂ ಧರ್ಮದ ವ್ಯಕ್ತಿ ಸಮಾಜಕ್ಕೆ ಕೋಮು-ಸೌಹಾರ್ದತೆ ಸಾರಲು ಲಿಂಗ ದೀಕ್ಷೆ ತೆಗೆದುಕೊಂಡು ಬಸವ ತತ್ವದಡಿ ಅಸೂಟಿ ಕೊರಣೇಶ್ವರ ಮಠಕ್ಕೆ ಉತ್ತರಾಧಿಕಾರಿಯಾಗಿದ್ದಾರೆ. ಸಮಾಜಕ್ಕೆ ಏನಾದರೂ ಒಳ್ಳೆಯದನ್ನು ಮಾಡಬೇಕು ಎನ್ನುವ ಹಂಬಲದಿಂದ ಬಸವತತ್ವಕ್ಕೆ ಮಾರು ಹೋಗಿದ್ದಾರೆ.
ಅಸೂಟಿ ಗ್ರಾಮದ ಹೊರವಲಯದಲ್ಲಿ 2 ಎಕರೆ ಜಮೀನಿನಲ್ಲಿ ಕೋರಣೇಶ್ವರ ಮಠವೊಂದನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದೇ ಮಠಕ್ಕೆ ದಿವಾನಿ ಶರೀಫ್ ಪೀಠಾಧಿಪತಿ ಆಗಲಿದ್ದಾರೆ. ಶರೀಫ್ ಅವರಿಗೆ ಈಗಾಲೇ ಮದುವೆಯಾಗಿದ್ದು, ಹೆಂಡತಿ ಹಾಗೂ 4 ಮಂದಿ ಮಕ್ಕಳು ಇದ್ದಾರೆ. ತಂದೆ ರಹೀಮಸಾಬ್ ಹಾಗೂ ತಾಯಿ ಪಾತೀಮ್ ಕೋರಣೇಶ್ವರ ಮಠದ ಭಕ್ತರಾಗಿದ್ದರು. ಹಾಗಾಗಿ ಸಂಸಾರ ತ್ಯಜಿಸಿ, ತಮ್ಮ ಜಮೀನಿನಲ್ಲಿ ಮಠವನ್ನು ಕಟ್ಟಿಸಿ ಬಸವತತ್ವವನ್ನು ಪರಿಪಾಲನೆ ಮಾಡಬೇಕು ಎಂದು ಲಿಂಗ ದೀಕ್ಷೆಯನ್ನು ತೆಗೆದುಕೊಂಡಿದ್ದಾರೆ. ಎಲ್ಲಾ ಧರ್ಮದ ಆಚರಣೆಗಳನ್ನು ಎಲ್ಲಾ ಜನಾಂಗದವರು ಬೆರೆತು ಆಚರಿಸಿದ್ರೆ ಸಮಾಜದಲ್ಲಿ ಕೂಡಿ ಬಾಳುವ ವಾತಾವರಣ ನಿರ್ಮಾಣ ಸಾಧ್ಯ ಎಂದು ದಿವಾನಿ ಶರೀಫ್ ಸ್ವಾಮಿ ಹೇಳಿದ್ದಾರೆ.
ಹಿಂದೂ-ಮುಸ್ಲಿಂ ಭಾವೈಕ್ಯತೆಯಿಂದ ಬಾಳಬೇಕು, ದೇವನೊಬ್ಬ ನಾಮ ಹಲವು ಎನ್ನುವ ಮಾತಿನಂತೆ ನಾವೆಲ್ಲರೂ ಒಂದಾಗಿ ಬಾಳಬೇಕು ಎನ್ನುವ ನಿಟ್ಟಿನಲ್ಲಿ ಶಾಂತಿ ತೊಟ್ಟಿದ ಮಂತ್ರವನ್ನು ಜಪಿಸುತ್ತಾ, ಜಗತ್ತು ಉದ್ಧಾರ ಮಾಡಲು ಈ ಸ್ವಾಮೀಜಿ ಹೊರಟ್ಟಿದ್ದಾರೆ. ಒಟ್ಟಿನಲ್ಲಿ ಲಿಂಗ ಹಾಗೂ ರುದ್ರಾಕ್ಷಿ ಮಾಲೆ ಧರಿಸಿ ವೃತಾಚರಣೆ ಮಾಡುತ್ತಿರೋ ಕೊರಣೇಶ್ವರ ಮಠದ ಉತ್ತರಾಧಿಕಾರಿ ಶರೀಫ್ ಸ್ವಾಮಿ ಕಾರ್ಯ ಸಮಾಜಕ್ಕೊಂದು ಸೌಹಾರ್ದತೆಯ ನೀತಿಪಾಠ ಹೇಳಿದಂತಿದೆ.