ಜ್ಯೋತಿಷಿಯ ಸಲಹೆ ಬಳಿಕ ದೇವೇಗೌಡರಿಂದ ಫೆ.8 ಬಜೆಟ್ ದಿನಾಂಕ ಫಿಕ್ಸ್

Public TV
2 Min Read

ಬೆಂಗಳೂರು: ಒಂದು ಕಡೆ ಬಿಜೆಪಿ ತನ್ನ ಕೊನೆ ಆಟ ಎಂಬಂತೆ ‘ಆಪರೇಷನ್ ಲೋಟಸ್ ರಾಕೆಟ್’ ಮಾಡುತ್ತಿದ್ದು, ಇತ್ತ ರಾಜ್ಯ ರಾಜಕೀಯದಲ್ಲಿ ರಥಸಪ್ತಮಿಯ ಛೂ ಮಂತ್ರ ನಡೆಯುತ್ತಿದೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ರಕ್ಷಿಸಲು ಮಾಜಿ ಪ್ರಧಾನಿ ದೇವೇಗೌಡ ಅವರು ರಥಸಪ್ತಮಿಯ ಅಸ್ತ್ರದ ಬೆನ್ನೇರಿದ್ದಾರೆ. ಆಪರೇಷನ್ ಲೋಟಸ್ ರಾಕೆಟ್ ಸದ್ದು ಜೋರಾಗುತ್ತಲೇ ಜ್ಯೋತಿಷ್ಯ ಶಾಸ್ತ್ರದಲ್ಲಿ ಹುಡುಕಾಡಿ ದಿ ಬೆಸ್ಟ್ ಡೇಯನ್ನೇ ಬಜೆಟ್ ಮಂಡನೆಗೆ ದೇವೇಗೌಡರು ನಿಗದಿ ಮಾಡಿದ್ದಾರೆ.

ಹೌದು. ಫೆಬ್ರವರಿ 8 ಶುಕ್ರವಾರ ಬಜೆಟ್ ಮಂಡನೆಗೆ ದಿನಾಂಕ ನಿಗದಿಯಾಗಿದೆ. ಶುಕ್ರವಾರ ಬಜೆಟ್ ಮಂಡನೆ ಮಾಡಿದರೆ ಕುಮಾರಸ್ವಾಮಿ ಸಿಎಂ ಸೀಟು ಭದ್ರವಾಗಿರುತ್ತದೆ. ಮಾಘಮಾಸ ಪೂರ್ವಭಾದ್ರ ನಕ್ಷತ್ರ ಕುಂಭರಾಶಿ ಜೊತೆಗೆ ಶುಭ ಶುಕ್ರವಾರ ಎಂದು ಗೌಡರ ಕುಟುಂಬದ ಆಪ್ತ ಜ್ಯೋತಿಷಿಗಳಾದ ಸೋಮಸುಂದರ ದೀಕ್ಷಿತರು ಹೇಳಿದ್ದಾರೆ. ಹೀಗಾಗಿ ಜ್ಯೋತಿಷ್ಯರ ಸಲಹೆಯ ಪ್ರಕಾರವೇ ದೇವೇಗೌಡರು ಅಂದಿನ ದಿನವೇ ಬಜೆಟ್ ಮಂಡನೆ ಫಿಕ್ಸ್ ಮಾಡಿದ್ದಾರೆ ಎಂದು ಪಬ್ಲಿಕ್ ಟಿವಿಗೆ ಮೂಲಗಳಿಂದ ತಿಳಿದು ಬಂದಿದೆ.

ಫೆಬ್ರವರಿ 8 ರಂದು 12.30ಕ್ಕೆ ಬಜೆಟ್ ಮಂಡನೆಗೆ ಮುಂದಾಗಿರುವ ಹಿಂದೆ ಸಿಕ್ರೇಟ್ ಕೂಡ ಇದೆ. ಫೆಬ್ರವರಿ 8 ಮಾಘಮಾಸದ ಆರಂಭ ರಥಸಪ್ತಮಿ ಯಾತ್ರೆಗೆ ಸೂರ್ಯ ಏಕಚಕ್ರಾಧಿಪತಿಯಾಗಿ ಹೊರಡುವ ಸಮಯ. ಈ ಸಮಯದಲ್ಲಿ ಶುಭಕಾರ್ಯ ಮಾಡಿದರೆ ಯಾವುದೇ ಅಡ್ಡಿ ಆತಂಕಗಳು ಇರುವುದಿಲ್ಲ. ಎಲ್ಲವೂ ಸಾಂಗವಾಗಿ ನೇರವೇರುತ್ತೆ ಎಂಬುದು ಜ್ಯೋತಿಷಿಗಳ ನಂಬಿಕೆಯಾಗಿದೆ. ಅಲ್ಲದೇ ಈ ದಿನದಲ್ಲಿ ಬಜೆಟ್ ಮಂಡನೆ ಮಾಡಿದರೆ ಜನರಿಗೆ ಸಮಾಧಾನಕರವಾಗಿಯೂ ಇರಲಿದೆ. ಜೊತೆಗೆ 12 ಮಾಸಗಳಲ್ಲಿ ಇದು ಒಳ್ಳೆಯ ಮಾಸ ಹಾಗೂ ಫೆಬ್ರವರಿ 8 ಉತ್ತಮ ದಿನ ಅನ್ನೋದು ಜ್ಯೋತಿಷ್ಯರ ನಂಬಿಕೆಯಾಗಿದ್ದು, ಜ್ಯೋತಿಷ್ಯರ ಸಲಹೆಯ ಮೇರೆಗೆ ದೇವೇಗೌಡರು ಈ ದಿನವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.

ಮಾಘಮಾಸ ಪೂರ್ವಭಾದ್ರ ನಕ್ಷತ್ರದ ಜೊತೆಗೆ ಶುಭ ಶುಕ್ರವಾರ, ರಾಹುಕಾಲ ಕಳೆದ ಬಳಿಕ ಸೂರ್ಯ ರಥಸಪ್ತಮಿ ಯಾತ್ರೆ ಶುರುಮಾಡುವ ಸಮಯದಲ್ಲಿಯೇ ಸಿಎಂ ಕುಮಾರಸ್ವಾಮಿ ಬಜೆಟ್ ಮಂಡನೆ ಮಾಡಲಿದ್ದಾರೆ. ರಾಜಕೀಯದಲ್ಲಿರುವವರಿಗೆ ರವಿದೆಸೆ ಬಹಳ ಮುಖ್ಯವಾಗಿದ್ದು, ಬಜೆಟ್ ಮಂಡನೆಗೆ ಈ ಸೂಕ್ತ ದಿನವನ್ನ ಆಯ್ಕೆ ಮಾಡಲಾಗಿದೆ ಎಂದು ದೇವೇಗೌಡರ ಕುಟುಂಬದ ಆಪ್ತ ಜ್ಯೋತಿಷಿ ಸೋಮಸುಂದರ ದೀಕ್ಷಿತ್ ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *