ನಾನ್‌ ಯಾವಾಗ್ಲೂ ಸಿಎಂ ರೇಸ್‌ನಲ್ಲಿ ಇರ್ತೀನಿ: ಪರಮೇಶ್ವರ್‌

2 Min Read

– ನಾನು ಅಧ್ಯಕ್ಷನಾಗಿದ್ದಾಗ್ಲೂ ಪಕ್ಷ ಅಧಿಕಾರಕ್ಕೆ ಬಂತು, ನಾನೊಬ್ಬನೇ ಅಧಿಕಾರಕ್ಕೆ ತಂದೆ ಅಂತ ಹೇಳಿಕೊಳ್ಳಲಿಲ್ಲ

ಬೆಂಗಳೂರು: ನಾನು ಕೆಪಿಸಿಸಿ (KPCC) ಅಧ್ಯಕ್ಷ ಆಗಿದ್ದಾಗಲೂ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂತು. ಆದ್ರೆ ಯಾವತ್ತೂ ನಾನೊಬ್ಬನೇ ಪಕ್ಷವನ್ನ ಅಧಿಕಾರಕ್ಕೆ ತಂದೆ ಅಂತ ಹೇಳಿಕೊಳ್ಳಲಿಲ್ಲ ಗೃಹಸಚಿವ ಪರಮೇಶ್ವರ್‌ ಹೇಳಿದ್ದು, ಡಿಸಿಎಂ ಡಿಕೆ ಶಿವಕುಮಾರ್‌ (G Parameshwar) ಅವರಿಗೆ ಪರೋಕ್ಷ ಟಾಂಗ್‌ ಕೊಟ್ಟರು.

ನಾಯಕತ್ವ ಬದಲಾವಣೆ ವಿಚಾರ ಕುರಿತು ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ನಾನು ಅಧ್ಯಕ್ಷನಾಗಿದ್ದಾಗಲೂ ಪಕ್ಷ ಅಧಿಕಾರಕ್ಕೆ ಬಂತು. ನಾನೊಬ್ಬನೇ ಅಧಿಕಾರಕ್ಕೆ ತಂದೆ ಅಂತ ಹೇಳಿಕೊಳ್ಳಲಿಲ್ಲ ಎಂದರು. ಇದನ್ನೂ ಓದಿ: ಡಿಕೆಶಿ ಸಿಎಂ ಆಗ್ತಾರೋ, ಇಲ್ವೋ?- ಮಂಡ್ಯದಲ್ಲಿ ಗಿಣಿ ಶಾಸ್ತ್ರ ಕೇಳಿದ ಬಿಜೆಪಿ ಕಾರ್ಯಕರ್ತರು

ಸಿಎಂ ರೇಸ್‌ನಲ್ಲಿ ಯಾವಾಗಲೂ ಇರ್ತೀನಿ
ಇನ್ನೂ ನೀವೂ ಸಿಎಂ (Chief Minister) ರೇಸ್‌ನಲ್ಲಿದ್ದೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ನಾನು ಯಾವಾಗಲೂ ರೇಸ್‌ನಲ್ಲಿ ಇರ್ತೀನಿ ಎಂದು ಪರೋಕ್ಷವಾಗಿ ಸಿಎಂ ಆಸೆ ಬಿಚ್ಚಿಟ್ಟರು. ಇದನ್ನೂ ಓದಿ: ಸಿದ್ದು ಟೀಂನಿಂದಲೂ ನಂಬರ್‌ ಗೇಮ್?-‌ ರಹಸ್ಯವಾಗಿ ಶಾಸಕ ಪ್ರಸಾದ್‌ ಅಬ್ಬಯ್ಯ ಭೇಟಿಯಾದ ಯತೀಂದ್ರ

ನಾನು ಯಾವಾಗಲೂ ರೇಸ್‌ನಲ್ಲಿರ್ತೀನಿ ಕಣ್ರೀ, ಅದೇನ್‌ ದೊಡ್ಡ ವಿಚಾರ ಅಲ್ಲ. 2013 ರಲ್ಲಿ ನಾನು ಕೆಪಿಸಿಸಿ ಅಧ್ಯಕ್ಷ ಆಗಿದ್ದೆ. ಸರ್ಕಾರ ಅಧಿಕಾರಕ್ಕೆ ತಂದ್ವಿ, ನಾನೇ ಮಾಡಿದೆ, ನಾನೇ ಸರ್ಕಾರ ತಂದೆ ಅಂತ ಎಲ್ಲೂ ನಾನು ಹೇಳಿಕೊಳ್ಳಿಲ್ಲಪ್ಪ. ಎಲ್ರೂ ಸೇರಿ ಕೆಲಸ ಮಾಡಿದ್ವಿ, ಜನ ಕೈ ಹಿಡಿದ್ರು. ಆ ಸಂದರ್ಭದಲ್ಲಿ ನಾನು ಪರಾಭವ ಆದೆ. ಒಂದು ವೇಳೆ ನಾನು ಗೆದ್ದಿದ್ರೆ ಏನಾಗ್ತಿತ್ತೋ ಗೊತ್ತಿಲ್ಲ. ಆ ಸಂದರ್ಭದಲ್ಲೂ ಸಿಎಂ ರೇಸ್‌ನಲ್ಲಿ ನನ್ನ ಹೆಸರು ಇತ್ತು. ಸಾಮಾನ್ಯವಾಗಿ ಕೆಪಿಸಿಸಿ ಅಧ್ಯಕ್ಷರಿಗೆ ಸಿಎಂ ಆಗೋದಿಕ್ಕೆ ಒಂದು ಅವಕಾಶ ಕೊಡ್ತಾರೆ. ಅದು ಕೆಲವು ಸಂದರ್ಭಗಳಲ್ಲಿ ಆಗೋದಿಲ್ಲ ಎಂದರಲ್ಲದೇ, ಈಗ ಆ ಕನಸು ನನಸಾಗುತ್ತಾ ಎಂಬ ಪ್ರಶ್ನೆಗೆ, ಗೊತ್ತಿಲ್ಲಪ್ಪ, ನನಗೆ ಕನಸೇ ಬೀಳಲ್ಲ ಅಂತ ನಗೆಬೀರಿದರು. ಇದನ್ನೂ ಓದಿ: ಸಿಎಂ-ಖರ್ಗೆ ಭೇಟಿ ಕುತೂಹಲ – ಹೈಕಮಾಂಡ್‌ ತೀರ್ಮಾನ ಏನಿದ್ದರೂ ಬದ್ಧ ಎಂದ ಸಿದ್ರಾಮಯ್ಯ

ನಾಯಕತ್ವ ಬದಲಾವಣೆ ಸದ್ಯಕ್ಕಿಲ್ಲ
ನಮಲ್ಲಿ ಯಾವುದೇ ಸಮಸ್ಯೆಯೇ ಇಲ್ಲ. ಯಾರೋ ಯಾರದ್ದೋ ಮನೆಗೆ ಊಟಕ್ಕೆ ಹೋದ್ರೂ ತಪ್ಪಾ? ಸತೀಶ್ ಜಾರಕಿಹೊಳಿ ಮನೆಯಲ್ಲಿ ಊಟಕ್ಕೆ ಸೇರಿ ಇಲಾಖಾವಾರು ಚರ್ಚೆ ಮಾಡ್ತೀವಿ, ಏನೂ ಮಾತಾಡೋದೇ ಬೇಡವಾ? ನಮ್ಮಲ್ಲಿ ಹೈಕಮಾಂಡ್ ಸ್ಟ್ರಾಂಗ್ ಇದೆ. ಇಲ್ಲೀವರೆಗೂ ಲೀಡರ್ ಶಿಪ್ ಬದಲಾವಣೆ ಬಗ್ಗೆ ಹೈಕಮಾಂಡ್ ಹೇಳಿಲ್ಲ. ಬೇರೆಯವರು ಮಾತಾಡೋದಕ್ಕೆ ಬೆಲೆ ಇಲ್ಲ. ಸಿಎಂ ಅವರೇ 5 ವರ್ಷ ಸಿಎಂ ಆಗ್ತೀನಿ ಅಂತ ಹೇಳಿದ್ದಾರಲ್ಲ. ಎರಡೂವರೆ ವರ್ಷದ ಹಿಂದೆ ಸಿಎಲ್‌ಪಿ ಸಭೆಯಲ್ಲಿ ಸಿದ್ದರಾಮಯ್ಯ ಆಯ್ಕೆ ಆಗಿದ್ರು. ಮಧ್ಯದಲ್ಲಿ ಬದಲಾವಣೆ ಮಾಡೋದು ಹೈಕಮಾಂಡ್‌ಗೆ ಬಿಟ್ಟ ನಿರ್ಧಾರ. ಈಗ ಬದಲಾವಣೆ ಮಾಡ್ತಾರೆ ಅಂತ ನನಗೇನೋ ಅನಿಸ್ತಿಲ್ಲ ಎಂದು ಹೇಳಿದರು.

ರಾಹುಲ್ ಗಾಂಧಿ ವಿದೇಶ ಪ್ರವಾಸದಲ್ಲಿದ್ದಾರೆ. ಅವರು ಬಂದ ಮೇಲೆ ಏನಾದ್ರೂ ಅಂಥ ಬೆಳವಣಿಗೆ ಇದ್ರೆ ಚರ್ಚೆ ಮಾಡಿ ತೀರ್ಮಾನ ಮಾಡ್ತಾರೆ. ಎಐಸಿಸಿ ಅಧ್ಯಕ್ಷರು ನಮ್ಮವರೇ ಇದ್ದಾರೆ. ಅವರಿಗೆ ರಾಜ್ಯದ ರಾಜಕಾರಣ ಗೊತ್ತಿದೆ. ಏನಾದರೂ ಇದ್ದರೆ ಅವರು ರಾಹುಲ್ ಗಾಂಧಿಯವರ ಜೊತೆ ಚರ್ಚಿಸಿ ತೀರ್ಮಾನ ಮಾಡ್ತಾರೆ. ದಲಿತರು ಸಿಎಂ ಆಗಬೇಕು ಅಂತ ಬಹಳ ದಿನಗಳಿಂದ ಕೇಳ್ತಿದ್ದಾರೆ. ನಾವೆಲ್ಲ ಸಮಾನ ಮನಸ್ಕರು ಸೇರಿ ಚರ್ಚಿಸಿದ್ವಿ ಅಂದ್ರೆ ಆಗಿಬಿಡುತ್ತಾ? ಅಂತ ಪ್ರಶ್ನೆ ಮಾಡಿದರು.

Share This Article