15 ದಿನವಾದ್ರೂ ಸಿಎಂ ಮುಖ ನೋಡದ ಪರಮೇಶ್ವರ್- ರಾಗಾ ಮೇಲೂ ಮುನಿಸು

Public TV
1 Min Read

ಬೆಂಗಳೂರು: ಸಂಪುಟ ವಿಸ್ತರಣೆ ಸಮಯದಲ್ಲಿ ಹೊತ್ತಿಕೊಂಡ ಅಸಮಧಾನದ ಕಿಡಿಯಿಂದ ಕಳೆದ 15 ದಿನಗಳಿಂದ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಹಾಗೂ ಸಿಎಂ ಸಿದ್ದರಾಮಯ್ಯ ಅವರು ಪರಸ್ಪರ ಮುಖವನ್ನು ನೋಡಿಲ್ಲ, ಮಾತನ್ನೂ ಆಡಿಸಿಲ್ಲ. ಈ ಅಸಮಾಧಾನದ ಕಿಡಿ ಇಂದು ಬೂದಿ ಮುಚ್ಚಿದ ಕೆಂಡವಾಗಿ ಉರಿಯಲು ಪ್ರಾರಂಭಿಸಿದೆ.

ಪರಮೇಶ್ವರ್ ಅವರ ಆಪ್ತ ಷಡಕ್ಷರಿ ಅವರಿಗೆ ಸಚಿವ ಸ್ಥಾನ ತಪ್ಪಿಸಲು ಸಿಎಂ ಸಿದ್ದರಾಮಯ್ಯ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಇ-ಮೇಲ್ ಮಾಡಿದ್ದಾರೆ. ಷಡಕ್ಷರಿ ಎರಡನೇ ಮದುವೆ ಆಗಿದ್ದಾರೆ. ಈಗ ಅವರಿಗೆ 10 ವರ್ಷದ ಮಗನಿದ್ದಾನೆ. ಇದು ಹಿಂದೂ ವಿವಾಹ ಕಾಯ್ದೆಗೆ ವಿರುದ್ಧವಾಗಿದೆ. ಆದ್ದರಿಂದ ಅವರಿಗೆ ಸಚಿವ ಸ್ಥಾನ ಕೊಟ್ಟರೆ ಮುಂದೆ ತೊಂದರೆ ಆಗಬಹುದು ಎಂದು ಇ-ಮೇಲ್ ಮೂಲಕ ದೂರು ನೀಡಿದ್ದಾರೆ ಎನ್ನಲಾಗಿದೆ.

ಮೊದಲೆ ಸಿಎಂ ಮೇಲೆ ಅಸಮಧಾನ ಹೊಂದಿದ್ದ ಪರಮೇಶ್ವರ್‍ಗೆ ಈ ಇ-ಮೇಲ್ ವಿಚಾರ ತಡವಾಗಿ ಗೊತ್ತಾಗಿದೆ. ವಿಷಯ ತಿಳಿದ ಪರಮೆಶ್ವರ್ ಕೆಂಡಮಂಡಲರಾಗಿ ಸೆಪ್ಟೆಂಬರ್ 14 ರಂದು ಬೆಳಗಾವಿಯಲ್ಲಿ ನಡೆದ ಪಕ್ಷದ ಕಾರ್ಯಕ್ರಮಕ್ಕೆ ಹೊರಟು ಕೊನೆ ಗಳಿಗೆಯಲ್ಲಿ ತಮ್ಮ ಕಾರ್ಯಕ್ರಮ ರದ್ದು ಮಾಡಿದ್ದಾರೆ. ಸಿಎಂ ಬರುವ ಕಾರ್ಯಕ್ರಮಕ್ಕೆ ನಾನು ಬರಲ್ಲ, ಅವರ ಮುಖವನ್ನು ನೊಡಲ್ಲ ಎಂದು ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್‍ಗೆ ನೇರವಾಗಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪರಮೇಶ್ವರ್ ಅವರು ಬರೀ ಸಿಎಂರನ್ನೇ ಹೊಗಳುವ ರಾಹುಲ್ ಗಾಂಧಿ ಬಗ್ಗೆ ಕೂಡ ಅಸಮಧಾನವನ್ನು ಹೊರಹಾಕಿದ್ದಾರೆ. ರಾಹುಲ್ ಗಾಂಧಿ ಯಾವಾಗಲೂ ಅವರನ್ನೇ ಹಾಡಿ ಹೊಗಳುತ್ತಾರೆ. ಪಕ್ಷಕ್ಕೆ ನಾವೇನು ದುಡಿದಿಲ್ವ ಅಂತ ತಮ್ಮ ಆಪ್ತರ ಬಳಿ ಕೋಪಗೊಂಡು ಹೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಸಂಪುಟ ವಿಸ್ತರಣೆ ಸಮಯದಲ್ಲಿ ಹೊತ್ತಿಕೊಂಡ ಅಸಮಧಾನದ ಕಿಡಿ ಇನ್ನೂ ಹೆಚ್ಚುವ ಆತಂಕ ಕಾಂಗ್ರೆಸ್ ನಾಯಕರಲ್ಲಿದೆ. ತಮ್ಮ ಆಪ್ತ ಜಿ.ಸಿ.ಚಂದ್ರಶೇಖರ ಬದಲಿಗೆ ಪಕ್ಷ ಬಿಡಲು ಮುಂದಾಗಿದ್ದ ಮಾಜಿ ಕೇಂದ್ರ ಸಚಿವ ಸಿಎಂ ಇಬ್ರಾಹಿಮ್ ರನ್ನು ಪರಿಷತ್‍ಗೆ ಆಯ್ಕೆ ಮಾಡಿಕೊಂಡಿದ್ದು ಸಹ ಪರಮೇಶ್ವರ್ ಅವರ ಅಸಮಧಾನಕ್ಕೆ ಕಾರಣ ಎನ್ನಲಾಗ್ತಿದೆ.

Share This Article
Leave a Comment

Leave a Reply

Your email address will not be published. Required fields are marked *