ಗದಗ ಬಿಜೆಪಿ ನಗರಸಭೆ ಉಪಾಧ್ಯಕ್ಷೆಯ ಕುಟುಂಬದ ನಾಲ್ವರ ಬರ್ಬರ ಹತ್ಯೆ – ಮಲಗಿದ್ದಲ್ಲೇ ಕೊಲೆಗೈದು ದುಷ್ಕರ್ಮಿಗಳು ಪರಾರಿ

Public TV
3 Min Read

– ಮದುವೆ, ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಕುಟುಂಬ
– ದರೋಡೆ ಮಾಡಿಲ್ಲ, ಕೊಲೆಗಾಗಿಯೇ ಮನೆಗೆ ನುಗ್ಗಿದ್ದ ಕಿರಾತಕರು

ಗದಗ: ಮಲಗಿದಲ್ಲೇ ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆಮಾಡಿದ ಘಟನೆ ಗದಗ ನಗರದ (Gadag) ನಗರದ ದಾಸರ ಓಣಿಯಲ್ಲಿ ನಡೆದಿದೆ.

ಬೆಟಗೇರಿಯ ಬಿಜೆಪಿ ನಾಯಕಿ (BJP Leader), ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ (Sunanda Bakale) ಅವರ ಪುತ್ರ ಸೇರಿ ನಾಲ್ಕು ಮಂದಿಯನ್ನು ಭೀಕರವಾಗಿ ಕೊಲೆ (Murder) ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಸುನಂದಾ ಬಾಕಳೆ ಮತ್ತು ಅವರ ಪತಿ ಪ್ರಕಾಶ್ ಕೆಳಗಡೆ ಮಲಗಿದ್ದರೆ ಕೊಲೆಯಾದ ನಾಲ್ವರು ಮೇಲುಗಡೆ ಮಲಗಿದ್ದರು.

ಸುನಂದಾ ಬಾಕಳೆ ಪುತ್ರ ಕಾರ್ತಿಕ್ ಬಾಕಳೆ(27) ಉಪಾಧ್ಯಕ್ಷೆ ಸಹೋದರ ಪರಶುರಾಮ ಹಾದಿಮನಿ (55), ಪತ್ನಿ ಲಕ್ಷ್ಮೀ (45) ಇನ್ನು ಪುತ್ರಿ ಆಕಾಂಕ್ಷಾ(16) ಕೊಲೆಯಾದವರು. ಈ ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.

ಕೊಲೆಯಾದ ಪರಶುರಾಮ ಪರಶುರಾಮ ಹಾದಿಮನಿ, ಪತ್ನಿ ಲಕ್ಷ್ಮೀ, ಪುತ್ರಿ ಆಕಾಂಕ್ಷಾ, ಸುನಂದಾ ಬಾಕಳೆ ಪುತ್ರ ಕಾರ್ತಿಕ್‌

ಮಧ್ಯರಾತ್ರಿ ಮೇಲಿನ ಮಹಡಿಯಲ್ಲಿ ಕಿರುಚಾಟದ ಧ್ವನಿ ಕೇಳಿ ಪ್ರಕಾಶ್‌ ಅವರು ಪೊಲೀಸರಿಗೆ ಕರೆ ಮಾಡಿದ್ದಾರೆ. ಪೊಲೀಸರಿಗೆ ಫೋನ್ ಮಾಡುತ್ತಿದ್ದಂತೆ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಬಾಗಿಲು ತೆಗೆದಿದ್ದರೆ ನಮ್ಮನ್ನು ಕೊಲೆ ಮಾಡುತ್ತಿದ್ದರು ಎಂದು ಪ್ರಕಾಶ್ ಬಾಕಳೆ ಹೇಳಿಕೆ ನೀಡಿದ್ದಾರೆ.  ಇದನ್ನೂ ಓದಿ: ಹರ್ಷಿಕಾ-ಭುವನ್ ಮೇಲೆ ಹಲ್ಲೆ: ಪಾಕಿಸ್ತಾನದಲ್ಲಿ ಇದ್ದೀವಾ ಎಂದು ಪ್ರಶ್ನೆ ಮಾಡಿದ ನಟಿ

ಹುಟ್ಟುಹಬ್ಬದ ಸಂಭ್ರಮ ಮುಗಿಸಿ ರಾತ್ರಿ 1ನೇ ಮಹಡಿಯ ಕೋಣೆಯಲ್ಲಿ ಮಲಗಿದ್ದರು. ರಾತ್ರಿ 2 ರಿಂದ 3 ಗಂಟೆ ಸುಮಾರಿಗೆ ಬಂದ ದುಷ್ಕರ್ಮಿಗಳು ಮನಬಂದಂತೆ ಹತ್ಯೆಗೈದು, ಮಾರಕಾಸ್ತ್ರಗಳನ್ನು ಚರಂಡಿಯಲ್ಲಿ ಎಸೆದು ಹೋಗಿದ್ದಾರೆ.

ಕುಟುಂಬಸ್ಥರಿಗೆ ಸಾಂತ್ವನ ಹೇಳುತ್ತಿರುವ ಸಚಿವ ಹೆಚ್‌ಕೆ ಪಾಟೀಲ್‌
ಕುಟುಂಬಸ್ಥರಿಗೆ ಸಾಂತ್ವನ ಹೇಳುತ್ತಿರುವ ಸಚಿವ ಹೆಚ್‌ಕೆ ಪಾಟೀಲ್‌

ಹುಟ್ಟುಹಬ್ಬ ಆಚರಿಸಿದ್ದ ಕುಟುಂಬ: ಮೃತ ಪರಶುರಾ ಮ್ ಹಾಗೂ ಅವರ ಪತ್ನಿ, ಮಗಳು ಕೊಪ್ಪಳ ಮೂಲದವರು. ಎರಡು ದಿನಗಳ ಏ.17 ರಂದು ಮೃತ ಕಾರ್ತಿಕ್ ಬಾಕಳೆಯ ಮದುವೆ ನಿಗದಿ ಮಾಡುವ ಕಾರ್ಯಕ್ರಮ ನಡೆದಿತ್ತು. ಏ.25 ರಂದು ಸಕ್ಕರೆ ಕಾರ್ಯಕ್ಕೆ ಕುಟುಂಬಕ ಭರ್ಜರಿ ಸಿದ್ದತೆ ನಡೆಸಿತ್ತು. ಗುರುವಾರ ಮೃತ ಲಕ್ಷ್ಮೀ ಹುಟ್ಟುಹಬ್ಬದ ಇತ್ತು. ರಾತ್ರಿ ಎಲ್ಲರೂ ಹುಟ್ಟುಹಬ್ಬ ಆಚರಿಸಿ ಮಲಗಿದ್ದರು.

ಸ್ಥಳಕ್ಕೆ ಎಸ್ಪಿ ಬಿ.ಎಸ್. ನೇಮಗೌಡ, ಹೆಚ್ಚುವರಿ ಎಸ್ಪಿ ಎಂ.ಬಿ. ಸಂಕದ, ಡಿವೈಎಸ್ಪಿ, ಸಿಪಿಐ ಸೇರಿ ಹಲವು ಪೊಲೀಸ್‌ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸುತ್ತಿದ್ದು, ಶ್ವಾನದಳ, ವಿಧಿ ವಿಜ್ಞಾನ ಪ್ರಯೋಗಾಲಯದ ತಂಡಗಳು ಪರಿಶೀಲನೆ ನಡೆಸುತ್ತಿದೆ.

ಸ್ಥಳಕ್ಕೆ ಭೇಟಿ ನೀಡಿ ಪ್ರತಿಕ್ರಿಯಿಸುತ್ತಿರುವ ಎಸ್‌ಪಿ ಬಿ.ಎಸ್. ನೇಮಗೌಡ

ಮನೆಯಿಂದ ಮೃತ ದೇಹಗಳನ್ನು ಗದಗ ಜಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಶವ ಪರೀಕ್ಷೆಯ ನಂತರ ಅಂತ್ಯಕ್ರಿಯೆ ಸಕಲ ಸಿದ್ದತೆ ನಡೆಸಿದ್ದಾರೆ. ನಗರದ ರೆಹಮತ್ ನಗರದ ಮುಕ್ತಿಧಾಮದಲ್ಲಿ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ಮಾಡಲಾಗಿದೆ. ಪರಶುರಾಮ್ ಹಾಗೂ ಕುಟುಂಬಸ್ಥರ ಮೃತದೇಹ ಕೊಪ್ಪಳಕ್ಕೆ ರವಾನೆ ಮಾಡುವ ಸಾಧ್ಯತೆ ಇದೆ. ಆದರೆ ಕಾರ್ತಿಕ್ ಬಾಕಳೆ ಶವ ಮಾತ್ರ ಗದಗ ಮುಕ್ತಿಧಾಮದಲ್ಲಿ ಸಾಯಂಕಾಲ 4 ಗಂಟೆ ನಂತರ ಅಂತ್ಯಕ್ರಿಯೆ ನಡೆಯಲಿದೆ.

ಕೊಲೆ ಉದ್ದೇಶದಿಂದಲೇ ನುಗ್ಗಿದ್ದಾರೆ:  ಕೊಲೆ ನಡೆದ ಸ್ಥಳಕ್ಕೆ ಬೆಳಗಾವಿ ಉತ್ತರ ವಲಯದ ಐಜಿಪಿ ವಿಕಾಸಕುಮಾರ್ ವಿಕಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಪರಾಧಿಗಳ ಪತ್ತೆಗಾಗಿ ನಾಲ್ಕು ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ. ಸದ್ಯ ಸಿಕ್ಕಿರುವ ಪ್ರಾಥಮಿಕ ಮಾಹಿತಿ ಆಧಾರದ ಮೇಲೆ ವಿಭಿನ್ನ ಆಯಾಮಗಳಲ್ಲಿ ತನಿಖೆ ಮಾಡಲಾಗುವುದು. ಅಪರಾಧ ಮಾಡಿರುವುದನ್ನು ಗಮನಿಸಿದರೆ ಕಳ್ಳತನ, ದರೋಡೆಗೆ ಮನೆಗೆ ನುಗ್ಗಿಲ್ಲ. ಕೊಲೆ ಮಾಡುವ ಉದ್ದೇಶಕ್ಕೆ ಬಂದಿರುವುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ. ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಆರೋಪಿಗಳನ್ನು ಶೀಘ್ರವೇ ವಶಕ್ಕೆ ಪಡೆಯಲಾಗುವುದು ಎಂದು ಐಜಿಪಿ ವಿಕಾಸಕುಮಾರ್ ಹೇಳಿದರು.

ಮಾಧ್ಯಮಗಳಿಗೆ ಎಸ್‌ಪಿ ಬಿ.ಎಸ್. ನೇಮಗೌಡ ಪ್ರತಿಕ್ರಿಯೆ ನೀಡಿ, ಕುಟುಂಬಸ್ಥರು ಹೇಳುವ ಪ್ರಕಾರ ಮಧ್ಯರಾತ್ರಿ 2 ರಿಂದ 3 ಗಂಟೆಗೆ ಈ ಕೃತ್ಯ ನಡೆದಿದೆ. ಮಾರಕಾಸ್ತ್ರಗಳಿಂದ ಹತ್ಯೆ ಮಾಡಿರುವುದು ಕಂಡು ಬರುತ್ತಿದೆ. ಕುಟುಂಬಸ್ಥರು ಹೇಳುವ ಪ್ರಕಾರ ರಾತ್ರಿ ಮನೆಗ ಬಾಗಿಲು ಬಡಿದರೂ ತೆರೆಯಲಿಲ್ಲ. ಆದರೆ ಮೇಲುಗಡೆ ಬಂದು ನೋಡಿದಾಗ 2 ರೂಮಿನಲ್ಲಿ ಹತ್ಯೆ ಆಗಿತ್ತು. ಈ ಬಗ್ಗೆ ಪರಿಶೀಲನೆ ನಡೆಸಿದ್ದೇವೆ. ಹಂತಕರು ಟೆರೇಸ್‌ನಿಂದ ಬಂದಿದ್ದಾರೆ ಎನ್ನಲಾಗುತ್ತಿದ್ದು ಪರಿಶೀಲನೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ ಪಾಟೀಲ್‌ ಸ್ಥಳಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

 

Share This Article