ಎತ್ತಿನ ಗಾಡಿಗೆ ಬಸ್ ಡಿಕ್ಕಿ- ಎತ್ತು, ರೈತ ಸ್ಥಳದಲ್ಲೇ ಸಾವು

Public TV
1 Min Read

ಗದಗ: ಎತ್ತಿನ ಗಾಡಿ ಹಾಗೂ ಬಸ್ ನಡುವೆ ಡಿಕ್ಕಿ ಸಂಭವಿಸಿದ್ದು, ಎತ್ತು ಹಾಗೂ ರೈತ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತಿಬ್ಬರಿಗೆ ಗಂಭೀರ ಗಾಯವಾಗಿರುವ ಘಟನೆ ತಾಲೂಕಿನ ಅಡವಿ ಸೋಮಾಪುರ ಬಳಿ ನಡೆದಿದೆ.

ಸಂಭಾಪೂರ ಗ್ರಾಮದ ರೈತರು ತಮ್ಮ ಜಮೀನಿನ ಕೆಲಸ ಮೂಗಿಸಿಕೊಂಡು ಮನೆಗೆ ಬರುವ ವೇಳೆ ಬಸ್‍ವೊಂದು ಎತ್ತಿನ ಚಕ್ಕಡಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ 75 ವರ್ಷದ ಹನುಮಪ್ಪ ಮುಳ್ಳೂರ ಹಾಗೂ ಒಂದು ಎತ್ತು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಡಿಯಲ್ಲಿ ಕುಳಿತ್ತಿದ್ದ ಫಕೀರಪ್ಪ ಹಾಗೂ ನಾರಾಯಣಗೆ ಗಂಭೀರ ಗಾಯಗಳಾಗಿವೆ. ಸಾವು ಬದುಕಿ ನಡುವೆ ನರಳಾಡುತ್ತಿದ್ದ ಇಬ್ಬರು ಗಾಯಾಳುಗಳನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಗದಗನಿಂದ ಉಪ್ಪಿನ ಬೆಟಗೇರಿಗೆ ಹೊರಟಿದ್ದ ಬಸ್ ವೇಗವಾಗಿ ಬಂದಿದೆ. ಓವರ್‍ಟೆಕ್ ಮಾಡುವ ವೇಳೆ, ಬಸ್ ಚಾಲಕನ ಅಜಾಗರೂಕತೆಯಿಂದ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಜೊತೆಗೆ ಹುಬ್ಬಳ್ಳಿಯಿಂದ ಹೊಸಪೇಟೆವರೆಗೆ ರಾಷ್ಟ್ರೀಯ ಹೆದ್ದಾರಿ 63 ರ ರಸ್ತೆ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿ ವಿಳಂಬ ಜೊತೆಗೆ ಸರ್ವಿಸ್ ರಸ್ತೆಯಿಲ್ಲದಿರುವುದರಿಂದ ಇಂತಹ ಅನೇಕ ಘಟನೆಗಳು ನಡೆಯುತ್ತಿವೆ ಎಂಬುದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ತಡೆದ ಸ್ಥಳೀಯರು ರಸ್ತೆ ನಡುವೆ ಕಲ್ಲು ಇಟ್ಟು ಅಧಿಕಾರಿಗಳು ಹಾಗೂ ಕಾಮಗಾರಿ ಗುತ್ತಿಗೆದಾರರ ವಿರುದ್ಧ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಗದಗ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪರಸ್ಥಿತಿ ತಿಳಿಗೊಳಿಸಿದರು. ಘಟನೆ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *