ಚಿಕ್ಕಬಳ್ಳಾಪುರದಲ್ಲಿ ಪದೇ ಪದೇ ಭೂಕಂಪನ – ಬಾಗೇಪಲ್ಲಿ ತಾಲೂಕಿನ ಹಲವೆಡೆ ಭೀಕರ ಶಬ್ದ

Public TV
2 Min Read

ಚಿಕ್ಕಬಳ್ಳಾಪುರ: ಇಲ್ಲಿನ ಗ್ರಾಮವೊಂದರ ಜನ ಭಾನುವಾರ ರಾತ್ರಿ ಊಟ ಮಾಡಿ ಇನ್ನೇನು ನೆಮ್ಮದಿಯಿಂದ ಮಲಗೋಣ ಅಂತ ಹಾಸಿಗೆ ದಿಂಬು ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದರು. ಆದರೆ ದಿಢೀರ್ ಅಂತ ಭೂಮಿಯ ಅಂತರಾಳದಿಂದ ಬಂದ ಅದೊಂದು ಸದ್ದು ಆ ಜನರನ್ನ ಇಡೀ ರಾತ್ರಿ ನಿದ್ದೆಯಿಲ್ಲದಂತೆ ಮಾಡಿ ಜಾಗರಣೆ ಮಾಡುವಂತೆ ಮಾಡಿತ್ತು. ಈಗಲೂ ಸಹ ಒಂದಲ್ಲ ಎರಡಲ್ಲ ಹತ್ತಾರು ಗ್ರಾಮಗಳಲ್ಲಿ ಪದೇ ಪದೇ ಅದೇ ರೀತಿಯ ಭಾರೀ ಸ್ಫೋಟದ ಸದ್ದು ಕೇಳಿಬರ್ತಿದ್ದು ಜನ ಆತಂಕದಿಂದ ಕಾಲ ಕಳೆಯುವಂತಾಗಿದೆ.

ಹೌದು. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಹತ್ತಾರು ಹಳ್ಳಿಗಳಲ್ಲಿ ಭಾನುವಾರ ರಾತ್ರಿಯಿಂದ ಭೂಮಿಯ ಅಂತರಾಳದಿಂದ ವಿಚಿತ್ರ ಸದ್ದು ಕೇಳಿಬರುತ್ತಿದೆ. ಇದ್ದಕ್ಕಿದ್ದಂತೆ ದುಪ್ಪ್ ಅಂತ ಬರೋ ಆ ಸದ್ದಿಗೆ ಭೂಮಿಯೇ ಗಡ ಗಡ ನಡುಗುತ್ತಿದೆ. ಇದ್ರಿಂದ ಜನರಿಗೆ ಭೂಕಂಪನದ ಅನುಭವ ಆಗುತ್ತಿದೆ. ನಿನ್ನೆ ರಾತ್ರಿ 8 ಗಂಟೆಯಿಂದ ಸಣ್ಣ ಪ್ರಮಾಣದಲ್ಲಿ ಆರಂಭವಾದ ಸದ್ದು ರಾತ್ರಿ 9.30 ಹಾಗೂ 9.45 ರಲ್ಲಿ ಬಹಳಷ್ಟು ಜೋರಾಗಿ ಕೇಳಿಬಂದಿದೆ. ಇದರಿಂದ ಭೂಮಿಯೇ ಅಲುಗಾಡಿದ ಅನುಭವ ಆಗಿ ಮನೆಯಲ್ಲಿದ್ದವರೆಲ್ಲಾ ಕೀರಾಚಾಡುತ್ತಾ ಹೊರಗೆ ಬಂದಿದ್ದಾರೆ. ಮನೆಯಲ್ಲಿದ್ದ ಪಾತ್ರೆ ಸಾಮಾನುಗಳಲ್ಲೆವೂ ಅಲುಗಾಡತೊಡಗಿವೆ. ಮಕ್ಕಳು ಭಯಭೀತರಾಗಿ ಚೀರಾಡಿ ಕಣ್ಣೀರು ಹಾಕಿದ್ದಾರೆ. ದಿಕ್ಕು ತೋಚದ ಜನ ಇಡೀ ರಾತ್ರಿ ಮನೆಯ ಹೊರಭಾಗದಲ್ಲೇ ಕಾಲ ಕಳೆದು ಜಾಗರಣೆ ಮಾಡಿದ್ದಾರೆ. ಇದನ್ನೂ ಓದಿ: ದ್ವೇಷದ ವಾತಾವರಣ ಸೃಷ್ಟಿಸಿರುವ ʼದಿ ಕಾಶ್ಮೀರ್‌ ಫೈಲ್ಸ್‌ʼ ಸಿನಿಮಾ ಬ್ಯಾನ್‌ ಮಾಡಿ: ಫಾರೂಕ್‌ ಅಬ್ದುಲ್ಲಾ ಒತ್ತಾಯ

ಅಂದಹಾಗೆ ಬಾಗೇಪಲ್ಲಿ ತಾಲೂಕಿನ ಪೆದ್ದತುಂಕೇಪಲ್ಲಿ, ಕದಿರನ್ನಗಾರಪಲ್ಲಿ, ದಾಸಯ್ಯಗಾರಪಲ್ಲಿ, ಟೆಂಕಮಾಕಲಪಲ್ಲಿ, ಲಘುಮದ್ದೇಪಲ್ಲಿ. ಮದ್ದಲಖಾನೆ, ಗುರ್ರಾಲದಿನ್ನೆ, ಈರಗಂಟಪಲ್ಲಿ, ಶಂಕವಾರಂಪಲ್ಲಿ ಸೇರಿದಂತೆ ಇನ್ನೂ ಹಲವು ಗ್ರಾಮಗಳಲ್ಲಿ ಈ ರೀತಿಯ ಅನುಭವ ಆಗಿದೆ. ಇನ್ನೂ ವಿಷಯ ತಿಳಿದ ಕ್ಷೇತ್ರದ ಶಾಸಕ ಸುಬ್ಬಾರೆಡ್ಡಿ, ತಹಶೀಲ್ದಾರ್, ಹಾಗೂ ಗಣಿ ಹಾಗೂ ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಪೆದ್ದತುಂಕೇಪಲ್ಲಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಬಳಿ ಮಾಹಿತಿ ಪಡೆದುಕೊಂಡರು. ಸ್ವತಃ ಶಾಸಕರು ಅಧಿಕಾರಿಗಳ ಗ್ರಾಮದಲ್ಲಿ ಜನರ ಬಳಿ ಮಾಹಿತಿ ಪಡೆಯುವಾಗಲೇ ಜೋರಾದ ಸದ್ದು ಕೇಳಿಬಂದು ಎಲ್ಲರನ್ನ ದಂಗುಬಡಿಸಿತ್ತು.

CKB

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇದೇ ಮೊದಲಲ್ಲ. ಈ ಹಿಂದೆಯೂ ಚಿಕ್ಕಬಳ್ಳಾಪುರ ತಾಲೂಕಿನ ಬಂಡಹಳ್ಳಿ ಹಾಗೂ ಚಿಂತಾಮಣಿ ತಾಲೂಕಿನ ಮಿಟ್ಟಹಳ್ಳಿ ಸೇರಿ ಹಲವು ಗ್ರಾಮಗಳಲ್ಲಿ ಇದೇ ರೀತಿಯ ಸದ್ದು ಭೂಮಿ ಕಂಪಿಸಿದ ಅನುಭವಗಳಾಗಿದ್ದವು. ಕೆಲವು ಬಾರಿ 3.0 ತೀವ್ರತೆಯ ಭೂಕಂಪನ ಸಹ ವರದಿಯಾಗಿತ್ತು. ಆದ್ರೆ ಕಳೆದ ರಾತ್ರಿಯಿಂದ ಬಾಗೇಪಲ್ಲಿ ತಾಲೂಕಿನ ಹಳ್ಳಿಗಳಲ್ಲಿ ಭೂಮಿ ಕಂಪಿಸಿದ ಅನುಭವ ಆಗುತ್ತಿದ್ರೂ ರಿಕ್ಟರ್ ಮಾಪನದಲ್ಲಿ ಯಾವುದೇ ಭೂಕಂಪನದ ವರದಿ ಆಗಿಲ್ಲ. ಜಿಲ್ಲೆಯಲ್ಲಿ ಪದೇ ಪದೇ ಈ ರೀತಿಯ ಘಟನೆಗಳಿಗೆ ಕಳೆದ ಬಾರಿ ಸುರಿದ ಭಾರೀ ಮಳೆಗೆ ಅಂತರ್ಜಲ ಹೆಚ್ಚಾಗಿ ಭೂಮಿಯ ಅಂತರಾಳದಲ್ಲಿ ಶೇಖರಣೆಯಾಗಿರೋ ಗಾಳಿ ಹೊರಬರುತ್ತಿರೋದು (ಏರ್ ಬ್ಲಾಸ್ಟ್) ಕಾರಣ ಅನ್ನೋದು ಅಧಿಕಾರಿಗಳ ಹಾಗೂ ಪರಿಣಿತರ ವರದಿಯಾಗಿದೆ. ಇದನ್ನೂ ಓದಿ: ವಿಧಾನ ಪರಿಷತ್ ಸಭಾಪತಿ ಸ್ಥಾನ, ಜೆಡಿಎಸ್‌ಗೆ ಬಸವರಾಜ ಹೊರಟ್ಟಿ ರಾಜೀನಾಮೆ

 

Share This Article
Leave a Comment

Leave a Reply

Your email address will not be published. Required fields are marked *