ಮದ್ವೆಯಲ್ಲಿ ವರನಿಗೆ ಟೊಮೆಟೋ, ಮೊಟ್ಟೆ, ಸಗಣಿ ನೀರು, ಹಾಕಿ ಸ್ನಾನ ಮಾಡಿಸಿದ ಸ್ನೇಹಿತರು

Public TV
1 Min Read

ಮಂಗಳೂರು: ಮದುವೆಯ ದಿನ ಮಧುಮಗನಿಗೆ ಕೀಟಲೆ ಮಾಡೋದು ಮಾಮೂಲಿ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ರಾಯಿ ಎಂಬಲ್ಲಿ ನಡೆದ ಮದುವೆ ಮಾತ್ರ ತುಂಬನೇ ಡಿಫರೆಂಟ್ ಆಗಿತ್ತು. ಇತರ ಸ್ನೇಹಿತರಿಗೆ ಮದುವೆಯ ದಿನ ಕೀಟಲೆ ಕೊಡುತ್ತಿದ್ದ ಆತನಿಗೆ ಆತನ ಸ್ನೇಹಿತರು ಸಖತ್ ಆಗಿಯೇ ಶಾಕ್ ಕೊಟ್ಟಿದ್ದಾರೆ.

ಹೌದು. ಬಂಟ್ವಾಳದ ರಾಯಿ ನಿವಾಸಿ ಮಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿರುವ ರಾಕೇಶ್‍ಗೆ ಕಳೆದ ಫೆಬ್ರವರಿ 19 ರಂದು ಮೆಹಂದಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಮಧುಮಗ ರಾಕೇಶ್ ಶಾಸ್ತ್ರೋಕ್ತವಾಗಿ ಮೆಹೆಂದಿ ಕಾರ್ಯಕ್ರಮಕ್ಕೆ ತಯಾರಾಗುತ್ತಿದ್ದರೆ ಇತ್ತ ರಾಕೇಶ್ ಸ್ನೇಹಿತರು ಮಾತ್ರ ಕುಚೇಷ್ಠೆಗೆ ತಯಾರಾಗಿದ್ದರು.

ಮಧುಮಗನಿಗೆ ಮನೆಯವರು ಹಾಲು ಸುರಿಯುತ್ತಿದ್ದಂತೆ ಬಂದ ಸ್ನೇಹಿತರು ರಾಕೇಶ್ ಮೇಲೆ ಹಳಸಿದ ಟೊಮೆಟೋ, ಮೊಟ್ಟೆ, ಸಗಣಿ ನೀರು ಸುರಿದಿದ್ದಾರೆ. ಅಷ್ಟೇ ಅಲ್ಲದೇ ಮದುವೆ ದಿನಾನೂ ಮಧುಮಗನನ್ನು ಬಿಡದ ಸ್ನೇಹಿತರು, ವಿವಿಧ ತರಕಾರಿಗಳ ಮಾಲೆಯನ್ನು ಮಾಡಿ ಹೊರೆಕಾಣಿಕೆ ರೂಪದಲ್ಲಿ ಮದುವೆ ಮಂಟಪಕ್ಕೆ ತಂದಿದ್ರು. ಎಲ್ಲಾ ಸ್ನೇಹಿತರು ಒಂದೇ ರೀತಿಯ ಪಂಚೆ ಹಾಗೂ ಅಂಗಿ ಧರಿಸಿದ್ದು, ಎಲ್ಲರ ಗಮನ ಸೆಳೆದಿತ್ತು.

ಅಲ್ಲದೆ “ರಾಪಾಟದ ರಾಕೇಶ್‍ನ ಮದುವೆ” ಎಂದು ಬ್ಯಾನರ್ ಕೂಡಾ ಊರು ತುಂಬಾ ಹಾಕಿದ್ದಾರೆ. ಅದರಲ್ಲಿ ಮದುವೆಯ ಕುರಿತು ಡಿಫರೆಂಟ್ ಡೈಲಾಗ್‍ಗಳನ್ನು ಹಾಕಿದ್ದು ಊರಿನವರ ಗಮನ ಸೆಳೆದಿತ್ತು. ಬೇರೆ ಸ್ನೇಹಿತರ ಮದುವೆಯಲ್ಲಿ ಮಧುಮಕ್ಕಳಿಗೆ ರೇಗಿಸುತ್ತಿದ್ದ ರಾಕೇಶ್ ಗೆ ಈ ಬಾರಿ ಸ್ನೇಹಿತರೂ ರೇಗಿಸಿ ಸಖತ್ ಮಜಾ ತೆಗೆದುಕೊಂಡರು.

ಸದ್ಯ ಮಧುಮಗನಿಗೆ ಯುವಕರ ಕೀಟಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಜನ ಸಖತ್ ಎಂಜಾಯ್ ಮಾಡುತ್ತಿದ್ದಾರೆ.

https://www.youtube.com/watch?v=_zP21lk-DnI

Share This Article
Leave a Comment

Leave a Reply

Your email address will not be published. Required fields are marked *