ಹಾಸನ: ಜಿಲ್ಲೆಯಲ್ಲಿ ಹೃದಯಾಘಾತದಿಂದ (Heart attack) ಸರಣಿ ಸಾವು ಮುಂದುವರೆದಿದೆ. ಕಳೆದ 24 ಗಂಟೆಗಳಲ್ಲಿ ನಾಲ್ವರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಸಂಪತ್ಕುಮಾರ್ (53), ಸಿ.ಬಿ ವಿರೂಪಾಕ್ಷ (70), ಸಂತೋಷ್ (41), ದೇವಮ್ಮ (72) ಮೃತಪಟ್ಟವರು. ಹಾಸನ ನಗರದ (Hassan City) ಕರಿಗೌಡ ಕಾಲೋನಿ ನಿವಾಸಿ ಸಂಪತ್ಕುಮಾರ್ಗೆ ದಿಢೀರ್ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಕುಟುಂಬಸ್ಥರು ಹಿಮ್ಸ್ ಆಸ್ಪತ್ರೆಗೆ (HIMS Hospital) ಕರೆದೊಯ್ದಿದ್ದು, ಚಿಕಿತ್ಸೆ (Teratment) ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಂಪತ್ಕುಮಾರ್ ಸಾವನ್ನಪ್ಪಿದ್ದಾರೆ.
ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ದುರಂತ ಅಂತ್ಯ
ಸಕಲೇಶಪುರ ತಾಲ್ಲೂಕಿನ, ಬೆಳಗೋಡು ಹೋಬಳಿ ಚಿಕ್ಕನಾಯಕನಹಳ್ಳಿ ಗ್ರಾಮದ ಸಿ.ಬಿ ವಿರೂಪಾಕ್ಷ ಅವರಿಗೆ ಕಳೆದ ರಾತ್ರಿ 11:30ರ ಸುಮಾರಿನಲ್ಲಿ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ಕುಟುಂಬಸ್ಥರು ಸಕಲೇಶಪುರ ಕ್ರಾಫರ್ಡ್ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಆದ್ರೆ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ.
ಮಲಗಿದ್ದಲ್ಲೇ ಸಾವು
ಗ್ರಾಪಂ ಸದಸ್ಯ ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ಆಲೂರು ತಾಲ್ಲೂಕಿನ, ಕಲ್ಲಾರೆ ಗ್ರಾಮದಲ್ಲಿ ನಡೆದಿದೆ. ಸಂತೋಷ್ (41) ಹೃದಯಾಘಾತದಿಂದ ಮೃತಪಟ್ಟ ವ್ಯಕ್ತಿ. ರಾತ್ರಿ ಮಲಗಿದ್ದಲ್ಲಿಯೇ ಹೃದಯಾಘಾತವಾಗಿದೆ. ಬೆಳಗ್ಗೆ ಮೇಲೆಳದಿದ್ದಾಗ ಕುಟುಂಬಸ್ಥರು ನೋಡಿದ್ದು ಕೂಡಲೇ ಹಾಸನದ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದಾರೆ. ಅಷ್ಟರಲ್ಲಿ ಹೃದಯಾಘಾತದಿಂದ ಸಂತೋಷ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಸಂತೋಷ್ ಕಾರಗೋಡು ಗ್ರಾ.ಪಂ. ಸದಸ್ಯರಾಗಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.
ಚಿಕಿತ್ಸೆ ಪಡೆದು ವಾಪಸ್ ಬರುವಾಗ ಸಾವು
ಮತ್ತೊಂದು ಪ್ರಕರಣದಲ್ಲಿ ಹೃದಯಾಘಾತದಿಂದ ವೃದ್ದೆ ಸಾವನ್ನಪ್ಪಿರುವ ಘಟನೆ ಸಕಲೇಶಪುರ ತಾಲ್ಲೂಕಿನ, ಅರೆಕೆರೆ ಗ್ರಾಮದಲ್ಲಿ ನಡೆದಿದೆ. ದೇವಮ್ಮ (72) ಹೃದಯಾಘಾತಕ್ಕೆ ಬಲಿಯಾದ ವೃದ್ದೆ. ದೇವಮ್ಮ ಮನೆಯಲ್ಲಿದ್ದ ವೇಳೆ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಎದೆನೋವು ಹೆಚ್ಚಾಗುತ್ತಲೇ ಬೆಂಗಳೂರು ಜಯದೇವ ಆಸ್ಪತ್ರೆಗೆ ತೆರಳಿ ವೈದ್ಯರ ಸಲಹೆ, ಚಿಕಿತ್ಸೆ, ಔಷಧಿ ಪಡೆದು ಗ್ರಾಮಕ್ಕೆ ವಾಪಾಸ್ಸಾಗುತ್ತಿದ್ದರು. ಬೆಂಗಳೂರಿನಿಂದ ಗ್ರಾಮಕ್ಕೆ ವಾಪಸ್ಸಾಗುವ ಮಾರ್ಗ ಮಧ್ಯೆ ದೇವಮ್ಮ ಮೃತಪಟ್ಟಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಮೃತಪಟ್ಟವರ ಸಂಖ್ಯೆ 31ಕ್ಕೆ ಏರಿಕೆಯಾಗಿದ್ದು ಜಿಲ್ಲೆಯ ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ.