ಗದಗ: ನಾಳೆಯ ಫಲಿತಾಂಶದಲ್ಲಿ 15 ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲುತ್ತೆ. ಮುಂದೆ ಕಾಂಗ್ರೆಸ್ ಎಲ್ಲಿದೆ ಎಂದು ಹುಡುಕಬೇಕಾದ ಪರಿಸ್ಥಿತಿ ಬರುತ್ತೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಇಂದು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಂದೆ ಮೂರೂವರೆ ವರ್ಷ ಯಡಿಯೂರಪ್ಪ ನವರೇ ಮುಖ್ಯಮಂತ್ರಿ ಆಗಿರುತ್ತಾರೆ. ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಕಂಡ ಕನಸನ್ನು ಇನ್ನೂ ಕಾಣುತ್ತಿದ್ದಾರೆ. ಹಿಂದಿನ ಆ ಮುಖ್ಯಮಂತ್ರಿ ಖುರ್ಚಿ, ಹಿಂದೆ-ಮುಂದೆ ಹೋಗುವ ಆ ಜನ, ಇದೇ ಕನಸು ಬಿದ್ದು ಬಿದ್ದು ಮತ್ತೆ ಮುಖ್ಯಮಂತ್ರಿಯಾಗುವ ಭ್ರಮೆಯಲ್ಲಿದ್ದಾರೆ. ಇನ್ನು ಜೀವನ ಪರ್ಯಂತ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ, ಮುಖ್ಯಮಂತ್ರಿ ಆಗೋಲ್ಲ ಎಂದು ಭವಿಷ್ಯ ನುಡಿದರು.
ಉಪಚುನಾವಣೆ ವೇಳೆ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಮಲ್ಲಿಕಾರ್ಜುನ್ ಖರ್ಗೆ, ಪರಮೇಶ್ವರ್ ಒಬ್ಬೊಬ್ಬರು ಒಂದೊಂದು ದಿಕ್ಕಿಗೆ ಹೊದರು. ಹೊಂದಾಣಿಕೆ ಇಲ್ಲದವರು ರಾಜ್ಯದ ಆಡಳಿತ ಹೇಗಪ್ಪಾ ಮಾಡ್ತಾರೆ? ರಾಜ್ಯದಲ್ಲಿ ಕಾಂಗ್ರೆಸ್ ಕಥೆ ಮುಗಿತು ಎಂಬುದು ಕಾಂಗ್ರೆಸ್ ನವರಿಗೂ ಈಗ ಮನವರಿಕೆಯಾಗುತ್ತಿದೆ. ನಾಳೆ ಫಲಿತಾಂಶ ಬರುತ್ತೆ ಬಿಜೆಪಿ ಇನ್ನೊಂದು ದಿನ ಅಧಿಕಾರದಲ್ಲಿರುತ್ತೆ ಎಂದು ಹೇಳಿಕೊಂಡು ತಮ್ಮ ಆಸೆ ತೀರಿಸಿಕೊಳ್ಳುತ್ತಿದ್ದಾರೆ. ಹೇಳಿಕೆಗಳಲ್ಲಿ ಆಸೆ ತೀರಿಸಿಕೊಳ್ಳಲು ನಾನು ಯಾಕೆ ಬೇಡ ಅನ್ನಲಿ ಎಂದರು.
ಜನ ಹೊಡಿತಾರೆ, ಹೊಡಿತಾರೆ ಅಂತಾರೆ. ಕರ್ನಾಟಕ ಜನ ಕಾಂಗ್ರೆಸ್ನವರನ್ನು ಹೊಡಿಬೇಕು ಅಂದ್ರೆ ಕೈನಿಂದ ಹೊಡಿಬೇಕಂತಲ್ಲ, ಈಗಾಗಲೇ ಜನ ಮತದಾನದ ಮೂಲಕ ಅಧಿಕಾರದಿಂದ ಹೊಡೆದು ಹಾಕಿದ್ದಾರೆ. ಕೈನಿಂದ ಯಾರು ಹೊಡಿಬೇಡಿ. ಮತದಾನದ ಮೂಲಕವೇ ಹೊಡೆದಿದ್ದು ಸಾಕಾಗಿದೆ. ಎಂಪಿ ಚುನಾವಣೆ ವೇಳೆ ದೇವೇಗೌಡ್ರು, ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಬಿಜೆಪಿ 2 ಸ್ಥಾನವೂ ಬರಲ್ಲ ಅಂದಿದ್ದರು. ಆದರೆ ಅವರು ಗೆದ್ದದ್ದು ಒಬ್ಬೊಬ್ಬರು ಒಂದೊಂದೆ ಸೀಟು ಮಾತ್ರ. ಈಗ ಮತ್ತೆ ಡಿಕೆ ಶಿವಕುಮಾರ್ ವ್ಯಂಗ್ಯ ಮಾತನಾಡಿದ್ದಾರೆ. ನಾಳೆ ಫಲಿತಾಂಶ ಮತ್ತೆ ಪಾಠ ಕಲಿಸುತ್ತೆ. ಅವರು ವ್ಯಂಗ್ಯವಾಗಿ ಹೇಳ್ತಾನೆ ಇರಲಿ, ಜನ ಬಿಜೆಪಿ ಗೆಲ್ಲಿಸ್ತಾನೇ ಇರಲಿ ಎಂದು ಈಶ್ವರಪ್ಪ ವಿರೋಧ ಪಕ್ಷದವರಿಗೆ ಮಾತಿನಲ್ಲೇ ತಿರುಗೇಟು ನೀಡಿದರು.