ಜೆಡಿಎಸ್ ಭದ್ರಕೋಟೆಯಿಂದ ಬಿಎಸ್‍ವೈ ಪ್ರವಾಸ ಆರಂಭ

Public TV
1 Min Read

ಮಂಡ್ಯ: ಜೆಡಿಎಸ್ ಕೋಟೆಯಿಂದಲೇ ಯಡಿಯೂರಪ್ಪನವರು ಪ್ರವಾಸ ಪ್ರಾರಂಭಿಸುತ್ತಿದ್ದು, ನಾಳೆ ಹುಟ್ಟೂರು ಬೂಕನಕೆರೆ ಸೇರಿದಂತೆ ಮಂಡ್ಯದ ಜಿಲ್ಲೆಯ ವಿವಿಧ ಭಾಗಗಳಿಗೆ ಭೇಟಿ ನೀಡಲಿದ್ದಾರೆ.

ಸಿಎಂ ಆದ ಮರುದಿನವೇ ಬಿ.ಎಸ್.ಯಡಿಯೂರಪ್ಪನವರು ಮೇಲುಕೋಟೆ ಹಾಗೂ ಹುಟ್ಟೂರು ಬೂಕನಕೆರೆ ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ. ಈ ಮೂಲಕ ಜೆಡಿಎಸ್ ಭದ್ರ ಕೋಟೆಯಿಂದಲೇ ತಮ್ಮ ಪ್ರವಾಸವನ್ನು ಆರಂಭಿಸುತ್ತಿದ್ದಾರೆ.

ಮೊದಲು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಯ ಚಲುವರಾಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ನಂತರ ಕೆ.ಆರ್.ಪೇಟೆ ತಾಲೂಕಿನ ಹುಟ್ಟೂರು ಬೂಕನಕೆರೆಗೆ ಭೇಟಿ ನೀಡಿ ಮನೆ ದೇವರು ಗೋಗಲಮ್ಮ ದೇವಿ ದರ್ಶನ ಪಡೆದು ವಿಶೆಷ ಪೂಜೆ ಸಲ್ಲಿಸಲಿದ್ದಾರೆ.

ಯಡಿಯೂರಪ್ಪನವರು ಪ್ರಮಾಣ ವಚನ ಸ್ವೀಕರಿಸುತ್ತಿರುವ ಹಿನ್ನೆಲೆ ಬೂಕನಕೆರೆಯಲ್ಲಿ ಗ್ರಾಮಸ್ಥರು ಸಂಜೆ ವೇಳೆ ವಿಶೇಷ ಪೂಜೆ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಅಲ್ಲದೆ, ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಇಂದು ಬೆಳಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ರಾಜ್ಯಪಾಲ ವಜೂಭಾಯ್ ವಾಲಾ ಅವರಿಗೆ ಸರ್ಕಾರ ರಚನೆ ಮಾಡಲು ಹಕ್ಕು ಪ್ರತಿಪಾದನೆ ಮಾಡಿದ್ದರು. ಹೀಗಾಗಿ ಇಂದು ಸಂಜೆ 6 ರಿಂದ 6.15ರೊಳಗೆ ಬಿಎಸ್‍ವೈ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ರಾಜಭವನದಲ್ಲಿ ನಡೆಯಲಿರುವ ಸರಳ ಸಮಾರಂಭದಲ್ಲಿ ಬಿಎಸ್‍ವೈ ಪ್ರಮಾಣ ಸ್ವೀಕಾರ ಮಾಡಲಿದ್ದು, ಏಕಾಂಗಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಈ ಮೂಲಕ ಬಿಎಸ್‍ವೈ ಅವರು 4ನೇ ಬಾರಿಗೆ ಸಿಎಂ ಆಗಿ ಪ್ರಮಾಣ ಸ್ವೀಕಾರ ಮಾಡಲಿದ್ದಾರೆ. ಈ ಹಿಂದೆ ಮೂರು ಬಾರಿ ಪ್ರಮಾಣ ಸ್ವೀಕಾರ ಮಾಡಿದ್ದರೂ 5 ವರ್ಷ ಪೂರ್ಣಾವಧಿ ಮಾಡಿರಲಿಲ್ಲ.

Share This Article
Leave a Comment

Leave a Reply

Your email address will not be published. Required fields are marked *