ಚಿಕ್ಕಬಳ್ಳಾಪುರ: ರಾಜ್ಯದ ಕೆಲವು ಭಾಗದಲ್ಲಿ ಸಕಾಲದಲ್ಲಿ ಮಳೆಯಾಗದೇ ರೈತರು ಪರದಾಡುವಂತಾಗಿದೆ. ಮಳೆ ಇಲ್ಲದೇ ಬೆಳೆ ನೆಲಕಚ್ಚುತ್ತಿದ್ದು, ಬರದ ಛಾಯೆ ಆವರಿಸಿಕೊಂಡು ಆತಂಕಕ್ಕೆ ಕಾರಣವಾಗಿದೆ. ಇದರಿಂದಾಗಿ ಮಳೆಗಾಗಿ ವರುಣ ದೇವನಿಗೆ ರೈತರು ಮೊರೆಯಿಡುತ್ತಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಕಸವನಹಳ್ಳಿ ಗ್ರಾಮದ ಜನರು ಬುಧವಾರ ತಡರಾತ್ರಿ ಕಪ್ಪೆಗಳು ಹಾಗೂ ಚಿಕ್ಕಮಕ್ಕಳಿಗೆ ಮದುವೆ ಮಾಡಿಸಿ, ವರುಣದೇವನಿಗೆ ವಿಶೇಷವಾಗಿ ಪೂಜೆ ಸಲ್ಲಿಸಿದ್ದಾರೆ. ಗ್ರಾಮಸ್ಥರು ಒಬ್ಬ ಬಾಲಕನಿಗೆ ವಧುವಿನಂತೆ ಸಿಂಗಾರ ಮಾಡಿದರೆ, ಮತ್ತೊಬ್ಬ ಬಾಲಕನಿಕೆ ಕೈ ಬಳೆ, ಆಭರಣ ತೊಡಿಸಿ ವಧು-ವರರಂತೆ ಸಿಂಗಾರ ಮಾಡಿದ್ದರು.
ಗ್ರಾಮದ ದೇವಸ್ಥಾನದ ಮುಂದೆ ವಧು-ವರರನ್ನು ಕೂರಿಸಿ, ಅವರ ಕೈಯಲ್ಲಿ ಕಪ್ಪೆಗಳನ್ನು ಕಟ್ಟಿದ್ದ ಕೋಲುಗಳನ್ನು ಕೊಟ್ಟಿದ್ದರು. ಸಲಕ ಸಂಪ್ರದಾಯದಂತೆ ವಧುವಿನ ಕೈಯಲ್ಲಿದ್ದ ಕಪ್ಪೆಗೆ ವರ ಮಾಂಗಲ್ಯ ಕಟ್ಟಿದನು. ಆಗ ಅಲ್ಲಿ ನೆರೆದಿದ್ದ ಗ್ರಾಮಸ್ಥರು ವಧು-ವರರಿಗೆ ಅಕ್ಷತೆ ಹಾಕಿ ಆಶೀರ್ವಾದ ಮಾಡಿದ್ದಾರೆ.
ಕಪ್ಪೆಗಳ ಹಾಗೂ ಚಿಕ್ಕಮಕ್ಕಳ ಮದುವೆ ಮಾಡಿಸಿದರೆ ಮಳೆ ಬರುತ್ತದೆ ಎನ್ನುವುದು ಕಸವನಹಳ್ಳಿ ಗ್ರಾಮಸ್ಥರ ಬಲವಾದ ನಂಬಿಕೆಯಾಗಿದೆ. ನಿನ್ನೆ ನಡೆದ ಮದುವೆ ಕಾರ್ಯಕ್ರಮದಲ್ಲಿ ಗ್ರಾಮದ ಅನೇಕರು ಭಾಗಿಯಾಗಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv