ಒಂದೇ ಟೇಬಲಿನಲ್ಲಿ ಎಣ್ಣೆ, ಚಿಕನ್ ಸೇವಿಸಿ ನಂತರ ಸ್ನೇಹಿತನನ್ನೆ ಹೊಡೆದು ಕೊಂದ ಗೆಳೆಯರು

Public TV
1 Min Read

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಗೆಳೆಯರಿಬ್ಬರು ಸೇರಿ ಸ್ನೇಹಿತನನ್ನೇ ಬಡಿಗೆಯಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

30 ವರ್ಷದ ಇರ್ಫಾನ್ ಕೊಲೆಯಾದ ಯುವಕ. ಇರ್ಫಾನ್ ಕಮರ್ಷಿಯಲ್ ಸ್ಟ್ರೀಟ್ ನಿವಾಸಿಯಾಗಿದ್ದು, ಹೂವಿನ ವ್ಯಾಪಾರ ಮಾಡಿಕೊಂಡಿದ್ದ. ಆರೋಪಿಗಳಾದ ಶಕ್ತಿವೇಲು, ಮಲೈ ಹಾಗೂ ಸಂತ್ರಸ್ತ ಇರ್ಫಾನ್ ಒಂದೇ ಟೆಬಲ್ ನಲ್ಲಿ ನಿತ್ಯ ಮದ್ಯಪಾನ ಮಾಡಿ ಅರ್ಧ ಪ್ಲೇಟ್ ಕಬಾಬ್ ಹಂಚಿಕೊಂಡು ತಿನ್ನುತ್ತಿದ್ದ ಗೆಳೆಯರು. ಎಂದಿನಂತೆ ನಿನ್ನೆಯೂ ಕೂಡ ಬಾರ್ ನಲ್ಲಿ ಕುಡಿದು ಹೋಗುತ್ತಿರುವಾಗ ಮೂವರ ನಡುವೆ ಗಲಾಟೆ ಆಗಿದೆ.

ಗಲಾಟೆ ವಿಕೋಪಕ್ಕೆ ಹೋಗುತ್ತಿದ್ದಂತೆ ಆರೋಪಿಗಳಾದ ಶಕ್ತಿವೇಲು, ಮಲೈ ಮೋರಿ ಪಕ್ಕದಲ್ಲಿ ಬಿದ್ದಿದ್ದ ಬಡಿಗೆಯಿಂದ ಇರ್ಫಾನ್ ತಲೆಗೆ ಹೊಡೆದಿದ್ದಾರೆ. ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದಿದ್ದರಿಂದ ಇರ್ಫಾನ್ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ. ಇರ್ಫಾನ್ ಸತ್ತಿದ್ದಾನೆ ಎಂದು ತಿಳಿಯುತ್ತಿದ್ದಂತೆ ಇಬ್ಬರೂ ಆರೋಪಿಗಳು ತಲೆ ಮರೆಸಿಕೊಂಡಿದ್ದರು. ಘಟನೆ ಸಂಬಂಧ ಭಾರತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂಬಂಧಿಕರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಶಕ್ತಿವೇಲು ಹಾಗೂ ಮಲೈ ಇಬ್ಬರನ್ನೂ ಬಂಧಿಸಿದ್ದು, ತನಿಖೆ ಪ್ರಾರಂಭಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *