ನಿಮಗ್ಯಾಕೆ ಮಂತ್ರಿ ಸ್ಥಾನ ಕೊಡ್ಬೇಕು – ಮುಸ್ಲಿಂ ಸಮುದಾಯದತ್ತ ಮಾಜಿ ಪ್ರಧಾನಿ ಗರಂ

Public TV
1 Min Read

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಮರು ವೋಟ್ ಹಾಕಿಲ್ಲ ಅಂತ ಮಾಜಿ ಪ್ರಧಾನಿ ದೇವೇ ಗೌಡ ಅವರು ದ್ವೇಷ ಸಾಧಿಸುತ್ತಿದ್ದಾರೆಯೇ ಎಂಬ ಪ್ರಶ್ನೆಯೊಂದು ಇದೀಗ ರಾಜಕೀಯ ವಲಯದಲ್ಲಿ ಎದ್ದಿದೆ.

ಹೌದು. ಜೆಡಿಎಸ್ ಕೋಟಾದಲ್ಲಿ ಮುಸ್ಲಿಮರಿಗೆ ಸಚಿವ ಸ್ಥಾನವಿಲ್ಲ. ಮುಸ್ಲಿಮರು ನಮಗೆ ವೋಟ್ ಹಾಕಿಲ್ಲ. ಅವರ ಸಮುದಾಯಕ್ಕೆ ನಾವ್ಯಾಕೆ ಸಚಿವ ಸ್ಥಾನ ಕೊಡಬೇಕು ಅಂತ ತಮ್ಮನ್ನು ಭೇಟಿಯಾದ ಮುಸ್ಲಿಂ ನಾಯಕರ ಮುಂದೆ ದೇವೇಗೌಡರು ಗರಂ ಆಗಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

ಹಾಗಿದ್ರೆ ಉದ್ಯಮಿ, ಪರಿಷತ್ ಸದಸ್ಯರಾಗಲಿರುವ ಬಿ ಎಂ ಫಾರೂಕ್‍ಗೆ ಸಚಿವ ಸ್ಥಾನ ತಪ್ಪಲಿದೆಯಾ ಎಂ ಪ್ರಶ್ನೆಯೊಂದು ಮೂಡಿದೆ. ಆದ್ರೆ ಲೋಕಸಭೆಯಲ್ಲಿ ಮುಸ್ಲಿಂ ಬೆಂಬಲ ಅಗತ್ಯವಿದೆ. ಹೀಗಿರುವಾಗ ಆ ಸಮುದಾಯಕ್ಕೆ ಸಚಿವ ಸ್ಥಾನ ಕೊಡ್ಬೇಕಾ, ಬೇಡ್ವಾ ಅನ್ನೋ ಗೊಂದಲದಲ್ಲಿದ್ದಾರೆ ಎನ್ನಲಾಗಿದೆ.

ಜೆಡಿಎಸ್‍ಗೆ ಸಚಿವ ಸಂಪುಟ ರಚನೆ ಕಗ್ಗಂಟಾಗಿದ್ದು, ಇದೀಗ ದೇವೇಗೌಡರಿಗೆ ಕೈ ಹಿಡಿದ ಸಮುದಾಯವೇ ತಲೆನೋವಾಗಿದೆ. ಒಕ್ಕಲಿಗ ಸಮುದಾಯದಲ್ಲಿ ಸಚಿವಾಕಾಂಕ್ಷಿಗಳು ಹೆಚ್ಚಿದ್ದಾರೆ. ಹಾಸನ, ಮಂಡ್ಯ, ಮೈಸೂರು ಜಿಲ್ಲೆ ಪ್ರಾತಿನಿಧ್ಯವೇ ಮಾಜಿ ಪ್ರಧಾನಿಗೆ ತಲೆ ನೋವು ತಂದಿದೆ ಎನ್ನಲಾಗಿದೆ.

ಹಾಸನದಲ್ಲಿ ನಾಲ್ಕು, ಮಂಡ್ಯ-ಮೈಸೂರಿನಲ್ಲಿ 3 ಜನ ಆಕಾಂಕ್ಷಿಗಳಿದ್ದಾರೆ. ಹೀಗಾಗಿ ಯಾರಿಗೆ ಕೋಡೋದು? ಯಾರಿಗೆ ಬಿಡೋದು ಅನ್ನೋ ಗೊಂದಲದಲ್ಲಿದ್ದಾರೆ. ಹಾಸನದಿಂದ ರೇವಣ್ಣ ಜೊತೆ ಎ.ಟಿ ರಾಮಸ್ವಾಮಿ, ಶಿವಲಿಂಗೇಗೌಡ, ಎಚ್.ಕೆ ಕುಮಾರಸ್ವಾಮಿ ಪೈಪೋಟಿ ಇದ್ದು, ಮಂಡ್ಯದಲ್ಲಿ ಪುಟ್ಟರಾಜು ಜೊತೆ ಫ್ಯಾಮಿಲಿ ಕೋಟಾದಲ್ಲಿ ಡಿಸಿ ತಮ್ಮಣ್ಣ ಲಾಬಿ ಮಾಡುತ್ತಿದ್ದಾರೆ. ಮೈಸೂರಿನಲ್ಲಿ ಜಿಟಿ ದೇವೇಗೌಡ, ಎಚ್. ವಿಶ್ವನಾಥ್ ಜೊತೆ ಸಾರಾ ಮಹೇಶ್ ಕೂಡಾ ಆಕಾಂಕ್ಷಿಯಾಗಿದ್ದಾರೆ. ಹೀಗಾಗಿ ಸಚಿವ ಸ್ಥಾನದ ಬಿಕ್ಕಟ್ಟು ಬಗೆಹರಿಸುವುದೇ ದೊಡ್ಡಗೌಡರಿಗೆ ತಲೆ ನೋವು ತಂದಿದೆ ಅಂತ ಹೇಳಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *