ಮಾಜಿ ಶಾಸಕ ಗೋಪಾಲ ಭಂಡಾರಿ ಪಂಚಭೂತಗಳಲ್ಲಿ ಲೀನ

Public TV
1 Min Read

ಉಡುಪಿ: ಹೃದಯಾಘಾತದಿಂದ ಮೃತಪಟ್ಟಿದ್ದ ಮಾಜಿ ಶಾಸಕ ಗೋಪಾಲ ಭಂಡಾರಿ (66) ಅವರ ಅಂತ್ಯ ಸಂಸ್ಕಾರ ಶುಕ್ರವಾರ ಹೆಬ್ರಿಯ ಸ್ವಗೃಹದ ಸಮೀಪದಲ್ಲಿ ನೆರವೇರಿತು.

ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯ ಸಂಸ್ಕಾರ ನಡೆಸಲಾಯಿತು. ಈ ವೇಳೆ ಮಾಜಿ ಸಿಎಂ ವೀರಪ್ಪ ಮೊಯ್ಲಿ, ಸಚಿವೆ ಜಯಮಾಲಾ, ಶಾಸಕ ಸುನೀಲ್ ಕುಮಾರ್ ಭಾಗಿಯಾಗಿದ್ದರು.

ಮಾಜಿ ಸಿಎಂ ವೀರಪ್ಪ ಮೋಯ್ಲಿ ಆಪ್ತ, ಕಾರ್ಕಳ ಕ್ಷೇತ್ರದ ಮಾಜಿ ಶಾಸಕ ಗೋಪಾಲ ಭಂಡಾರಿ ಅವರು ಬೆಂಗಳೂರಿಂದ ಮಂಗಳೂರಿಗೆ ಕೆಎಸ್‍ಆರ್ ಟಿಸಿ ವೋಲ್ವೋ ಬಸ್‍ನಲ್ಲಿ ಗುರುವಾರ ಪ್ರಯಾಣಿಸುತ್ತಿದ್ದರು. ರಾತ್ರಿ 10.40ರ ವೇಳೆಗೆ ಮಂಗಳೂರು ಬಸ್ ನಿಲ್ದಾಣ ತಲುಪಿದ ಬಳಿಕವೂ ಅವರು ಸೀಟಿನಲ್ಲೇ ನಿದ್ದೆ ಮಾಡಿದ ರೀತಿ ಕುಳಿತಿದ್ದರು. ಎಷ್ಟು ಕರೆದರೂ ಎಚ್ಚರಗೊಳ್ಳದ ಪರಿಣಾಮ ಸಿಬ್ಬಂದಿ ಬಸ್ಸಿನಲ್ಲೇ ವೆನ್ ಲಾಕ್ ಆಸ್ಪತ್ರೆಗೆ ಮೃತದೇಹವನ್ನು ಕರೆದೊಯ್ಯಲಾಗಿತ್ತು.

ಹೆಬ್ರಿ ಜಿಲ್ಲಾ ಪಂಚಾಯತ್ ಸದಸ್ಯರಾಗಿ ರಾಜಕೀಯ ಪ್ರವೇಶ ಮಾಡಿದ್ದ ಅವರು, ಯಾವುದೇ ಜಾತಿ ಬಲ, ಹಣ ಬಲ ಇಲ್ಲದೆ 1998 ಮತ್ತು 2008ರಲ್ಲಿ ಕಾರ್ಕಳದಲ್ಲಿ ಎರಡು ಬಾರಿ ಕಾಂಗ್ರೆಸ್ ಪಕ್ಷದಲ್ಲಿ ಶಾಸಕರಾಗಿದ್ದರು. ಕಳೆದ ಬಾರಿ ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ವಿರುದ್ಧ ಸೋಲು ಕಂಡಿದ್ದರು. ಒಂದು ಅವಧಿಗೆ ಹೆಬ್ರಿ ಬ್ಲಾಕ್ ಅಧ್ಯಕ್ಷರಾಗಿದ್ದರು. ಸದ್ಯ ಕೆಪಿಸಿಸಿ ಕಾರ್ಯದರ್ಶಿ ಆಗಿದ್ದರು.

ಗೋಪಾಲ ಭಂಡಾರಿ ಅವರು ಶಾಸಕರಾಗಿದ್ದಾಗಲೂ ಬಸ್ಸಿನಲ್ಲೇ ಓಡಾಡುತ್ತಿದ್ದರು. ವೆನ್‍ಲಾಕ್ ಆಸ್ಪತ್ರೆಗೆ ಮಾಜಿ ಸಿಎಂ ವೀರಪ್ಪ ಮೊಯ್ಲಿ, ಶಾಸಕ ಸುನಿಲ್ ಕುಮಾರ್, ನಗರಾಭಿವೃದ್ದಿ ಸಚಿವ ಯುಟಿ ಖಾದರ್ ಭೇಟಿ ನೀಡಿ ಅಂತಿಮ ದರ್ಶನ ಪಡೆದಿದ್ದರು. ಗೋಪಾಲ ಭಂಡಾರಿ ಅವರ ಪಾರ್ಥಿವ ಶರೀರವನ್ನು ಇಂದು ಬೆಳಗ್ಗೆ 9 ಗಂಟೆಗೆ ಹುಟ್ಟೂರು ಹೆಬ್ರಿಗೆ ತರಲಾಗಿತ್ತು. ರಾಜ್ಯದ ಹಾಗೂ ಜಿಲ್ಲೆಯ ವಿವಿಧ ಮುಖಂಡರು ಅಂತಿಮ ದರ್ಶನ ಪಡೆದರು.

Share This Article
Leave a Comment

Leave a Reply

Your email address will not be published. Required fields are marked *