ಆಟೋಗೆ ಬಸ್ ಡಿಕ್ಕಿ -ಚಾಲಕ ಸೇರಿ ಶಾಲೆಗೆ ಹೋಗ್ತಿದ್ದ ನಾಲ್ಕು ವಿದ್ಯಾರ್ಥಿಗಳ ದಾರುಣ ಸಾವು

Public TV
1 Min Read

ಅಮರಾವತಿ: ಶಾಲಾ ಮಕ್ಕಳನ್ನು ಕೊಂಡೊಯ್ಯುತ್ತಿದ್ದ ಆಟೋ ರಿಕ್ಷಾಗೆ ಸರ್ಕಾರಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕ ಸೇರಿದಂತೆ ನಾಲ್ಕು ಮಂದಿ ಶಾಲಾ ವಿದ್ಯಾರ್ಥಿಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ರೇಪಾಡು ಗ್ರಾಮ ಬಳಿ ನಡೆದಿದೆ.

ಅಪಘಾತದಲ್ಲಿ ಮೃತಪಟ್ಟ ಎಲ್ಲಾ ವಿದ್ಯಾರ್ಥಿಗಳು ವೇಮಾವರಂ ಗ್ರಾಮದ ನಿವಾಸಿಗಳಾಗಿದ್ದು, ಗಾಯತ್ರಿ, ರೇಣುಕಾ, ಶೈಲಜಾ, ಕಾರ್ತಿಕ್ ರೆಡ್ಡಿ ಹಾಗೂ ಚಾಲಕ ಧನ್‍ರಾಜ್ ಎಂದು ಗುರುತಿಸಲಾಗಿದೆ. ಅಲ್ಲದೇ ಆಟೋದಲ್ಲಿದ್ದ ಇತರೇ ಮೂವರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶ್ರೀಶೈಲಂ ಮಾರ್ಗವಾಗಿ ತೆರಳುತ್ತಿದ್ದ ಬಸ್, ಆಟೋ ರಿಕ್ಷಾಗೆ ಡಿಕ್ಕಿ ಹೊಡೆದಿದೆ. ಗುರುವಾರ ಬೆಳಗ್ಗೆ ಅಧಿಕ ಮಂಜು ಇದ್ದ ವೇಳೆ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆ ಕುರಿತು ವಿಧಾನಸಭಾ ಸ್ಪೀಕರ್ ಶಿವಪ್ರಸಾದ್ ರಾವ್, ಮಾನವ ಸಂಪನ್ಮೂಲ ಸಚಿವ ಗಂಟಾ ಶ್ರೀನಿವಾಸ ರಾವ್ ಮತ್ತು ಆರೋಗ್ಯ ಸಚಿವ ಶ್ರೀನಿವಾಸ್ ಸಂತಾಪವನ್ನು ವ್ಯಕ್ತಪಡಿಸಿದ್ದು, ಸಚಿವ ಶ್ರೀನಿವಾಸ್ ಗಾಯಗೊಂಡ ವಿದ್ಯಾರ್ಥಿಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ವಹಿಸಿಕೊಳ್ಳಲಿದೆ ಎಂದು ತಿಳಿಸಿದ್ದಾರೆ.

ಅಪಘಾತ ನಡೆದ ಬಳಿಕ ಬಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಚಾಲಕನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಅಪಘಾತ ನಡೆದ ಸ್ಥಳಕ್ಕೆ ಗುಂಟೂರು ಸಾರಿಗೆ ಇಲಾಖೆಯ ಸ್ಥಳೀಯ ಮ್ಯಾನೇಜರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *