ನೀವು ಬೇಕಾದರೆ ಮುನಿಯಪ್ಪರನ್ನು ಲವ್ ಮಾಡಿ- ರಮೇಶ್ ಕುಮಾರ್

Public TV
2 Min Read

ಬೆಂಗಳೂರು: ಎಚ್. ಮುನಿಯಪ್ಪರನ್ನು ನೀವು ಬೇಕಾದರೆ ಲವ್ ಮಾಡಿ. ಅವರ ಮಾತಿಗೆ ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ರಮೇಶ್ ಕುಮಾರ್ ಕಳ್ಳ ಎಂದು ಮುನಿಯಪ್ಪ ಗರಂ ಆದ ವಿಚಾರಕ್ಕೆ ಪ್ರತಿಕ್ರಿಯಿಸಿ, ಹೌದು ನಾನು ಕಳ್ಳನೇ. ಅವರ ಹೇಳಿಕೆಗಳು, ಆರೋಪಗಳ ಬಗ್ಗೆ ನಾನು ಪ್ರತಿಕ್ರಿಯೆ ಕೊಡಲ್ಲ. ಜನರ ಜ್ವಲಂತ ಸಮಸ್ಯೆಗಳು ಸಾಕಾಷ್ಟಿವೆ. ಎಷ್ಟು ದಿನ ಬದುಕಿರ್ತಿನೋ ಗೊತ್ತಿಲ್ಲ, ಇರುವಷ್ಟು ದಿನ ಜನರ ಕೆಲಸ ಮಾಡುತ್ತೇನೆ. ನಾನು ಕಳ್ಳನೇ, ಹೋಗಿ ದೂರು ಕೊಡಲು ಹೇಳಿ ಎಂದು ಗರಂ ಆಗಿದ್ದಾರೆ.

ಪರ್ಯಾಯ ಕೋಡೋಕೆ ಜನ ರೆಡಿ ಇದ್ದಾರೆ. ಬದಲಾವಣೆ ಮಾಡೋಕೆ ನಾವು (ರಾಜಕಾರಣಿಗಳು) ರೆಡಿ ಇಲ್ಲ. ಯಾವುದೇ ಪಕ್ಷಗಳು ತಯಾರಿಲ್ಲ. ರಾಜಕಾರಣಿಗಳಾದ ನಮಗೆ ಎರಡು ಮುಖಗಳಿವೆ. ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವ ಕುಸಿದಿದೆ. ನನ್ನ ಹೇಳಿಕೆ ಸಹಿಸದಿದ್ದರೆ ನನ್ನ ಪಾರ್ಟಿ ನನ್ನ ವಿರುದ್ಧ ಕ್ರಮ ತೆಗೆದುಕೊಳ್ಳಲಿ. ರಾಜಕೀಯ ಪಕ್ಷದೊಳಗೆ ಆಂತರಿಕ ಪ್ರಜಾಪ್ರಭುತ್ವ ಇಲ್ಲವೆಂದರೆ ಹೊರಗೆ ಜನರಿಗೆ ಹೇಗೆ ನ್ಯಾಯ ಕೊಡೋಕೆ ಆಗುತ್ತದೆ ಎಂದರು.

ಕಾಂಗ್ರೆಸ್ ಸಿಡಬ್ಲ್ಯೂಸಿ(ಕಾಂಗ್ರೆಸ್ ಕಾರ್ಯಕಾರಿ ಸಮಿತಿ) ಅತ್ಯಂತ ಸರ್ವೊಚ್ಛ ಸಮಿತಿ. ಸಿಡಬ್ಲ್ಯೂಸಿ ನಲ್ಲಿ ಚಂದ್ರಶೇಖರ್ ಹೆಚ್ಚಿನ ಮತಗಳನ್ನು ನೀಡಿ ಗೆಲ್ಲಿಸಿದರು. ಅದು ಚಂದ್ರಶೇಖರ್ ಗುಣವನ್ನ ತೋರಿಸುತ್ತದೆ. ಆದರೆ ಮಾಧ್ಯಮಗಳು ವಿಲನ್‍ರನ್ನ ಹೀರೋ ಮಾಡುತ್ತಾರೆ. ಹೀರೋಗಳನ್ನ ವಿಲನ್ ಮಾಡುತ್ತಾರೆ. ಮಾಧ್ಯಮಗಳಿಗೆ ಅದೇ ಕೆಲಸ, ಬೇರೆ ಕೆಲಸ ಇಲ್ಲ. ನಮ್ಮ ಬಗ್ಗೆ ಏನಾದ್ರೂ ಬರೆದುಕೊಳ್ಳಿ ನಂಗೇನೂ ಚಿಂತೆ ಇಲ್ಲ. ಒಂದು ದಿನ ಓದುತ್ತಾರೆ, ಮರುದಿನ ಎಳೆ ಮಕ್ಕಳು ಇರುತ್ತಾರೆ. ಏನಾಕ್ಕಾದರೂ ಬಳಸಿಕೊಳ್ತಾರೆ ಎಂದು ಇದೇ ವೇಳೆ ಮಾಧ್ಯಮಗಳ ವಿರುದ್ಧ ಕಿಡಿ ಕಾರಿದರು.

ಮುನಿಯಪ್ಪ ಏನು ಹೇಳಿದ್ದರು..?
ಇತ್ತೀಚೆಗೆ ನಗರದಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ರೋಷನ್ ಬೇಗ್ ವಿರುದ್ಧ ಕ್ರಮ ತೆಗೆದುಕೊಂಡಿದ್ದೀರಿ. ನನ್ನನ್ನು ಸೋಲಿಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮತ್ತು ತಂಡದ ವಿರುದ್ಧ ದೂರು ಕೊಟ್ಟರೂ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಮುನಿಯಪ್ಪ ಗರಂ ಆಗಿದ್ದರು. ರಮೇಶ್ ಕುಮಾರ್ ರನ್ನ ಪಕ್ಕದಲ್ಲಿ ಕೂರಿಸಿಕೊಂಡು ಮೀಟಿಂಗ್ ಮಾಡುತ್ತೀರಲ್ವ. ಪಕ್ಷದಲ್ಲಿ ಒಬ್ಬೊಬ್ಬರಿಗೆ ಒಂದು ನ್ಯಾಯನಾ ಎಂದು ಪ್ರಶ್ನಿಸಿ ದಿನೇಶ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *