ಅತ್ತ ದರಿ ಇತ್ತ ಪುಲಿ ಸ್ಥಿತಿಯಲ್ಲಿ ‘ಕೈ’ ಕೊಟ್ಟು ಮುಂಬೈ ಸೇರಿದ ಶಾಸಕರು!

Public TV
1 Min Read

ಬೆಂಗಳೂರು: ಆಪರೇಷನ್ ಕಮಲಕ್ಕೆ ಮುನ್ನುಡಿ ಬರೆದ ಮುಂಬೈ ಸೇರಿರುವ ಕಾಂಗ್ರೆಸ್ ಶಾಸಕರು ಸದ್ಯ ಗೊಂದಲದಲ್ಲಿದ್ದು, ಮುಂದೆ ಏನು ಮಾಡಬೇಕು ಅನ್ನುವ ಚಿಂತೆಯಲ್ಲು ಮುಳುಗಿದ್ದಾರಂತೆ. ಆಪರೇಷನ್ ಕಮಲ ಸದ್ಯ ಬಹುತೇಕ ವಿಫಲವಾಗಿದ್ದು, ಕಾಂಗ್ರೆಸ್ ಶಾಸಕರು ರೆಸಾರ್ಟ್ ಸೇರಿದ್ದಾರೆ. ಶಾಸಕಾಂಗ ಸಭೆಗೂ ಗೈರಾಗಿರುವ ಅತೃಪ್ತ ನಾಲ್ವರಿಗೆ ಪಕ್ಷ ನೋಟಿಸ್ ಜಾರಿ ಮಾಡಿದೆ. ಮುಂಬೈನಲ್ಲಿ ಉಳಿದುಕೊಂಡಿರುವ ಶಾಸಕರು ನೋಟಿಸ್ ಗೆ ಉತ್ತರ ನೀಡಲೇಬೇಕಿದೆ.

ಪಕ್ಷೇತರ ಶಾಸಕರಿಬ್ಬರು ಸಮ್ಮಿಶ್ರ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದಿದ್ದು, ಬಿಜೆಪಿಯ ಸಂಖ್ಯಾಬಲ 104 ರಿಂದ 106ಕ್ಕೆ ಏರಿಕೆಯಾಗಿದೆ. ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಉಮೇಶ್ ಜಾಧವ್ ಮತ್ತು ನಾಗೇಂದ್ರ ಅವರ ಮುಂದಿನ ನಡೆ ಬಗ್ಗೆ ಎಲ್ಲರ ಚಿತ್ತ ನೆಟ್ಟಿದೆ. ಇದೀಗ ಮುಂಬೈ ಬಿಡುವಂತಿಲ್ಲ. ಇತ್ತ ಬೆಂಗಳೂರಿಗೂ ಬರುವಂತಿಲ್ಲ. ಮತ್ತೊಂದೆಡೆ ಬಿಜೆಪಿಗೆ ಹೋಗುವಂತಿಲ್ಲ ಹಾಗು ಕಾಂಗ್ರೆಸ್ ಕಡೆ ನೋಡುವ ಸ್ಥಿತಿಯಲ್ಲಿ ಅತೃಪ್ತ ಶಾಸಕರಿಲ್ಲ.

ಶಾಸಕಾಂಗ ಸಭೆಗೆ ಗೈರಾದ್ರೂ ಮಾತೃ ಪಕ್ಷ ಮಾತ್ರ ಮೃದು ಧೋರಣೆಯನ್ನು ತೋರುತ್ತಿದೆ. ಎಲ್ಲಿಯೂ ಪಕ್ಷದ ಮುಖಂಡರು ಶಾಸಕರನ್ನು ಅನರ್ಹಗೊಳಿಸುವ ಕುರಿತು ಮಾತನಾಡುತ್ತಿಲ್ಲ. ಸಭೆಗೆ ಗೈರಾಗಿದ್ದೇಕೆ ಎಂಬುವುದಕ್ಕೆ ಉತ್ತರ ನೀಡುವಂತೆ ನೋಟಿಸ್ ನೀಡಿದೆ. ಬಿಜೆಪಿ ನಂಬಿ ಬಂದ ಶಾಸಕರಿಗೆ ಕಮಲ ನಾಯಕರು ತಮ್ಮ ಸ್ಪಷ್ಟ ನಿಲುವನ್ನು ತಿಳಿಸುತ್ತಿಲ್ಲವಂತೆ. ರೆಸಾರ್ಟ್ ಸೇರಿಕೊಂಡಿದ್ದ ಬಿಜೆಪಿ ಶಾಸಕರು ತವರು ಸೇರಿಕೊಂಡಿದ್ದಾರೆ. ಇಂದು ಮಧ್ಯಾಹ್ನ ಅಥವಾ ಸಂಜೆ ಕೈ ಶಾಸಕರು ತಮ್ಮ ಸ್ವಕ್ಷೇತ್ರಗಳಿಗೆ ಮರಳಲಿದ್ದಾರೆ.

ಎಲ್ಲರು ಅವರವರ ಕ್ಷೇತ್ರಗಳಿಗೆ ತೆರಳಿದ್ರೆ ನಮ್ಮ ಸ್ಥಿತಿ ಏನು ಎಂಬ ಗೊಂದಲದಲ್ಲಿ ಅತೃಪ್ತ ಶಾಸಕರು ಮುಳುಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಬಿಜೆಪಿ ನಂಬಿ ಕಾಂಗ್ರೆಸ್ ಗೆ ಕೈ ಎತ್ತಿದ ಶಾಸಕರಿಗೆ ಮಾತ್ರ ಈಗ ಅಲ್ಲೂ ಇಲ್ಲ, ಇಲ್ಲೂ ಇಲ್ಲ ಎಂಬ ಸ್ಥಿತಿಯಾಗಿದ್ದು, ಕಾಂಗ್ರೆಸ್ ನೀಡುವ ನೋಟಿಸ್ ಗೆ ಉತ್ತರ ನೀಡಬೇಕಾದ ಸಂಕಷ್ಟ ಎದುರಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *