ನೆಲಮಂಗಲ ಪೊಲೀಸ್ ಠಾಣೆಗೆ ಹಾಜರಾದ ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ

Public TV
1 Min Read

ನೆಲಮಂಗಲ: ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ (Ananth Kumar Hegde) ಇಂದು ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಗೆ ಹಾಜರಾಗಿ ಮಾಹಿತಿಯನ್ನು ನೀಡಿದ್ದಾರೆ.

ಇತ್ತೀಚೆಗೆ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಬರುವ ವೇಳೆ ನೆಲಮಂಗಲ ತಾಲೂಕಿನ ಡಾಬಸ್‌ಪೇಟೆಯ ಹಳೇ ನಿಜಗಲ್ ಬಳಿ ಕಾರು ಓವರ್‌ಟೇಕ್ ವಿಚಾರದಲ್ಲಿ ಅನಂತ್ ಕುಮಾರ್ ಹೆಗಡೆ ಕಾರು ಚಾಲಕ ಹಾಗೂ ಮತ್ತೊಂದು ಕಾರಿನವರ ಜೊತೆಗೆ ಗಲಾಟೆ ನಡೆದು ಈ ವಿಚಾರದಲ್ಲಿ ಡಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ರೋಡ್ ರೇಜ್ ಪ್ರಕರಣದಲ್ಲಿ ಅನಂತ್ ಕುಮಾರ್ ಹೆಗಡೆ ಕಾರು ಚಾಲಕ ಹಾಗೂ ಗನ್‌ಮ್ಯಾನ್‌ಗೆ ನೆಲಮಂಗಲ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ ಬಳಿಕ, ಡಾಬಸ್‌ಪೇಟೆ ಪೊಲೀಸರು ಹೆಚ್ಚಿನ ಮಾಹಿತಿಗಾಗಿ ಮಾಜಿ ಸಂಸದರಿಗೆ ನೋಟಿಸ್ ನೀಡಿದ್ದರು. ಇದನ್ನೂ ಓದಿ: ರಂಭಾಪುರಿ ಶ್ರೀಗಳು ಹೇಳಿದ ಮಾತು ನಿಜ ಆಗುತ್ತೆ, ಭಗವಂತನೇ ಶ್ರೀಗಳ ಬಾಯಲ್ಲಿ ಇದನ್ನು ಹೇಳಿಸಿರಬಹುದು: ಇಕ್ಬಾಲ್ ಹುಸೇನ್

ಈ ವಿಚಾರದಲ್ಲಿ ಡಾಬಸ್‌ಪೇಟೆಗೆ ಹಾಜರಾಗಬೇಕಿದ್ದ ಅನಂತ್ ಕುಮಾರ್ ಹೆಗಡೆ ಭದ್ರತೆ ಒದಗಿಸುವ ದೃಷ್ಟಿಯಿಂದ ಡಾಬಸ್‌ಪೇಟೆ ಪೊಲೀಸರು ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸಿ ಮಾಹಿತಿ ಪಡೆದಿದ್ದಾರೆ. ಸತತ ಒಂದು ಗಂಟೆಗಳ ಕಾಲ ವಿಚಾರಣೆ ಮುಗಿಸಿ ತೆರಳಿದ ಅವರನ್ನು ಡಾಬಸ್‌ಪೇಟೆ ಇನ್ಸ್ಪೆಕ್ಟರ್ ರಾಜು ರೋಡ್ ರೇಜ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆಗೆ ಒಳಪಡಿಸಿದರು. ಆ ದಿನ ನಡೆದ ಘಟನೆಯ ಸಂಬಂಧ ಮಾಹಿತಿ, ವಿಡಿಯೋ ಸ್ಟೇಟ್ಮೆಂಟ್ ಡ್ರೈವರ್ ಹಲ್ಲೆ ಮಾಡಿದ ವಿಚಾರ ಹೇಳಿಕೆ, ಗಲಾಟೆಯಾಗ್ತಿದ್ದಂತೆ ಜನ ಹೆಚ್ಚಾಗಿದ್ದಾರೆ. ಈ ಹಿನ್ನೆಲೆ ಗನ್‌ಮ್ಯಾನ್ ಭದ್ರತೆಗೆ ನಿಂತಿದ್ದ ಎಂಬುದಾಗಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.

ಪೊಲೀಸ್ ಠಾಣೆಯಿಂದ ಹೊರ ಬಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದೆ ಅನಂತ್ ಕುಮಾರ್ ಹೆಗಡೆ ತೆರಳಿದರು. ವಕೀಲ ನಾಗೇಂದ್ರ ಹಾಗೂ ಸ್ಥಳೀಯ ತಾಲೂಕು ಬಿಜೆಪಿ ಅಧ್ಯಕ್ಷ ಜಗದೀಶ್ ಚೌಧರಿ ಇತರರು ಉಪಸ್ಥಿತರಿದ್ದರು. ಇದನ್ನೂ ಓದಿ: ಕಾಂಗ್ರೆಸ್ ಹೈಕಮಾಂಡ್ ನಮಗೆ ದೇವಸ್ಥಾನ ಇದ್ದ ಹಾಗೆ: ಡಿಕೆಶಿ

Share This Article