ಗದಗ: ಪ್ರೇಮಿಗಳಿಬ್ಬರು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗ ಜಿಲ್ಲೆ ರೋಣ ತಾಲೂಕಿನ ಹಿರೇಹಾಳ ಗ್ರಾಮದ ಹೊರವಲಯದಲ್ಲಿ ನಡೆದಿದೆ.
32 ವರ್ಷದ ಶಂಕರಗೌಡ ಹಾಗೂ 33 ವರ್ಷದ ಯಲ್ಲಮ್ಮ ನೇಣಿಗೆ ಶರಣಾಗಿದ್ದಾರೆ. ಮೃತ ಶಂಕರಗೌಡ ರೋಣ ಘಟಕದಲ್ಲಿ ಕೆ.ಎಸ್.ಆರ್.ಟಿ.ಸಿ ಸಂಸ್ಥೆಯಲ್ಲಿ ನೌಕರಿ ಮಾಡುತ್ತಿದ್ದ. ಆದರೆ ಶಂಕರಗೌಡನಿಗೆ ಮದುವೆ ಆಗಿರಲಿಲ್ಲ. ಮೃತ ಯಲ್ಲಮಗೆ 2008 ರಲ್ಲಿ ಬೇರೊಂದು ಮದುವೆಯಾಗಿ 3 ಮಕ್ಕಳು ಸಹ ಇದ್ದಾರೆ. ಆದರೂ ಸ್ಥಳೀಯ ಶಂಕರಗೌಡ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು.
ಈ ಬಗ್ಗೆ ಗಂಡನ ಮನೆಯವರಿಗೆ ಗೊತ್ತಾಗಿ ಇಬ್ಬರಿಗೂ ಸಾಕಷ್ಟು ಬಾರಿ ಬುದ್ಧಿವಾದ ಹೇಳಿದರೂ ಕೇಳಿರಲಿಲ್ಲ. ಆದರೆ ಇಂದು ಏಕಾಏಕಿ ಇಬ್ಬರು ಒಂದೆ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ರೋಣ ಪೊಲೀಸರು ಭೇಟಿನೀಡಿ ಪರಿಶೀಲನೆ ಮಾಡಿದ್ದಾರೆ. ಈ ಸಂಬಂಧ ಗದಗ ಜಿಲ್ಲೆ ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.