ಫ್ರೀ ಕಾಶ್ಮೀರ ಪ್ಲೇ ಕಾರ್ಡ್ ಹಿಡಿದ ಯುವತಿ ಪರ ವಕಾಲತ್ತು ವಹಿಸಲ್ಲ- ಮೈಸೂರು ವಕೀಲರು

Public TV
1 Min Read

ಮೈಸೂರು: ಮಾನಸಗಂಗೋತ್ರಿ ಕ್ಯಾಂಪಸ್‍ನಲ್ಲಿ ಫ್ರೀ ಕಾಶ್ಮೀರ ನಾಮಫಲಕ ಪ್ರದರ್ಶನ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಮಫಲಕ ಪ್ರದರ್ಶಿದ ನಳಿನಿ ಪರ ನ್ಯಾಯಾಲಯದಲ್ಲಿ ವಕಾಲತ್ತು ವಹಿಸದೇ ಇರಲು ಮೈಸೂರು ವಕೀಲರ ಸಂಘ ನಿರ್ಣಯಿಸಿದೆ.

ಸಂಘದ ಕಾರ್ಯಕಾರಿ ಸಮಿತಿಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಪೊಲೀಸರು ರಾಷ್ಟ್ರ ವಿರೋಧಿ ಪ್ರಕರಣ ದಾಖಲಿಸಿಕೊಂಡಿರುವ ಹಿನ್ನೆಲೆಯಲ್ಲಿ ವಕಾಲತ್ತು ವಹಿಸದಂತೆ ವಕೀಲರಿಗೆ ಸೂಚನೆ ನೀಡಲಾಗಿದೆ.

ಮೈಸೂರು ಜಿಲ್ಲಾ ನ್ಯಾಯಾಲಯದ ಯುವ ವಕೀಲರು ಫ್ರೀ ಕಾಶ್ಮೀರ ನಾಮಫಲಕ ಪ್ರದರ್ಶನ ಪ್ರಕರಣದಲ್ಲಿ ಆರೋಪಿಗಳ ಪರ ವಕಾಲತ್ತು ವಹಿಸಬೇಡಿ. ಈ ಹಿಂದೆ ಸಹ ಇಂತಹ ಪ್ರಕರಣಗಳಲ್ಲಿ ಆರೋಪಿಗಳ ಪರ ಜಿಲ್ಲಾ ನ್ಯಾಯಾಲಯದ ವಕೀಲರು ವಕಾಲತ್ತು ವಹಿಸಿಲ್ಲ. ಶಂಕಿತ ಉಗ್ರರಾದ ಫಹಾದ್ ಮತ್ತು ಅಲಿ ಪ್ರಕರಣದಲ್ಲೂ ವಕಾಲತ್ತು ವಹಿಸಿಲ್ಲ. ಹೀಗಾಗಿ ಈ ಬಾರಿಯೂ ಇದೇ ದಿಟ್ಟ ನಿರ್ಣಯ ಕೈಗೊಳ್ಳಿ. ಈ ಮೂಲಕ ಸಂಘದ ಗೌರವ ಕಾಪಾಡಿ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಆನಂದ್ ಕುಮಾರ್ ಗೆ ಮನವಿ ಸಲ್ಲಿಸಿದ್ದರು.

ಮನವಿಗೆ ಸ್ಪಂದಿಸಿದ ಜಿಲ್ಲಾ ವಕೀಲರ ಸಂಘದ ಕಾರ್ಯಕಾರಿ ಸಮಿತಿ, ಆರೋಪಿ ನಳಿನಿ ಪರ ವಕಾಲತ್ತು ವಹಿಸದಿರುವ ಕುರಿತು ನಿರ್ಣಯ ಕೈಗೊಂಡಿದೆ.

ಮೈಸೂರಿನ ಮಾನಸಗಂಗೋತ್ರಿ ಕ್ಯಾಂಪಸ್‍ನಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಫ್ರೀ ಕಾಶ್ಮೀರ್ ಪ್ಲೇ ಕಾರ್ಡ್ ಹಿಡಿದಿದ್ದ ವಿದ್ಯಾರ್ಥಿನಿಗೆ ಪೊಲೀಸರು ಇತ್ತೀಚೆಗೆ ಸತತ 7 ಗಂಟೆಗಳ ಕಾಲ ವಿಚಾರಣೆ ಮಾಡಿದ್ದರು.

ವಿಚಾರಣೆಯಲ್ಲಿ ಒಟ್ಟು 80 ಪ್ರಶ್ನೆ ಕೇಳಲಾಗಿತ್ತು. ಇದರಲ್ಲಿ ಕೆಲವೊಂದು ಪ್ರಶ್ನೆಗಳನ್ನು ಹೊರತುಪಡಿಸಿ ಎಲ್ಲ ಪ್ರಶ್ನೆಗಳಿಗೂ ನಳಿನಿ ಉತ್ತರಿಸಿದ್ದಾಳೆ. ಸದ್ಯಕ್ಕೆ ಮೊದಲ ಹಂತದ ವಿಚಾರಣೆ ಮುಗಿದಿದ್ದು, ಅವಶ್ಯಕತೆ ಇದ್ದರೆ ಮತ್ತೆ ವಿಚಾರಣೆಗೆ ಕರೆಯುತ್ತಾರೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿತ್ತು.

ವಿಚಾರಣೆ ಬಳಿಕ ಹೊರ ಬಂದ ನಳಿನಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಳು. ನಾನು ನನ್ನ ಹೇಳಿಕೆಯನ್ನು ಪತ್ರಿಕೆ ಹಾಗೂ ವಿಡಿಯೋ ಮೂಲಕ ಹೇಳಿದ್ದೇನೆ. ಅದನ್ನು ಬಿಟ್ಟು ಬೇರೆ ಏನು ಹೇಳುವುದಿಲ್ಲ. ಬೇರೆ ಏನು ಕೇಳಬೇಡಿ. ನಾನು ಏನನ್ನೂ ಹೇಳುವುದಿಲ್ಲ. ಪೊಲೀಸರ ವಿಚಾರಣೆಗೆ ಸಹಕರಿಸುತ್ತೇನೆ. ಮತ್ತೇನು ಹೇಳುವುದಿಲ್ಲ ಎಂದಿದ್ದಳು.

Share This Article
Leave a Comment

Leave a Reply

Your email address will not be published. Required fields are marked *