ಡಾನ್ ಪಟ್ಟಕ್ಕಾಗಿ ಸ್ನೇಹಿತನನ್ನೇ ಕೊಂದ ಕಿರಾತಕರು – ಕೂಲಿ ಮಾಡಿ ಸಾಕುತ್ತಿದ್ದ ಏಕೈಕ ಮಗನನ್ನ ಕಳೆದ್ಕೊಂಡ ತಾಯಿ

Public TV
2 Min Read

ಬೆಳಗಾವಿ: ಡಾನ್ ಪಟ್ಟಕ್ಕಾಗಿ ಸ್ನೇಹಿತರೆಲ್ಲರೂ ಸೇರಿಕೊಂಡು ಗೆಳೆಯನನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ತಾಲೂಕಿನ ಸಂತಿ ಬಸ್ತವಾಡ ಗ್ರಾಮದಲ್ಲಿ ನಡೆದಿದೆ.

ವಿಶ್ವನಾಥ್ ಬಿರಾಮುಟ್ಟಿ (23) ಸ್ನೇಹಿತರಿಂದಲೇ ಕೊಲೆಯಾದ ಯುವಕ. ಭಾನುವಾರ ರಾತ್ರಿ ವಿಶ್ವನಾಥ್ ತನ್ನ ಮನೆಯಲ್ಲಿದ್ದಾಗ ಆತನ ಸ್ನೇಹಿತ ಬಂದು ಕಾರ್ ತೋರಿಸುತ್ತೇನೆ ಬಾ ಎಂದು ಕರೆದುಕೊಂಡು ಹೋಗಿದ್ದನು. ಆದರೆ ರಾತ್ರಿ 11 ಗಂಟೆಗೆ ಆತನನ್ನ ಊರ ಹೊರವಲಯದ ಶಾಲೆಯ ಪಕ್ಕದ ಜಮೀನೊಂದರಲ್ಲಿ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿ, ರುಂಡವನ್ನ ಬೇರೆ ಮಾಡಿ ಪರಾರಿಯಾಗಿದ್ದಾರೆ.

ಇದೇ ಗ್ಯಾಂಗ್ ನಲ್ಲಿದ್ದ ಓರ್ವ ಸ್ನೇಹಿತ ಬಿಯರ್ ಬಾಟಲ್ ತರಲು ಹೊರ ಹೋದವ ಸ್ಥಳಕ್ಕೆ ಹೋದಾಗ ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿಶ್ವನಾಥ್‍ನನ್ನ ನೋಡಿ ತಕ್ಷಣ ಕುಟುಂಬಸ್ಥರಿಗೆ ಸುದ್ದಿ ಮುಟ್ಟಿಸಿದ್ದಾನೆ. ನಾವು ಹಾಗೂ ಗ್ರಾಮಸ್ಥರು ಹೋದಾಗ ಮಗನ ಕೊಲೆಯಾದ ಸ್ಥಿತಿ ನೋಡಿ ಗಾಬರಿಯಾಗಿತ್ತು. ಪಾರ್ಟಿ ಮಾಡಲು ಕರೆದುಕೊಂಡು ಬಂದಿದ್ದ ಸ್ನೇಹಿತರು ಮಾತ್ರ ಅಲ್ಲಿಂದ ಪರಾರಿಯಾಗಿದ್ದರು ಎಂದು ಮೃತ ವಿಶ್ವನಾಥ್ ತಾಯಿ ಮಾಲಾ ಕಣ್ಣೀರು ಹಾಕುತ್ತಾರೆ.

ವಿಶ್ವನಾಥ್ ಒಬ್ಬನೇ ಮಗನಾಗಿದ್ದು, ಪಿಯುಸಿ ಡ್ರಾಯಿಂಗ್ ಕೋರ್ಸ್ ಮಾಡುತ್ತಿದ್ದ. ಈ ಹಿಂದೆ ಕೂಡ ಪಾರ್ಟಿಗೆ ಕರೆದುಕೊಂಡು ಹೋಗಿದ್ದ ಸ್ನೇಹಿತರಿಗೂ ಹಾಗೂ ವಿಶ್ವನಾಥ್‍ಗೂ ಜಗಳವಾಗಿ ಅಂದು ಕೂಡ ಈತನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದರು. ಆ ಕೇಸ್ ಕೂಡ ಸದ್ಯ ಕೋರ್ಟ್ ನಲ್ಲಿ ನಡೆಯುತ್ತಿದೆ. 2 ವರ್ಷ ಕಳೆಯುವಷ್ಟರಲ್ಲಿ ಆತನನನ್ನ ಹೇಗಾದರೂ ಮಾಡಿ ಕೊಲೆ ಮಾಡಬೇಕು  ಅಂತ ಗ್ಯಾಂಗ್ ಸೋಮವಾರ ಸ್ಕೆಚ್ ಹಾಕಿತ್ತು ಎಂದು ವಿಶ್ವನಾಥ್ ಸಂಬಂಧಿ ಮಲ್ಲವ್ವಾ ಆರೋಪಿಸುತ್ತಾರೆ.

ಸುರೇಶ್ ಎಂಬಾತ ಬಂದು ಆತನನ್ನ ಕರೆದುಕೊಂಡು ಹೋಗಿದ್ದು, ಪಾರ್ಟಿಯಲ್ಲಿ ಸುರೇಶ್, ಪರಶು, ಬಸು ಸೇರಿದಂತೆ 5ಕ್ಕೂ ಅಧಿಕ ಗೆಳೆಯರು ಗ್ರಾಮದ ಹೊರವಲಯದ ಮನೆಯೊಂದರಲ್ಲಿ ಮೊದಲು ಆತನನ್ನ ಮಾರಕಾಸ್ತ್ರಗಳಿಂದ ಹೊಡೆದು ಕೊಂದಿದ್ದಾರೆ. ನಂತರ ಮನೆಯ ಪಕ್ಕದಲ್ಲಿದ್ದ ತೋಟದಲ್ಲಿ ರುಂಡವನ್ನ ಕಟ್ ಮಾಡಿರುತ್ತಾರೆ. ಸದ್ಯ ಪಾರ್ಟಿ ಮಾಡಿದ್ದ ಸ್ನೇಹಿತರ ಗ್ಯಾಂಗೇ ಈ ಕೊಲೆ ಮಾಡಿದೆ ಎಂದು ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ.

ಈ ವಿಶ್ವನಾಥ್ ಕೂಡ ಖದೀಮರ ಗ್ಯಾಂಗ್ ವಿರುದ್ಧ ಊರಿನಲ್ಲಿ ಒಂದು ಹಂತದ ಹವಾ ಮೆಂಟೆನ್ ಮಾಡಿಕೊಂಡಿದ್ದ. ಆದರೆ ಅವನನ್ನೇ ಮುಗಿಸಿದರೆ ಹಿಂದಿನ ಕೇಸ್ ಮುಗಿಯುತ್ತೆ. ಜೊತೆಗೆ ಊರಲ್ಲಿ ಡಾನ್ ಎಂಬ ಪಟ್ಟ ಕೂಡ ಸಿಗುತ್ತೆ ಅಂದುಕೊಂಡಿದ್ದ ಸ್ನೇಹಿತರಲ್ಲೇ ಒಬ್ಬ ಇದನ್ನೆಲ್ಲ ಪ್ಲಾನ್ ಮಾಡಿದ್ದಾನೆ. ಬಳಿಕ ತನ್ನ ಜೊತೆಗೆ ನಾಲ್ಕು ಜನರನ್ನ ಕರೆದುಕೊಂಡು ವಿಶ್ವನಾಥ್ ನನ್ನ ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎನ್ನಲಾಗುತ್ತದೆ.

ಮಾಹಿತಿ ತಿಳಿದು ಗ್ರಾಮೀಣ ಡಿವೈಎಸ್.ಪಿ ಬಾಲಚಂದ್ರ ಶಿಂಘ್ಯಾಗೋಳ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈಗಾಗಲೇ ಪಾರ್ಟಿಯಲ್ಲಿದ್ದ ಇಬ್ಬರು ಸ್ನೇಹಿತರನ್ನ ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಅವರ ಹೇಳಿಕೆ ಮೇಲೆ ಕೊಲೆ ಮಾಡಿದ ಆರೋಪಿಗಳ ಪತ್ತೆಗೆ ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Share This Article
Leave a Comment

Leave a Reply

Your email address will not be published. Required fields are marked *